ರಟ್ಟೀಹಳ್ಳಿ: ರಾಜ್ಯ ಕಾಂಗ್ರೆಸ್ ಸರಕಾರ ವಿದ್ಯುತ್ ವಿತರಣೆಯನ್ನು ಖಾಸಗಿಯವರಿಗೆ ನೀಡುವ ಹುನ್ನಾರ ನಡೆಸಿರುವುದು ಅತ್ಯಂತ ಖಂಡನೀಯ. ಇಂತಹ ರೈತ ವಿರೋಧಿ, ಜನ ವಿರೋಧಿ ನೀತಿಯನ್ನು ಕೈಬಿಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಜನಾಂದೋಲನ ಮೂಲಕ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಪಾಲಾಕ್ಷಗೌಡ ಪಾಟೀಲ್ ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಸರಕಾರ ಟಾಟಾ ಕಂಪನಿಗೆ ವಿದ್ಯುತ್‍ನ್ನು ಖಾಸಗಿಯವರಿಗೆ ವಿತರಣಾ ಪರವಾನಗಿ ನೀಡುತ್ತಿರುವ ಪರಿಣಾಮ ನೇರವಾಗಿ ರೈತರ ಹಾಗೂ ಬಡ ಕಾರ್ಮಿಕರ ಮೇಲೆ ಹೋರೆ ಬೀರಲಿದೆ. ಸಾವಿರಾರು ಕೋಟಿ ಮೌಲ್ಯದ ವಿತರಣಾ ಕೇಂದ್ರಗಳು, ಯಂತ್ರೋಪಕರಣ, ಜಲ ಉತ್ಪತ್ತಿ ಕೇಂದ್ರ, ಬೃಹತ್ ಮೂಲ ಸೌಕರ್ಯವಿರುವಂತಹ ಎಲ್ಲ ಯೋಜನೆಗಳನ್ನು ಖಾಸಗಿ ಕಂಪನಿಗಳಿಗೆ ನೀಡುವುದರ ಪರಿಣಾಮ ಪ್ರಸ್ತುತ ಹೆಸ್ಕಾಂ, ಬೆಸ್ಕಾಂ, ಜಸ್ಕಾಂ ಮತ್ತು ಮೆಸ್ಕಾಂ ಕಂಪನಿಗಳ ಉದ್ಯೋಗಿಗಳ ಲೈನ್‍ಮನ್, ಎಂಜಿನಿಯರ್ಸ್, ಜೂನಿಯರ್ ಎಂಜಿನಿಯರ್ಸ್ ಸೇರಿದಂತೆ ಇನ್ನುಳಿದ ವಿಭಾಗಗಳ ನೌಕರರ ಮನೆಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣ ಮಾಡ ಹೊರಟಿದೆ. ಮುಂದಿನ ದಿನಗಳಲ್ಲಿ ಇವರಿಗೆ ಉದ್ಯೋಗದ ಭದ್ರತೆ ಏನು ಎಂಬ ಪ್ರಶ್ನೆ ಮೂಡುತ್ತಿದೆ. ಕಾರಣ ನೌಕರರ ಸ್ಥಿತಿಗತಿಗಳನ್ನು ಗಂಭೀರವಾಗಿ ಯೋಚನೆ ಮಾಡಬೇಕು ಎಂದು ಮನವಿ ಮಾಡಿದರು.ರಾಜ್ಯ ಸರಕಾರ ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡ ಹೊರಟಿರುವ ಪರಿಣಾಮ ಈಗಾಗಲೇ ಬೇರೆ ರಾಜ್ಯಗಳಲ್ಲಿ ಖಾಸಗೀಕರಣ ಮಾಡಿರುವುದರಿಂದ ಗ್ರಾಹಕರಿಗೆ ಪ್ರತಿ ಯುನಿಟ್‍ಗೆ 14 ರು. ಹೊರೆ ಬೀಳುತ್ತಿದೆ. ಇಂತಹ ಜನ ವಿರೋಧಿ ನೀತಿಯನ್ನು ರಾಜ್ಯದಲ್ಲಿ ಜಾರಿ ತರಲು ಮುಂದಾಗಿದೆ. ಇದರಿಂದಾಗಿ ಬಡ ಗ್ರಾಹಕರ, ರೈತರ ಜೀವನ ನಿರ್ವಹಣೆ ಅತ್ಯಂತ ದುಸ್ತಿರವಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಒಟ್ಟಾರೆ ಸರಾಸರಿ ಪ್ರತಿ ಯುನಿಟ್‍ಗೆ 6 ರು. ಬೀಳಲಿದೆ. ಇದನ್ನೇ ಖಾಸಗಿಕರಣ ಮಾಡಿದರೆ 14 ರು. ಬೀಳಲಿದೆ. ಸರಕಾರಗಳು ಜನ ಸಾಮಾನ್ಯರನ್ನು ಕಡೆಗಣಿಸಿ ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುತ್ತಿರುವುದನ್ನು ಬಿಜೆಪಿ ಖಂಡಿಸುತ್ತಿದೆ. ಇದನ್ನೆ ಮುಂದಿಟ್ಟುಕೊಂಡು ಮುಂಬರುವ ದಿನಗಳಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ರೈತ ಮೋರ್ಚಾ ಮೂಲಕ ಜನಾಂದೋಲನ ಮಾಡುವ ಮೂಲಕ ಜನ ಜಾಗೃತಿ ಮೂಡಿಸಲಾಗುವುದು ಎಂದರು. ಪಟ್ಟಣ ಪಂಚಾಯತ್ ಸದಸ್ಯ ರವಿ ಹದಡಿ, ನಾಗರಾಜ ದ್ಯಾವಕ್ಕಳವರ, ಸಿದ್ದನಗೌಡ ಎಡಚಿ ಇದ್ದರು.