ಸಾರಾಂಶ
ಕೊಪ್ಪಳ:
ಜಿಲ್ಲಾ ಕೇಂದ್ರ ಕೊಪ್ಪಳದಿಂದ ನೇರವಾಗಿ ಬೆಂಗಳೂರು ಹಾಗೂ ವಿಭಾಗೀಯ ಕಚೇರಿ ಇರುವ ಕಲಬುರಗಿಗೆ ಸ್ಲೀಪರ್ ಬಸ್ ಇಲ್ಲವೇ ಇಲ್ಲ.ಖಾಸಗಿ ಸ್ಲೀಪರ್ ಬಸ್ಗಳು ಓಡುತ್ತವೆ. ಆದರೆ, ಎನ್ಇಕೆಎಸ್ಆರ್ಟಿಸಿ ಬಸ್ ಓಡಿಸಲು ಅಧಿಕಾರಿಗಳಿಗೆ ಮನಸ್ಸಿಲ್ಲ. ಇದು ಖಾಸಗಿ ಬಸ್ಗಳ ಲಾಭಿಯೂ ಇರಬಹುದು. ಅಥವಾ ಸಾರಿಗೆ ಸಂಸ್ಥೆಯ ಅಧಿಕಾರಿಗಳ ನಿರ್ಲಕ್ಷ್ಯವೂ ಕಾರಣವಿರಬಹುದು ಎಂಬ ಆರೋಪ ಕೇಳಿ ಬರುತ್ತಿವೆ.
ಸಚಿವರೂ ಹೇಳಿದರೂ ಬಂದಿಲ್ಲ:ಕೊಪ್ಪಳಕ್ಕೆ ಆರು ತಿಂಗಳ ಹಿಂದೆ ಆಗಮಿಸಿದ್ದ ಸಾರಿಗೆ ಸಚಿವ ರಾಮಲಿಂಗಾರಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಿ, ಆಗ್ರಹಿಸುತ್ತಿದ್ದಂತೆ, ನಿಮಗೆ ಏನು ಬೇಕು, ಬಸ್ ತಾನೆ, ಓಡಿಸ್ತೀವಿ ಬಿಡಿ ಎಂದಿದ್ದರು. ವಾರದೊಳಗಾಗಿಯೇ ನಿಮ್ಮೂರಿನಿಂದ ಬೆಂಗಳೂರಿಗೆ ಸ್ಲೀಪರ್ ಬಸ್ ಪ್ರಾರಂಭವಾಗುತ್ತದೆ ಎಂದಿದ್ದರು. ಹೊಸ ಸ್ಲೀಪರ್ ಬಸ್ಗಳು ಬಂದಿದ್ದು, ನಿಮಗೆ ಎಷ್ಟು ಬೇಕು ಅಷ್ಟು ಕೊಡುತ್ತೇನೆ ಎಂದಿದ್ದರು. ಆದರೆ, ಅದ್ಯಾವ ಬಸ್ ಪ್ರಾರಂಭವಾಗಲೇ ಇಲ್ಲ. ಈಗ ಸಾರಿಗೆ ಸಚಿವ ರಾಮಲಿಂಗರಡ್ಡಿ ಅವರು ಮಾ. 1ರಂದು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಮರಳಿ ಸಾರಿಗೆ ಸಚಿವರು ಬಂದರೂ ಸಚಿವರು ಆದೇಶ ಮಾಡಿದ ಬಸ್ ಮಾತ್ರ ಈ ವರೆಗೂ ಬಂದಿಲ್ಲ.
ತಾಲೂಕು ಕೇಂದ್ರ ಗಂಗಾವತಿ, ಯಲಬುರ್ಗಾ ಹಾಗೂ ಕಾರಟಗಿಯಿಂದಲೂ ಬೆಂಗಳೂರಿಗೆ ಸ್ಲೀಪರ್ ಬಸ್ ಇದೆ. ಆದರೆ, ಜಿಲ್ಲಾ ಕೇಂದ್ರ ಕೊಪ್ಪಳದಿಂದ ನೇರವಾಗಿ ಬೆಂಗಳೂರಿಗೆ ಒಂದೇ ಒಂದು ಸರ್ಕಾರಿ ಬಸ್ ಇಲ್ಲ. ಆದರೆ ಖಾಸಗಿಯ ಹತ್ತಕ್ಕೂ ಹೆಚ್ಚು ಬಸ್ಗಳು ಓಡುತ್ತವೆ.ವಿಭಾಗೀಯ ಕಚೇರಿ ಕಲಬುರಗಿಯಲ್ಲಿದೆ. ಅಲ್ಲಿಗೆ ನಿತ್ಯವೂ ನಾನಾ ಕೆಲಸಕ್ಕಾಗಿ ಜನರು ಸೇರಿದಂತೆ ಅನೇಕರು ಓಡಾಡುತ್ತಾರೆ. ಆದರೆ, ಕೊಪ್ಪಳದಿಂದ ಕಲಬುರಗಿಗೂ ಸ್ಲೀಪರ್ ಬಸ್ ಓಡಿಸುತ್ತಿಲ್ಲ. ಕಲಬುರಗಿಗೆ ಹೋಗಬೇಕು ಎಂದರೆ ಗಂಗಾವತಿಗೆ ಹೋಗಿಯೇ ಹೋಗಬೇಕು.ಶಾಸಕರೇ ಇತ್ತ ನೋಡಿ:
ಸ್ವಂತ ಕಾರಿನಲ್ಲಿ ಓಡಾಡುವ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಈ ಬಸ್ನ ಸಮಸ್ಯೆಯೇ ಅರ್ಥವಾಗುತ್ತಿಲ್ಲ. ಹಲವಾರು ಬಾರಿ ತಮ್ಮದೇ ಪಕ್ಷದವರು ಮನವಿ ಸಲ್ಲಿಸಿದರು ಸಹ ಅವರು ಸ್ಪಂದಿಸುತ್ತಿಲ್ಲ. ಅಥವಾ ಇವರ ಹೇಳಿದರೂ ಸರ್ಕಾರ ಸ್ಪಂದಿಸುತ್ತಿಲ್ಲವೋ ಗೊತ್ತಿಲ್ಲ.