ಕನ್ನಡಪ್ರಭ ವಾರ್ತೆ ಮಂಡ್ಯ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನದ ಹಕ್ಕುಗಳನ್ನು ಜನರಿಂದ ಕಸಿದು, ಪ್ರಜಾಪ್ರಭುತ್ವ ನಾಶಗೊಳಿಸುವ ಕೆಲಸ ಮಾಡುತ್ತಿದೆ ಎಂದು ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಅಭಿಪ್ರಾಯಪಟ್ಟರು.

ನಗರದ ಹೊರಹೊಲಯದಲ್ಲಿರುವ ಎಆಂಡ್‌ಎ ಸಭಾಂಗಣದಲ್ಲಿ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಆಯೋಜಿಸಿದ್ದ ಎಸ್‌ಡಿಪಿಐ ಪಕ್ಷದ ಮೈಸೂರು ವಿಭಾಗೀಯ ನಾಯಕರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು.

ದೇಶದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆಯುತ್ತಿರುವ ಸಂವಿಧಾನ ವಿರೋಧಿ ಕೆಲಸವನ್ನು ನಿಲ್ಲಿಸುವ ಪ್ರಯತ್ನವನ್ನು ಎಸ್‌ಡಿಪಿಐ ಮಾಡುತ್ತಿದೆ, ಜನರನ್ನು ಜಾಗೃತಿಗೊಳಿಸುವ ಅಭಿಯಾನ ಆರಂಭಿಸಿದೆ. ನಮ್ಮ ಪಕ್ಷ ಒಂದು ಸಮುದಾಯಕ್ಕೆ ಕೆಲಸ ಮಾಡುತ್ತಿಲ್ಲ. ದೇಶದ ಅಲ್ಪಸಂಖ್ಯಾತ ಶೋಷಿತರಿಗಾಗಿ ಕೆಲಸ ಮಾಡುತ್ತಿದೆ. ಸಂವಿಧಾನದ ಹಕ್ಕು ಸರ್ವರಿಗೂ ಸಿಗಬೇಕೆಂಬ ಉದ್ದೇಶದಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.

ಮಸೀದಿ, ದರ್ಗಾ, ಅಲ್ಪಸಂಖ್ಯಾತರ ಮನೆಗಳನ್ನು ನೋಟೀಸ್ ಹಾಗೂ ವಿಚಾರಣೆ ನಡೆಸದೆ ಧ್ವಂಸಗೊಳಿಸಲಾಗುತ್ತಿದೆ. ರಾಜಕೀಯ ದ್ವೇಷಕ್ಕಾಗಿ ಬುಲ್ಡೋಜರ್ ಬಳಕೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು ಎಂದರು.


ಎಸ್‌ಐಆರ್ ಮತಗಳ್ಳತನದ ಪ್ರಕ್ರಿಯೆ ಹೊರತು ಬೇರೇನೂ ಅಲ್ಲ. ಹೀಗಾಗಿ ಅದನ್ನು ಕೂಡಲೇ ನಿಲ್ಲಿಸಬೇಕು. ಮೊದಲು ಜನರು ಸರ್ಕಾರವನ್ನು ಚುನಾಯಿಸುತ್ತಿದ್ದರು. ಆದರೆ ಈಗ ಸರ್ಕಾರವೇ ಯಾರು ಮತ ಹಾಕಬೇಕು ಎಂದು ಆಯ್ಕೆ ಮಾಡುತ್ತಿದೆ ಎಂದು ಟೀಕಿಸಿದರು.

ಎಸ್‌ಐಆರ್‌ ವಿಚಾರದ ಗಂಭೀರತೆ ಕುರಿತು ಆರಂಭದಿಂದಲೂ ನಮ್ಮ ಪಕ್ಷ ಜನರಿಗೆ ಮಾಹಿತಿ ನೀಡುತ್ತಿದೆ. ಇದು ತಮ್ಮ ಇಷ್ಟದಂತೆ ಚುನಾವಣೆ ನಡೆಸುವ ಪ್ರಯತ್ನ. ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ತೆಗೆದವರಿಗೆ ಸರ್ಕಾರಿ ಸೌಲಭ್ಯ, ಪಾಸ್‌ಪೋರ್ಟ್‌ ನೀಡುತ್ತಿಲ್ಲ. ಎಸ್‌ಐಆರ್ ಕುರಿತು ಕೇಂದ್ರ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲದಿರುವುದು ವಿಷಾದನೀಯ. ಈ ವಿಚಾರಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಬಳಿಕ ಮಾತನಾಡಿದ ಎಸ್‌ಡಿಪಿಐ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್, ಬಡತನ ಇರುವ ದೇಶದಲ್ಲಿ ಅಕ್ಷರ ತಪ್ಪುಗಳು ಸಹಜ. ಅದನ್ನೇ ಕಾರಣವಾಗಿಟ್ಟುಕೊಂಡು ಅವರಿಗೆ ಮತದಾನದ ಹಕ್ಕು ನಿರಾಕರಿಸುತ್ತಿರುವುದು ಖಂಡನೀಯ. ಮತದಾರರ ಪಟ್ಟಿ ಪರಿಷ್ಲರಿಸಿ. ಆದರೆ ನೈಜ ಮತದಾರರನ್ನು ಕೈ ಬಿಡಬೇಡಿ. ಕೆಲಸದ ಒತ್ತಡದಿಂದ ಬಿಎಲ್‌ಓಗಳು ಪ್ರಾಣ ಬಿಡುತ್ತಿದ್ದಾರೆ. ತಂತ್ರಜ್ಞಾನ ಇರುವಾಗ ಈ ಪ್ರಕ್ರಿಯೆ, ಗೊಂದಲ ಅಗತ್ಯವೇ ಎಂದು ಪ್ರಶ್ನಿಸಿದರು.