ಹಾನಗಲ್ಲ: ಮಹಿಳೆಯರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ‍್ಯವಾದರೆ ನಾಡಿನ ಅಭಿವೃದ್ಧಿಗೆ ಹೆಚ್ಚು ಪೂರಕವಾಗಬಲ್ಲದುದಲ್ಲದೆ, ಆರ್ಥಿಕ ಸಬಲತೆಯೂ ಇದರಿಂದ ಸಾಧ್ಯ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು. ಶನಿವಾರ ಪಟ್ಟಣದ ಲೋಯಲಾ ವಿಕಾಸ ಕೇಂದ್ರದಲ್ಲಿ ಪರಿವರ್ತನ ಕಲಿಕಾ ಕೇಂದ್ರ ಆಯೋಜಿಸಿದ ಆರೀ ಕಲೆ ತರಬೇತಿ ಕಾರ‍್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಜಾಗೃತಳಾಗಬೇಕು. ಕಲಿಕೆ ನಮ್ಮನ್ನು ಆರ್ಥಿಕ ಸಬಲತೆಗೆ ಪ್ರೋತ್ಸಾಹಿಸುತ್ತದೆ. ಹಾನಗಲ್ಲ ತಾಲೂಕಿನಲ್ಲಿ 5 ಸಾವಿರ ಮಹಿಳೆಯರಿಗೆ ಉದ್ಯೋಗಾವಕಾಶ ಕೊಡುವ ಗಾರ್ಮೆಂಟ್ ಆರಂಭ ತಾಂತ್ರಿಕ ತೊಂದರೆಯಿಂದ ತಡೆಹಿಡಿದಿದೆ. ಶೀಘ್ರ ಸಮಸ್ಯೆ ಬಗೆಹರಿದರೆ ಸ್ವಲ್ಪೇ ಅವಧಿಯಲ್ಲಿ ಗಾರ್ಮೆಂಟ್ ಆರಂಭಿಸುವ ಉದ್ದೇಶವಿದೆ ಎಂದರು. ಅಧ್ಯಕ್ಷತೆವಹಿಸಿ ಮಾತನಾಡಿದ ಲೋಯಲಾ ವಿಕಾಸ ಕೇಂದ್ರದ ನಿರ್ದೇಶಕ ವಿನ್ಸಂಟ್ ಜೇಸಸ್, ಜ್ಞಾನಕ್ಕೆ ಧರ್ಮ ಜಾತಿಯ ಕಟ್ಟಳೆ ಇಲ್ಲ. ಮಹಿಳಾ ಸಬಲೀಕರಣಕ್ಕೆ ಎಲ್ಲರೂ ಒಟ್ಟಾಗಿ ಶ್ರಮಿಸುವ ಅಗತ್ಯವಿದೆ. ಸಮಾಜವೂ ಕೂಡ ಮಹಿಳಾ ಸಬಲೀಕರಣಕ್ಕೆ ಬೆಂಬಲಿಸಬೇಕು. ಎಲ್ಲ ಸಂದರ್ಭದಲ್ಲಿ ನಮ್ಮನ್ನು ಗುರುತಿಸಿ ಪ್ರೋತ್ಸಾಹಿಸಿದವರನ್ನು ಸ್ಮರಿಸುವ ಕೆಲಸವಾಗಬೇಕು ಎಂದರು. ಮುಖ್ಯ ಅತಿಥಿಯಾಗಿ ಮಾತನಾಡಿದ ಹ್ಯುಮ್ಯಾನಿಟಿ ಫೌಂಡೇಶನ್‌ನ ಅಧ್ಯಕ್ಷೆ ನ್ಯಾಯವಾದಿ ಸ್ವಾತಿ ಮಾಳಗಿ, ಮನುಷ್ಯ ಬದಲಾದ ಕಾಲಕ್ಕೆ ಉದ್ಯೋಗ ಕಲೆಯಲ್ಲಿಯೂ ಬದಲಾವಣೆಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಬದಲಾಗಬೇಕು. ಇಂದು ಜಗತ್ತು ವೇಗವಾಗಿ ಓಡುತ್ತಿದೆ. ನಾಳೆಗಳಿಗೆ ಹೊಸ ಹೊಸ ಆಲೋಚನೆಗಳೊಂದಿಗೆ ಕೆಲಸ ಕಾರ‍್ಯಗಳು ನಮ್ಮನ್ನು ಪ್ರೋತ್ಸಾಹಿಸಿದಾಗ, ಒಳ್ಳೆಯ ಕಲೆಯನ್ನು ಕಲಿಯುವ ಮೂಲಕ ಅದನ್ನು ಆರ್ಥಿಕ ಸಬಲತೆಗೆ ಬಳಸಿಕೊಳ್ಳಬೇಕು. ನಮ್ಮ ಪರಿವರ್ತನ ಕಲಿಕಾ ಕೇಂದ್ರ ಮಹಿಳಾ ಸಬಲತೆಗೆ ಬೇಕಾಗುವ ಎಲ್ಲ ಸಹಕಾರ ನೀಡಲು ಸಿದ್ಧವಿದೆ. ಶೈಕ್ಷಣಿಕವಾಗಿ ನಾವು ಒಂದು ಹೆಜ್ಜೆ ಮುಂದೆ ನಿಂತು ಕೆಲಸ ಮಾಡುತ್ತಿದ್ದೇವೆ ಎಂದರು. ಆರೀ ಕಲೆ ತರಬೇತುದಾರರಾದ ರ‍್ವಿನ್ ಜಕ್ಕಿನಕಟ್ಟಿ, ಶೃತಿ ಮರಿಯಣ್ಣನವರ, ಪ್ರಿಯಾಂಕ ಗೊಲ್ಲರ ವೇದಿಕೆಯಲ್ಲಿದ್ದರು. ಲೋಹಿತ್ ಕಾಟಣ್ಣನವರ ಸ್ವಾಗತಿಸಿದರು. ಎಸ್.ಬಿ. ಜಯಮ್ಮ ಕಾರ‍್ಯಕ್ರಮ ನಿರೂಪಿಸಿದರು. ಸ್ವಪ್ನಾ ಕುರುಬರ ವಂದಿಸಿದರು.