ಹಣ, ಹೆಂಡ, ಜಾತಿ ಮೇಲೆ ಮತ ಕೇಳಲ್ಲ

| Published : May 23 2024, 01:00 AM IST / Updated: May 23 2024, 01:01 AM IST

ಸಾರಾಂಶ

ಈಗಾಗಲೇ ಕ್ಷೇತ್ರದ ಎಲ್ಲೆಡೆ ಪ್ರವಾಸ ಮಾಡಿ ಬಂದಿದ್ದೇನೆ. ನನ್ನ ಪರ ಉತ್ತಮ ವಾತಾವರಣವಿದೆ. ನನ್ನ ಬಗ್ಗೆ ಮತದಾರರಲ್ಲಿ ಆತ್ಮವಿಶ್ವಾಸವಿದೆ. ನನ್ನ ಹೋರಾಟವನ್ನು ಅವರು ಗುರುತಿಸಿದ್ದಾರೆ. ಈಗಾಗಲೇ ನೌಕರರ ಸಮಸ್ಯೆಗಳ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ಹೋರಾಟದ ಹಿನ್ನೆಲೆಯಲ್ಲಿಯೇ ಮತ ಕೇಳುತ್ತೇನೆ. ನೌಕರರ ಸಮಸ್ಯೆಗಳು ನನಗೆ ಗೊತ್ತಿವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾಗಿದೆ.

* ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿಕೆ । ನನ್ನ ಪರ ಉತ್ತಮ ವಾತಾವರಣವಿದೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪದವೀಧರರ ಮತ್ತು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಿದ್ದರ ಆಧಾರದ ಮೇಲೆಯೇ ಮತ ಕೇಳುತ್ತೇನೆ ವಿನಾ ಹಣ, ಹೆಂಡ, ಜಾತಿ ಧರ್ಮದ ಮೇಲೆ ಮತ ಕೇಳುವುದಿಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕ್ಷೇತ್ರದ ಎಲ್ಲೆಡೆ ಪ್ರವಾಸ ಮಾಡಿ ಬಂದಿದ್ದೇನೆ. ನನ್ನ ಪರ ಉತ್ತಮ ವಾತಾವರಣವಿದೆ. ನನ್ನ ಬಗ್ಗೆ ಮತದಾರರಲ್ಲಿ ಆತ್ಮವಿಶ್ವಾಸವಿದೆ. ನನ್ನ ಹೋರಾಟವನ್ನು ಅವರು ಗುರುತಿಸಿದ್ದಾರೆ. ಈಗಾಗಲೇ ನೌಕರರ ಸಮಸ್ಯೆಗಳ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶ್ರಮಿಸಿದ್ದೇನೆ. ನನ್ನ ಹೋರಾಟದ ಹಿನ್ನೆಲೆಯಲ್ಲಿಯೇ ಮತ ಕೇಳುತ್ತೇನೆ ಎಂದರು.ನೌಕರರ ಸಮಸ್ಯೆಗಳು ನನಗೆ ಗೊತ್ತಿವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಬಡ್ತಿ, ವರ್ಗಾವಣೆ ಸಮಸ್ಯೆಗಳಿವೆ. ಪೊಲೀಸರ ಸಮಸ್ಯೆಗಳ ಬಗ್ಗೆಯೂ ನನಗೆ ಅರಿವಿದೆ. ಅತಿಥಿ ಉಪನ್ಯಾಸಕರ ಕಷ್ಟಗಳ ಅರಿವು ಕೂಡ ಅನುದಾನಿತ ಶಾಲಾ ಕಾಲೇಜುಗಳ ಸಮಸ್ಯೆಗಳು ಗೊತ್ತಿದೆ. 7ನೇ ವೇತನ ಆಯೋಗ ಪೂರ್ಣವಾಗಿ ಜಾರಿಯಾಗಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳ ಖಂಡಿತ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾ ವ್ಯವಸ್ಥೆಯಲ್ಲಿ ದೋಷ:

