ಕನ್ನಡಪ್ರಭ ವಾರ್ತೆ ತಿಪಟೂರು
ಶಿಕ್ಷಣ ಮತ್ತು ಆರೋಗ್ಯ ಯಾವಾಗಲೂ ನನ್ನ ಮೊದಲ ಆದ್ಯತೆಯಾಗಿದ್ದು, ಶಾಲಾರಂಭದ ದಿನವೇ ನಾನೂ ಹಾಜರಾಗಿ ನಿಮ್ಮೊಟ್ಟಿಗಿದ್ದೇನೆ ಎಂದು ಶಾಸಕ ಕೆ. ಷಡಕ್ಷರಿ ಹೇಳಿದರು.ನಗರದ ಸರಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ, ಮೆಗಾ ಪೋಷಕರ ಸಭೆ, ವಿದ್ಯಾರ್ಥಿಗಳಿಗೆ ಶಾಲಾ ಪುಸ್ತಕ ಹಾಗೂ ಸಮವಸ್ತ್ರ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ತಾರಾಮಣಿ ಮಾತನಾಡಿ ತಾಲೂಕಿನ ಎಲ್ಲ ಸರಕಾರಿ ಶಾಲೆಗಳು ಇಂದು ಪ್ರಾರಂಭವಾಗುತ್ತಿದ್ದು ಇಲ್ಲಿ ಶಾಸಕ ಕೆ.ಷಡಕ್ಷರಿಯವರು ಉದ್ಘಾಟನೆ ಮಾಡಿ ಶಾಲಾ ಸಮವಸ್ತ್ರ ಹಾಗೂ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ನೀಡಲಿದ್ದಾರೆ. ಶೇ.೯೦ರಷ್ಟು ಪುಸ್ತಕಗಳು ಈಗಾಗಲೇ ಎಲ್ಲಾ ಶಾಲೆಗಳನ್ನು ತಲುಪಿದ್ದು ಎಲ್ಲ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಲಾಗುತ್ತದೆ ಎಂದರು.ಪ್ರತಿವರ್ಷ ಶೈಕ್ಷಣಿಕ ವರ್ಷದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದ ಯೂನಿಫಾರಂ ಈ ವರ್ಷ ಶಾಲಾರಂಭದ ಪ್ರಥಮ ದಿನವೇ ವಿದ್ಯಾರ್ಥಿಗಳಿಗೆ ಎರಡೂ ಜೊತೆ ಯೂನಿಫಾರಂ ನೀಡಲಾಗುತ್ತಿದೆ. ಕಳೆದ ವರ್ಷದಂತೆ ಈ ವರ್ಷವೂ ವಿದ್ಯಾರ್ಥಿಗಳ ಶಿಕ್ಷಣ, ಮಕ್ಕಳ ಹಾಜರಾತಿ ಹಾಗೂ ವಿಶೇಷ ತರಗತಿಗಳತ್ತ ಮೊದಲಿನಿಂದಲೇ ಗಮನ ಹರಿಸಲಾಗುವುದು. ಈವರ್ಷ ಶೇ.೧೦೦ ಫಲಿತಾಂಶ ಪಡೆಯುವ ಗುರಿಯೊಂದಿಗೆ ಕಾರ್ಯಾರಂಭ ಮಾಡಲಾಗಿದ್ದು ಗುಣಾತ್ಮಕ ಮತ್ತು ಪರಿಣಾಮಾಣಾತ್ಮಕ ಫಲಿತಾಂಶ ಪಡೆಯುವ ಗುರಿ ಹೊಂದಲಾಗಿದೆ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ಎಂ.ಸುದರ್ಶನ್ ಮಾತನಾಡಿ ೮ನೇ ತರಗತಿಯ ಮಕ್ಕಳು ಉತ್ಸಾಹದಿಂದ ಇಂದು ಪ್ರೌಢಶಾಲೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ೯ಮತ್ತು ೧೦ನೇ ತರಗತಿಯಲ್ಲಿರುವ ಮಕ್ಕಳಿಗೆ ಶೈಕ್ಷಣಿಕವಾಗಿ ಹೆಚ್ಚು ಜವಾಬ್ದಾರಿ ಇದೆ. ಉತ್ತಮ ಫಲಿತಾಂಶ ಬರಲು ವಿದ್ಯಾರ್ಥಿಗಳು, ಶಿಕ್ಷಕರ ಜೊತೆ ಪೋಷಕರೂ ಕೈಜೋಡಿಸುವ ಅವಶ್ಯಕತೆ ಇದೆ. ಮಕ್ಕಳು ಶಾಲೆಗೆ ಗೈರಾಗದಂತೆ ನೋಡಿಕೊಳ್ಳುವುದರ ಜೊತೆಗೆ ಮನೆಯಲ್ಲಿ ಹೆಚ್ಚಿನ ಅಭ್ಯಾಸ ಮಾಡಲು ಅನುವು ಮಾಡಿಕೊಡಬೇಕು ಎಂದರು.