ಯೋಗ ಮತ್ತು ಧ್ಯಾನಗಳಿಂದ ಮಾತ್ರ ಮನಷ್ಯನ ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ಸದೃಢತೆ ಸಾಧ್ಯ ಎಂದು ಪಿರಾಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥೆ ಹಾಗೂ ಪುರಸಭೆ ಸದಸ್ಯೆ ಜಿ.ಅರುಣಾದೇವಿ ಹೇಳಿದರು.
ಕಾರಟಗಿ: ಯೋಗ ಮತ್ತು ಧ್ಯಾನಗಳಿಂದ ಮಾತ್ರ ಮನಷ್ಯನ ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ಸದೃಢತೆ ಸಾಧ್ಯ ಎಂದು ಪಿರಾಮಿಡ್ ಧ್ಯಾನ ಕೇಂದ್ರದ ಮುಖ್ಯಸ್ಥೆ ಹಾಗೂ ಪುರಸಭೆ ಸದಸ್ಯೆ ಜಿ.ಅರುಣಾದೇವಿ ಹೇಳಿದರು.
ಪಟ್ಟಣದ ಪತಂಜಲಿ ಯೋಗ ಸಮಿತಿಯಿಂದ 12ನೇ ಅಂತಾರಾಷ್ಟ್ರೀ ಯ ಯೋಗ ದಿನದ ಅಂಗವಾಗಿ ಇಲ್ಲಿನ ಕೆಪಿಎಸ್ ಶಾಲೆ ಆವರಣದಲ್ಲಿ ಭಾನುವಾರದಿಂದ ಆರಂಭವಾದ 7 ದಿನಗಳ ವಿಶೇಷ ಯೋಗ ಶಿಬಿರದಲ್ಲಿ ಮಾತನಾಡಿದರು.ಯೋಗ ಮತ್ತು ಧ್ಯಾನ ಒಂದಕ್ಕೊಂದು ಆಳವಾಗಿ ಸಂಬಂಧಿಸಿರುವ ಪ್ರಾಚೀನ ಭಾರತೀಯ ಅಭ್ಯಾಸಗಳಾಗಿವೆ. ಇಂದಿನ ಜಗತ್ತಿನಲ್ಲಿ ಮನುಷ್ಯ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಹಾಯದಿಂದ ಆಳ ಸಮುದ್ರ ಮತ್ತು ಗ್ರಹಗಳ ಮೇಲೆ ಕಾಲಿಟ್ಟಿದ್ದಾನೆ. ದಿನದ 24 ಗಂಟೆಗಳ ಕಾಲ ನಿರಂತರವಾಗಿ ಕೆಲಸ, ಅಭ್ಯಾಸ ಮಾಡುತ್ತಾನೆ. ಆದರೆ, ಮಾನಸಿನ ಮತ್ತು ದೈಹಿಕ ಸ್ಥಿತಿಗತಿಗಳು ಏರಿಳಿತವಾಗದಂತೆ ಶಾಂತಿ ಮತ್ತು ಏಕಾಗ್ರತೆಯನ್ನು ಸಾಧಿಸಲು ಯೋಗ ಹಾಗೂ ಧ್ಯಾನಗಳಿಂದ ಮಾತ್ರ ಸಾಧ್ಯ ಎಂದರು.