ನಾನು ಈಗಾಗಲೇ 10 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿದ್ದೇನೆ. ಎಲ್ಲಿಯೂ ವಾಮ ಮಾರ್ಗದ ಮೂಲಕ ಚುನಾವಣೆ ಮಾಡುವುದಿಲ್ಲ. ಹಣ ಖರ್ಚು ಮಾಡುವವರು ಮಾಡಲಿ ನನಗೆ ಆ ಬಗ್ಗೆ ಚಿಂತೆ ಇಲ್ಲ. ನನ್ನ ಹೋರಾಟವೇ ನನಗೆ ಸ್ಫೂರ್ತಿ ಮತ್ತು ಗೆಲುವು ತಂದು ಕೊಡುತ್ತದೆ. ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ದೋಷವಿದೆ. ಮತದಾರರ ಪಟ್ಟಿಯಲ್ಲೂ ದೋಷವಿದೆ. ಇದೆಲ್ಲ ಸರಿಯಾಗಬೇಕಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಎಂ. ರಮೇಶ್ ಶೆಟ್ಟಿ ಶಂಕರಘಟ್ಟ, ಮುಖಂಡರಾದ ಎಂ.ಶ್ರೀಕಾಂತ್, ಶಾಂತವೀರ ನಾಯಕ್, ಇಕ್ಕೇರಿ ರಮೇಶ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಜಿ.ಡಿ.ಮಂಜುನಾಥ್, ವೈ.ಎಚ್.ನಾಗರಾಜ್, ಚಾಮರಾಜ್ ಮುಂತಾದವರಿದ್ದರು. ಯಾರು ಸ್ಪರ್ಧಿಸಿದ್ರೂ ನನಗೆ ಲಾಭ-ನಷ್ಟ ಇಲ್ಲ

ಬಿಜೆಪಿಯಿಂದ ಬಂಡಾಯವಾಗಿ ರಘುಪತಿ ಭಟ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಅವರ ಮತಗಳ ತೆಗೆದುಕೊಳ್ಳುತ್ತಾರೆ. ಯಾರ ಸ್ಪರ್ಧೆಯೂ ನನಗೆ ತೊಂದರೆ ಕೊಡುವುದಿಲ್ಲ. ಬಿಜೆಪಿಯಲ್ಲಿ ಟಿಕೆಟ್ ವಂಚಿತರೆಲ್ಲ ಇದ್ದಕ್ಕಿದ್ದಂತೆ ರಾಷ್ಟ್ರಭಕ್ತರಾಗುತ್ತಾರೆ. ಈಶ್ವರಪ್ಪನವರು ಅವರನ್ನು ಬೆಂಬಲಿಸಿರುವುದು ಸಹಜವಾಗಿದೆ. ಅವರ ಸ್ಪರ್ಧೆಯಿಂದ ನನಗೆ ಯಾವ ರೀತಿಯ ಲಾಭ-ನಷ್ಟ ಆಗುವುದಿಲ್ಲ.

ಆಯನೂರು ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ

ಇಬ್ಬರು ಅಭ್ಯರ್ಥಿಗಳೂ ಕ್ರಿಯಾಶೀಲರು: ಎಂ.ರಮೇಶ್ ಶೆಟ್ಟಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ಉಸ್ತುವಾರಿಯಾಗಿ ಪಕ್ಷದ ವರಿಷ್ಠರು ನನ್ನ ನೇಮಿಸಿದ್ದಾರೆ. ಈಗಾಗಲೇ ಈ ಇಬ್ಬರ ಪರವಾಗಿ ನಾನು ಪ್ರಚಾರ ಮಾಡುತ್ತಿದ್ದೇನೆ. ಈ ಇಬ್ಬರು ಅಭ್ಯರ್ಥಿಗಳು ಗೆಲ್ಲಬೇಕಾಗಿದೆ ಎಂದು ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ಹೇಳಿದರು.

ಬುಧವಾರ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಶಿಕ್ಷಕರ ಕ್ಷೇತ್ರದಿಂದ ಕೆ.ಕೆ. ಮಂಜುನಾಥ್ ಈ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಈ ಇಬ್ಬರು ಕೂಡ ಕ್ರಿಯಾಶೀಲ ವ್ಯಕ್ತಿಗಳಾಗಿದ್ದಾರೆ. ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳ ಆಲಿಸಿದ್ದಾರೆ. ಈ ಇಬ್ಬರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.ಮನವಿ ಮೇರೆಗೆ ನಾಮಪತ್ರ ವಾಪಸ್‌:

