ಕನ್ನಡಪ್ರಭ ವಾರ್ತೆ ಬೆಳಗಾವಿಅಂಚೆ ನೌಕರರ ವಿವಿಧ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭರವಸೆ ನೀಡಿದರು.

ನಗರದ ನೆಹರು ನಗರದಲ್ಲಿರುವ ರಾಮದೇವ ಹೊಟೇಲ್‌ ಹಿಂಭಾಗದ ಕನ್ನಡ ಭವನದಲ್ಲಿ ಭಾನುವಾರ ನಡೆದ ಅಖಿಲ ಭಾರತ ಅಂಚೆ ನೌಕರರ ಸಂಘ ಹಾಗೂ ಗ್ರಾಮೀಣ ಅಂಚೆ ನೌಕರರ ಸಂಘಗಳ 33ನೇ ಜಂಟಿ ದ್ವೈವಾರ್ಷಿಕ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು. ಬ್ರಿಟಿಷರ ಕಾಲದಿಂದಲೂ ಅಂಚೆ ಇಲಾಖೆ ದೇಶಕ್ಕೆ ಅಪಾರ ಸೇವೆ ಸಲ್ಲಿಸುತ್ತಿದ್ದು, ಅಂಚೆ ನೌಕರರು ದೇಶದ ಜೀವನಾಡಿಯಾಗಿದ್ದಾರೆ. ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸರ್ಕಾರದ ವಿವಿಧ ಯೋಜನೆಗಳು, ಉಳಿತಾಯ ಯೋಜನೆಗಳು ಹಾಗೂ ಸೇವೆಗಳನ್ನು ಮನೆ-ಮನೆಗೆ ತಲುಪಿಸುವಲ್ಲಿ ಅಂಚೆ ನೌಕರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ನೌಕರರ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ರಾಜ್ಯ ಸಚಿವ ಎಂ.ಎಸ್.ಅನಿಲ್ ಕುಮಾರ್ ಅವರ ಗಮನಕ್ಕೆ ತಂದು, ಪರಿಹಾರಕ್ಕೆ ಪ್ರಯತ್ನಿಸುವುದಾಗಿ ಭರವಸೆ ನೀಡಿದರು.ಎಚ್.ವಿ.ರಾಜ್‌ಕುಮಾರ್ ಮಾತನಾಡಿ, ಗುರಿ ಸಾಧನೆಯಾಗದಿದ್ದರೆ ಅಧಿಕಾರಿಗಳು ಭಾನುವಾರಗಳಲ್ಲೂ ಸಭೆಗೆ ಕರೆದು ನೋಟಿಸ್ ನೀಡುವ ಮೂಲಕ ಒತ್ತಡ ಹೇರುತ್ತಿದ್ದಾರೆ. ಈ ಸಮಸ್ಯೆಗಳ ವಿರುದ್ಧ ಜುಲೈ 14ರಂದು ಬೆಂಗಳೂರಿನಲ್ಲಿ ಸಿಹೆಚ್‌ಕ್ಯು ಹಾಗೂ ವಲಯ ಸಂಘಟನೆಯ ನೇತೃತ್ವದಲ್ಲಿ ಬೃಹತ್ ಸಭೆ ನಡೆಯಲಿದ್ದು, ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ನೌಕರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ರವಿ ಪಾಟೀಲ್ ಮಾತನಾಡಿ, ಜಿಡಿಎಸ್ ಸಿಬ್ಬಂದಿಗೆ ಬೋನಸ್ ಹಾಗೂ ವಿವಿಧ ಹುದ್ದೆಗಳಿಗೆ ಬಡ್ತಿ ದೊರೆಯುವಲ್ಲಿ ಎಐಪಿಇಯು ಸಂಘದ ಹೋರಾಟ ಪ್ರಮುಖ ಪಾತ್ರ ವಹಿಸಿದೆ. ಕೆಲಸದ ಗುರಿಗೆ ನಿಗದಿತ ಮಿತಿ ಇರಬೇಕು, ಆ ಮಿತಿಯೊಳಗೆ ಕಾರ್ಯನಿರ್ವಹಿಸಲು ನೌಕರರು ಸದಾ ಸಿದ್ಧರಾಗಿದ್ದಾರೆ ಎಂದು ಹೇಳಿದರು.ಹಿರಿಯ ಅಂಚೆ ಅಧೀಕ್ಷಕ ಬಸವರಾಜ ಎವಾಲಿಕಾರ ಹಾಗೂ ಉಪ ಅಂಚೆ ಅಧೀಕ್ಷಕ ಶ್ರೀಕಾಂತ ಮುರನಾಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಧಿವೇಶನದ ಜಂಟಿ ಅಧ್ಯಕ್ಷತೆಯನ್ನು ಧರ್ಮೇಂದ್ರ ಜ್ಯಾಯಿ, ಕಿಶೋರ ದೇಶಪಾಂಡೆ ಹಾಗೂ ರಾಮಾ ಆನಂದಾಚೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಲವು ಮಾಜಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ವಿ.ಕೃಷ್ಣಮೂರ್ತಿ, ರಾಘವೇಂದ್ರ ಹವಳೇರ, ಕೆ.ಎಸ್.ರುದ್ರೇಶ್, ಆರ್.ಬೈಲಪ್ಪ, ನವೀನಕುಮಾರ್, ಆರ್. ಮಂಜುನಾಥ್, ಮಲ್ಲಪ್ಪ ನಧಾಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.