ಸಾರಾಂಶ
ಬೆಳಗ್ಗೆ ಕಚೇರಿ ತೆರೆಯುವ ಮೊದಲೇ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಆರಂಭಿಸಿದ ಜನರು ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಿದ ಬಳಿಕವಷ್ಟೇ ಕಚೇರಿಯ ಬಾಗಿಲು ತೆರೆಯಲು ಅವಕಾಶ ನೀಡುವುದಾಗಿ ಹೇಳಿ ಪ್ರತಿಭಟನೆ ಮುಂದುವರಿಸಿದರು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಮಳೆಗಾಲದಲ್ಲೂ ನೀರಿಗಾಗಿ ಪ್ರತಿಭಟನೆ ಮಾಡಬೇಕಾದ ಅನಿವಾರ್ಯತೆ ಚಾರ್ಮಾಡಿಯ ಗ್ರಾಮವೊಂದರಲ್ಲಿ ಸೃಷ್ಟಿಯಾಗಿದೆ.ಚಾರ್ಮಾಡಿ ಗ್ರಾಮ ಪಂಚಾಯಿತಿಯ ಬೀಟಿಗೆ ಎಂಬ ಗ್ರಾಮದಲ್ಲಿ ಹಲವು ಮನೆಗಳಿಗೆ ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಸ್ಥಗಿತಗೊಂಡಿದೆ. ನೀರಿಲ್ಲದೆ ಸಮಸ್ಯೆ ಎದುರಿಸುತ್ತಿರುವ ಇಲ್ಲಿನ ನಿವಾಸಿಗಳು, ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿ ಗುರುವಾರ ಬೆಳಗ್ಗೆ ಚಾರ್ಮಾಡಿ ಗ್ರಾ.ಪಂ. ಎದುರು ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಕಚೇರಿ ತೆರೆಯುವ ಮೊದಲೇ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಆರಂಭಿಸಿದ ಜನರು ತಮ್ಮ ಸಮಸ್ಯೆಗೆ ಪರಿಹಾರ ಒದಗಿಸಿದ ಬಳಿಕವಷ್ಟೇ ಕಚೇರಿಯ ಬಾಗಿಲು ತೆರೆಯಲು ಅವಕಾಶ ನೀಡುವುದಾಗಿ ಹೇಳಿ ಪ್ರತಿಭಟನೆ ಮುಂದುವರಿಸಿದರು.ಸ್ಥಳಕ್ಕೆ ಆಗಮಿಸಿದ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬೋರ್ ಹಾಳಾಗಿದೆ ಪಂಪ್ ಹಾಳಾಗಿದೆ ಎಂದು ಹೇಳಿ ಹತ್ತು ದಿನಗಳಾಯಿತು ಇನ್ನೂ ಸರಿಪಡಿಸಿಲ್ಲ ನಾವು ಮಳೆ ನೀರು ಕುಡಿಯಬೇಕಾದ ಸ್ಥಿತಿಯಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.