ರಸಗೊಬ್ಬರಗಳ ಅತಿಯಾದ ಬಳಕೆಯಿಂದಾಗಿ ಭೂಮಿಯ ಫಲವತ್ತತೆಯು ಹಾಳಾಗುತ್ತಿದ್ದು, ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ತಲೆಮಾರಿಗೆ ಫಲವತ್ತಾದ ಭೂಮಿಯನ್ನು ಒದಗಿಸಲು ಕಾರ್ಯೋನ್ಮುಖರಾಗುವುದು ಅವಶ್ಯಕತೆ ಇದೆ.

ನರಗುಂದ: ಆಧುನಿಕ ಕೃಷಿ ಬಹಳ ಲಾಭದಾಯಕವಾಗಿದೆ. ಹಾಗಾಗಿ ಶಿಕ್ಷಣ ಕಲಿತ ಯುವ ಸಮುದಾಯ ಕೃಷಿಯತ್ತ ಆಸಕ್ತಿ ಹೊಂದಿದರೆ ದೇಶದಲ್ಲಿ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ತಿಳಿಸಿದರು.

ತಾಲೂಕಿನ ಭೈರನಹಟ್ಟಿ ಗ್ರಾಮದ ಕಲಾ ಭವನದಲ್ಲಿ ಕೃಷಿ ಇಲಾಖೆ, ಹುಲಕೋಟಿ. ಕೃಷಿ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ 2026- 27ನೇ ಸಾಲಿನ ಆತ್ಮ ಯೋಜನೆ ಅಡಿಯಲ್ಲಿ ಖೇತ ಬಚಾವೋ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ರೈತರು ಸಾಧ್ಯವಾದಷ್ಟು ಸಾವಯವ ಕೃಷಿಯತ್ತ ಆಸಕ್ತಿ ತೋರಿಸುವುದು ಅತಿ ಅವಶ್ಯಕವಾಗಿದೆ ಎಂದರು.

ರಾಸಾಯನಿಕ ರಸಗೊಬ್ಬರಗಳ ಅತಿಯಾದ ಬಳಕೆಯಿಂದಾಗಿ ಭೂಮಿಯ ಫಲವತ್ತತೆಯು ಹಾಳಾಗುತ್ತಿದ್ದು, ಇದನ್ನು ತಡೆಯುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ತಲೆಮಾರಿಗೆ ಫಲವತ್ತಾದ ಭೂಮಿಯನ್ನು ಒದಗಿಸಲು ಕಾರ್ಯೋನ್ಮುಖರಾಗುವುದು ಅವಶ್ಯಕತೆ ಇದೆ ಎಂದರು.

ಪ್ರಸ್ತುತ ಸಂದರ್ಭದಲ್ಲಿ ಎಲ್ಲ ರೈತರು ಇಲಾಖೆಯೊಂದಿಗೆ ಸಹಕರಿಸಿ ಅಗತ್ಯಕ್ಕೆ ಅನುಗುಣವಾಗಿ ತಮಗೆ ಬೇಕಾಗಿರುವ ರಸಗೊಬ್ಬರಗಳನ್ನು ಮಾತ್ರ ಪಡೆದುಕೊಳ್ಳಬೇಕು ಮತ್ತು ಯೂರಿಯಾ ರಸಗೊಬ್ಬರವನ್ನು ಎಫ್ಐಡಿ ಮೂಲಕವೇ ಪಡೆಯಬೇಕು. ರೈತರು ಕಡ್ಡಾಯವಾಗಿ ಎಫ್ಐಡಿಯನ್ನು ಕೃಷಿ ಇಲಾಖೆಯಲ್ಲಿ ಮಾಡಿಸಬೇಕು. ಎಫ್ಐಡಿ ಮಾಡಿಸಲು ರೈತರು ಆಧಾರ್ ಕಾರ್ಡ್ ಚಾಲ್ತಿ ಇರುವ ಬ್ಯಾಂಕ್ ಖಾತೆ ಪುಸ್ತಕ ಮತ್ತ ಪಹಣಿಗಳನ್ನು ಕಡ್ಡಾಯವಾಗಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕೆಂದರು.

ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ವಿನಾಯಕ ನಿರಂಜನ ರೈತರಿಗೆ ಕೃಷಿ ಬಗ್ಗೆ ಮಾಹಿತಿ ನೀಡಿದರು.

ಕೃಷಿ ವಿಜ್ಞಾನ ಕೇಂದ್ರ ವಿಜ್ಞಾನಿ ಡಾ. ಚೇತನ ಬಾಬು ಮಾತನಾಡಿ, ಸಾವಯವ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ ಮತ್ತು ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಹೆಚ್ಚಾಗಿ ಮಣ್ಣು ರಾಸಾಯನಿಕಗಳಿಂದ ಮುಕ್ತಗೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪ ನರಸಾಪೂರ, ಸದಸ್ಯ ಈರಪ್ಪ ಐನಾಪೂರ, ನಿಂಗಪ್ಪ ದಂಡಿನ, ಬಾಪುಗೌಡ ಪಾಟೀಲ, ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಎಫ್. ಬೆಳವಟಗಿ, ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್. ಕುಲಕರ್ಣಿ, ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕ ಮಂಜುನಾಥ ಭರಮಗೌಡ್ರ, ಇಲಾಖೆಯ ಸಿಬ್ಬಂದಿಗಳಾದ ಪ್ರವೀಣ್ ಪಾಟೀಲ, ಶಿವಾಜಿ ಸಾಠೆ, ಶರತ ಪಾಟೀಲ, ಎನ್ ಆರ್ ಎಲ್ ಎಂ ಯೋಜನೆಯ ಸಿಬ್ಬಂದಿ ಮತ್ತು ಬನಹಟ್ಟಿ ಹಾಗೂ ಭೈರನಹಟ್ಟಿ ಗ್ರಾಪಂ ಕೃಷಿ ಸಖಿಯರು ಮತ್ತು ರೈತರು ಉಪಸ್ಥಿತರಿದ್ದರು.