ಶಿಕ್ಷಕರ ಕ್ಷೇತ್ರದಿಂದ ನಾನು ಸ್ಪರ್ಧಿಸಲು ಬಯಸಿ ನಾಮಪತ್ರ ಸಲ್ಲಿಸಿದ್ದೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 327 ಮತಗಳ ಅಂತರದಿಂದ ಸೋತಿದ್ದೆ. ಅಲ್ಲಿಂದ ಶಿಕ್ಷಕರ ನೋಂದಣಿ ಮಾಡಿಸುತ್ತ ಬಂದಿದ್ದೆ. ಹಾಗಾಗಿ ಸ್ಪರ್ಧಿಸಲು ಇಚ್ಚಿಸಿ ನಾಮಪತ್ರ ಸಲ್ಲಿಸಿದ್ದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಚಿವ ಮಧುಬಂಗಾರಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ನಾಯಕರ ಮನವಿ ಮೇರೆಗೆ ನನ್ನ ನಾಮಪತ್ರ ವಾಪಸ್‌ ತೆಗೆದುಕೊಂಡಿದ್ದೇನೆ ಎಂದರು.

ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ರಂಗಸ್ವಾಮಿ ಮಾತನಾಡಿ, ನಾನು ಕೂಡ ಕಾಂಗ್ರೆಸ್ ಪಕ್ಷದಿಂದ ಆಕಾಂಕ್ಷಿಯಾಗಿದ್ದೆ ಆದರೆ ಎಲ್ಲಾ ಹಿರಿಯರ ಮತ್ತು ನಾಯಕರ ಮಾತಿಗೆ ಬೆಲೆಕೊಟ್ಟು ನಾಮಪತ್ರ ವಾಪಸ್‌ ಪಡೆದು ಇದೀಗ ಈ ಇಬ್ಬರು ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ. ಅವರ ಗೆಲುವು ಖಚಿತ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಆಯನೂರು ಮಂಜುನಾಥ್, ಕೆ.ಪಿ.ಸಿ.ಸಿ. ಸದಸ್ಯ ವೈ.ಎಚ್.ನಾಗರಾಜ್, ಮುಖಂಡರಾದ ಎಂ.ಶ್ರೀಕಾಂತ್, ಶಾಂತವೀರ ನಾಯಕ್, ಇಕ್ಕೇರಿ ರಮೇಶ್, ಜಿ.ಪದ್ಮನಾಭ್, ಶಿ.ಜು.ಪಾಶ, ಜಿ.ಡಿ.ಮಂಜುನಾಥ್,ಚಾಮರಾಜ್ ಮುಂತಾದವರಿದ್ದರು.

ಹಳೆ ಪಿಂಚಣಿ ವ್ಯವಸ್ಥೆ ಜಾರಿಗಾಗಿ ಶ್ರಮ

ಆಯನೂರು ಮಂಜುನಾಥ್ ಆಡಳಿತದ ಪಕ್ಷದಲ್ಲಿದ್ದರು ಕೂಡ ಕಳೆದ ಬಾರಿ ಪದವೀಧರರ ಮತ್ತು ಸರ್ಕಾರಿ ನೌಕರರ ಕಾರ್ಮಿಕರ ಪರವಾಗಿ ಧ್ವನಿಯೆತ್ತಿದವರು. ಸಭಾತ್ಯಾಗವನ್ನು ಮಾಡಿದವರು. ಮುಖ್ಯವಾಗಿ ಹಳೆ ಪಿಂಚಣಿ ವ್ಯವಸ್ಥೆ ಜಾರಿಗಾಗಿ ಶ್ರಮಿಸುತ್ತಿದ್ದಾರೆ. ಹಾಗೆಯೇ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಕೆ.ಕೆ. ಮಂಜುನಾಥ್‍ರಿಗೂ ಶಿಕ್ಷಕರ ಸಮಸ್ಯೆಗಳ ಬಗ್ಗೆ ಅರಿವಿದೆ. ಜೊತೆಗೆ ಕಾಂಗ್ರೆಸ್ ಪಕ್ಷ ಈಗಾಗಲೇ ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ. ಈ ದೃಷ್ಟಿಯಿಂದಲೂ ಈ ಇಬ್ಬರ ಗೆಲ್ಲಿಸಬೇಕು ಎಂದು ರಮೇಶ್ ಶೆಟ್ಟಿ ಮನವಿ ಮಾಡಿದರು.