- ಹೊನ್ನಾಳಿಯಲ್ಲಿ ಜೆಎಂಎಫ್ಸಿ ಕೋರ್ಟ್ ನ್ಯಾಯಾಧೀಶ ಮಂಜುನಾಥ ಬಣಕಾರ್ ಮಾಹಿತಿ
- - -- ವಿಶ್ವ ಪರಿಸರ ದಿನವಾದ ಜೂ.6 ರಿಂದ ಆ.5ರವರೆಗೆ 2 ತಿಂಗಳ ಆಯೋಜನೆ, ಜಿಲ್ಲಾ-ತಾಲೂಕು ವ್ಯಾಪ್ತಿಯಲ್ಲಿ ಸೂಕ್ತ ಸ್ಥಳ ಹುಡುಕಾಟ
- 2 ಕೋಟಿ ಸಸಿ ಬೆಂಗಳೂರು ಮಹಾನಗರ ಸುತ್ತಮುತ್ತ, 3 ಕೋಟಿ ಸಸಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನೆಡುವ ಕಾರ್ಯಕ್ರಮ- ಶಿಕ್ಷಣ, ಪೊಲೀಸ್, ಅರಣ್ಯ, ಕಂದಾಯ ಇಲಾಖೆಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಆರ್ಡಿಪಿಆರ್ ಅಧಿಕಾರಿಗಳೊಂದಿಗೆ ಚರ್ಚೆ
- - -
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಸಾಮಾಜಿಕ ಗುರುತರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಸಮಿತಿ ಹಾಗೂ ಧರೆ ಫೌಂಡೇಷನ್ ಸಹಯೋಗದಲ್ಲಿ ವಿಶ್ವ ಪರಿಸರ ದಿನವಾದ ಜೂನ್ 6 ರಿಂದ ಆಗಸ್ಟ್ 5ರವರೆಗೆ 2 ತಿಂಗಳ ಕಾಲ ಸಸಿಗಳನ್ನು ನೆಡುವ ಮೂಲಕ ಅರಣ್ಯೀಕರಣ ಹಾಗೂ ಕೆರೆಗಳ ಪುನಶ್ಚೇತನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಹೊನ್ನಾಳಿ ಜೆಎಂಎಫ್ಸಿ ನ್ಯಾಯಾಲಯ ನ್ಯಾಯಾಧೀಶ ಮಂಜುನಾಥ ಬಣಕಾರ್ ಹೇಳಿದರು.ಬುಧವಾರ ಪಟ್ಟಣದ ಜೆಎಂಎಫ್ಸಿ ನ್ಯಾಯಾಲಯ ಸಭಾಂಗಣದಲ್ಲಿ ಈ ಕುರಿತು ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನೇತೃತ್ವದಲ್ಲಿ, ಜಿಲ್ಲಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿಗಳು ಅಭಿಯಾನವನ್ನು ನಡೆಸಬೇಕಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ, ಪೊಲೀಸ್, ಅರಣ್ಯ, ಕಂದಾಯ ಇಲಾಖೆಗಳು, ಮಾಲಿನ್ಯ ನಿಯಂತ್ರಣ ಮಂಡಳಿ, ಆರ್.ಡಿ.