ಆಧ್ಯಾತ್ಮಿಕ, ಮಾನಸಿಕ ಮತ್ತು ದೈಹಿಕ ಶಾಂತಿ ಸಂಯಮ ಕಾಯ್ದುಕೊಳ್ಳಲು ಸಾಧಿಸಲಾಗುವ ಉನ್ನತ ಜೀವನ ಶಿಕ್ಷಣವೇ ಯೋಗ. ಯೋಗ ಮತ್ತು ಧ್ಯಾನಕ್ಕಾಗಿ ನಾವು ಇಡೀ ದಿನ ವ್ಯಯಿಸಬೇಕಾಗಿಲ್ಲ. ಕೇವಲ ಇಚ್ಛಾಶಕ್ತಿಯಿಂದ ನಿತ್ಯ ಬೆಳಗ್ಗೆ ಒಂದು ಗಂಟೆ ಸಾಧನೆ ಮಾಡಿದರೆ ಇಡೀ ದಿನ ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯಕರವಾಗಿ ಮತ್ತು ಮಾನಸಿಕವಾಗಿ ಸ್ವಚ್ಛ ಮತ್ತು ಸ್ವಾಸ್ಥ್ಯವಾಗಿ ಇರಲು ಸಾಧ್ಯ. ವಿದೇಶಗಳಲ್ಲಿ ಇತ್ತೀಚಿಗೆ ಭಾರತದ ಯೋಗಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ವಿದೇಶಿಗರು ಮನಸ್ಸುಕೊಟ್ಟು ಭಾರತೀಯ ಪರಂಪರೆಯ ಯೋಗವನ್ನು ಕಲಿಯುತ್ತಿದ್ದಾರೆ. ಜೊತೆಗೆ ತಮ್ಮ ದೈನಂದಿನ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಂಡಿದ್ದಾರೆ. ಯೋಗ ಜತೆಗೆ ಪಿರಾಮಿಡ್ ಧ್ಯಾನವನ್ನು ಅಳವಡಿಸಿಕೊಳ್ಳಿ ಎಂದು ಅರುಣಾದೇವಿ ಹೇಳಿದರು.ಪತಂಜಲಿ ಯೋಗ ಸಮಿತಿಯ ಸಹ ರಾಜ್ಯ ಪ್ರಭಾರಿ ಹಾಗೂ ಯೋಗ ಸಾಧಕ ಸಿ.ಎಚ್. ಶರಣಪ್ಪ ಮಾತನಾಡಿ, ಅಂತರಾಷ್ಟ್ರೀಯ ಯೋಗ ದಿನದ ನಿಮಿತ್ತ ಭಾನುವಾರದಿಂದ ಏಳು ದಿನಗಳ ಕಾಲ ವಿಶೇಷ ಯೋಗ ಶಿಬಿರ ಹಮ್ಮಿಕೊಳ್ಳಲಾಗಿದೆ. ದಿನನಿತ್ಯ ವ್ಯಾಪಾರ ವಹಿವಾಟು ಜಂಜಡಗಳಲ್ಲಿ ಮುಳಗಿದ ಪಟ್ಟಣದ ಜನತೆ ತಮ್ಮ ಉತ್ತಮ ಆರೋಗ್ಯಕ್ಕಾಗಿ ಯೋಗ ಮಾಡಿ. ವ್ಯಾಪಾರಿಗಳು, ಉದ್ಯಮಿಗಳ, ವಿವಿಧ ಕ್ಷೇತ್ರದ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ ಎಂದರು.
ಉದ್ಯಮಿಗಳಾದ ಸಣ್ಣ ವೀರೇಶಪ್ಪ ಚಿನಿವಾಲ ಮತ್ತು ಕೆ. ವೀರೇಶ ಎಲ್ವಿಟಿ ಶಿಬಿರಕ್ಕೆ ಚಾಲನೆ ನೀಡಿದರು. ಈ ವೇಳೆ ಪತಂಜಲಿ ಯೋಗ ಸಮಿತಿ ಜಿಲ್ಲಾ ಮಹಿಳಾ ಪ್ರಭಾರಿ ಸಿ.ಎಚ್. ಮೀನಾಕ್ಷಿ, ತಾಲೂಕು ಪ್ರಭಾರಿ ಪ್ರಸಾದ ಚಿಟ್ಟೂರಿ, ಉದ್ಯಮಿಗಳಾದ ಶಂಬಣ್ಣ ಅರಳಿ, ವರ್ತಕ ಮಂಜುನಾಥ ಪಗಡದಿನ್ನಿ ಸೇರಿದಂತೆ ಇನ್ನಿತರರು ಇದ್ದರು.ಸುಮಾರು ಒಂದೂವರೆ ಗಂಟೆಕಾಲ ಎಲ್ಲರಿಗೂ ಯೋಗ ಆಸನಗಳ ಬಗ್ಗೆ ತರಬೇತಿ ನೀಡಲಾಯಿತು.