ಪಿ,ಆರ್. ಅಧಿಕಾರಿಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಈಗಾಗಲೇ ನಿಗದಿಪಡಿಸಿದಂತೆ ಕರ್ನಾಟಕದಾದ್ಯಂತ 5 ಕೋಟಿ ಸಸಿಗಳನ್ನು ನಡೆಲು ತೀರ್ಮಾನಿಸಲಾಗಿದೆ. ಇದರಲ್ಲಿ 2 ಕೋಟಿ ಸಸಿಗಳನ್ನು ಬೆಂಗಳೂರು ಮಹಾನಗರದ ಸುತ್ತಮುತ್ತಲ ಪ್ರದೇಶದಲ್ಲಿ ನೆಡಲಾಗುವುದು. ಇನ್ನುಳಿದ 3 ಕೋಟಿ ಸಸಿಗಳನ್ನು ಕರ್ನಾಟಕದ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಸಸಿಗಳನ್ನು ನೆಡುವ ಕಾರ್ಯ ಮಾಡಲಾಗುವುದು ಎಂದು ತಿಳಿಸಿದರು.ಈ ಕಾರ್ಯಕ್ರಮ ನಡೆಸಲು ಜಿಲ್ಲಾ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಸೂಕ್ತ ಸ್ಥಳಗಳನ್ನು ಮೊದಲು ಗುರುತಿಸಿಕೊಳ್ಳಬೇಕಿದೆ. ಇದಕ್ಕಾಗಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸ್ಥಳೀಯ ಸಂಘ ಸಂಸ್ಥೆಗಳನ್ನು ಸಹಕಾರ ಬಳಸಿಕೊಳ್ಳಬೇಕು. ವಾರಕ್ಕೊಮ್ಮೆ ಗೂಗಲ್ ಶೀಟ್ನಲ್ಲಿ ಅನುಷ್ಠಾನ ವರದಿ ಸಿದ್ಧಪಡಿಸಿ ಕಾನೂನು ಸೇವಾ ಪ್ರಾಧಿಕಾರ ಬೆಂಗಳೂರು ಇದಕ್ಕೆ ಇ-ಮೇಲ್ ಮಾಡಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜೆಎಂಎಫ್ಸಿ ನ್ಯಾಯಾಲಯ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಪದ್ಮಶ್ರೀ ಮನ್ನೋಳಿ, ಹೆಚ್ಚುವರಿ ನ್ಯಾಯಾಧೀಶರಾದ ಪುಣ್ಯಕೋಟಿ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಂ.ಗುಡ್ಡಪ್ಪ, ಉಪಾಧ್ಯಕ್ಷ ಶಾಂತವೀರಪ್ಪ, ಶಿಕ್ಷಣ ಇಲಾಖೆಯ ಬಿ.ಇ.ಒ. ಕೆ.ಟಿ.ನಿಂಗಪ್ಪ, ಬಿ.ಆರ್.ಸಿ. ತಿಪ್ಪೇಶಪ್ಪ, ಕಂದಾಯ ಇಲಾಖೆಯ ತಹಸೀಲ್ದಾರ್ ಕವಿರಾಜ್, ಪೊಲೀಸ್ ಇನ್ಸ್ಪೆಕ್ಟರ್ ಎಚ್.ಸುನಿಲ್ ಕುಮಾರ್, ಹೊನ್ನಾಳಿ ಅರಣ್ಯಇಲಾಖೆ ಅಧಿಕಾರಿ ಕಿಶೋರ್ ನಾಯ್ಕ, ನ್ಯಾಮತಿ ಠಾಣೆ ಪಿ.ಎಸ್.ಐ. ಶೋಭಾರಾಣಿ, ಇ.ಸಿ.ಓ. ಮುದ್ದನಗೌಡ, ಅರುಣ್ ಕುಮಾರ್ ಸೇರಿದಂತೆ ನ್ಯಾಯಾಲಯ ಸಿಬ್ಬಂದಿ ಹಾಜರಿದ್ದರು.- - -
-3ಎಚ್.ಎಲ್ಐ1:ಹೊನ್ನಾಳಿ ಜೆಎಂಎಫ್,ಸಿ. ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ ಅರಣ್ಯೀಕರಣ ಮತ್ತು ಕೆರೆ ಪುನಶ್ಚೇತನಗೊಳಿಸುವ 2 ತಿಂಗಳ ಅಭಿಯಾನ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ನ್ಯಾಯಾಧೀಶರಾದ ಮಂಜುನಾಥ ಬಣಕಾರ ಮಾತನಾಡಿದರು.