ಸಾರಾಂಶ
ನವಲಗುಂದ ತಾಲೂಕಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ವಿದ್ಯಾರ್ಥಿಗಳೊಂದಿಗೆ ಮಾಡಲ್ ಶಾಲೆಯಲ್ಲಿ ಸಂವಾದ ಏರ್ಪಡಿಸಲಾಗಿತ್ತು.
ಧಾರವಾಡ: ಜೀವನದಲ್ಲಿ ಬರುವ ಪ್ರತಿಯೊಂದರಲ್ಲೂ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಗೆಲ್ಲಬೇಕು. ಆದ್ದರಿಂದ ಉತ್ತಮವಾದದ್ದನ್ನು ಕಲಿಯಬೇಕು. ಪರೀಕ್ಷೆಗಳು ಸಾಮಾನ್ಯ, ಆತ್ಮವಿಶ್ವಾಸದಿಂದ ಎದುರಿಸಲು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸಲಹೆ ನೀಡಿದರು.
ನವಲಗುಂದ ತಾಲೂಕಿನ ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಹಾಗೂ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರು, ಪಾಲಕರು ಮತ್ತು ಎಸ್ಡಿಎಂಸಿ ಅಧ್ಯಕ್ಷರೊಂದಿಗೆ ಮಾಡಲ್ ಶಾಲೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು.ನವಲಗುಂದ ತಾಲೂಕಿನಲ್ಲಿ 516 ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವ ಬಗ್ಗೆ ಪ್ರಸಕ್ತ ಸಾಲಿನ ಆರಂಭದಲ್ಲಿ ತಿಳಿದುಬಂದಾಗ ವಿವಿಧ ಪರೀಕ್ಷೆ ಹಾಗೂ ಓದುವ ಬರೆಯುವ ಕ್ರಮಗಳ ಮೂಲಕ ಸುಧಾರಣೆ ತರಲಾಗಿದೆ. ಆದ್ದರಿಂದ 296 ಮಕ್ಕಳು ಸರಾಗವಾಗಿ ಓದುಬರಹ ಮಾಡುತ್ತಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೂ ಪಾಸಿಂಗ್ ಪ್ಯಾಕೆಜ್ ಹಾಗೂ ರೂಢಿ ಪರೀಕ್ಷೆಗಳ ಮೂಲಕ ಪರೀಕ್ಷೆಗೆ ಸಿದ್ಧಗೊಳಿಸಲಾಗುತ್ತಿದೆ ಎಂದರು.
ಯಾವುದೇ ವಿಷಯವಾಗಲಿ ಇಷ್ಟಪಟ್ಟು ಅಭ್ಯಾಸ ಮಾಡಿ, ಮಾಡಿದ ಅಭ್ಯಾಸವನ್ನು ಪುನಃ ಸ್ಮರಣೆ ಮಾಡಿ, ಅಂದಾಗ ಗಟ್ಟಿಯಾಗಿ ನೆನಪಿನಲ್ಲಿ ಉಳಿದು ಪರೀಕ್ಷಾ ಸಮಯದಲ್ಲಿ ಉತ್ತರ ಬರೆಯಲು ಸಹಕಾರಿಯಾಗುತ್ತದೆ ಎಂಬ ಸಲಹೆಗಳನ್ನು ಅವರು ನೀಡಿದರು. ಪರೀಕ್ಷೆ ಮುಗಿಯುವ ವರೆಗೂವಿದ್ಯಾರ್ಥಿಗಳೇ ಮೊಬೈಲ್, ಟಿವಿ ಬಳಕೆಯಿಂದ ದೂರವಿರಿ. ಪಾಲಕರಾದವರು ಮಕ್ಕಳ ವಿದ್ಯಾಭ್ಯಾಸ ಸಮಯದಲ್ಲಿ ಈ ನಿಯಮವನ್ನು ತಾವು ಪಾಲಿಸಿ ಅಲ್ಲದೆ ಪರೀಕ್ಷೆ ಭಯವನ್ನ ಹೋಗಲಾಡಿಸಲು ಮಕ್ಕಳಲ್ಲಿ ತಾವು ಕೂಡ ಧೈರ್ಯ ತುಂಬಬೇಕು ಎಂದರು.
ಡಿಡಿಪಿಐ ಎಸ್.ಎಸ್. ಕೆಳದಿಮಠ ಮಾತನಾಡಿದರು. ಸಭೆಯಲ್ಲಿ ಗುಡಿಸಾಗರ ಸರ್ಕಾರಿ ಪೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಚಿದಾನಂದ ಮುತ್ತನ್ನವರ, ಡಿ.ಎಫ್. ಮಸೂತಿ ಇದ್ದರು. ವಿಧ್ಯಾರ್ಥಿಗಳು, ಶಿಕ್ಷಕರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಮಲ್ಲಾಡ ಸ್ವಾಗತಿಸಿದರು. ತಹಸೀಲ್ದಾರ್ ಸುಧೀರ ಸಾವಕಾರ ಇದ್ದರು. ಸಮನ್ವಯ ಅಧಿಕಾರಿ ರೇಣುಕಾ ಅಮಲಜೇರಿ ನಿರೂಪಿಸಿದರು. ಶಿಕ್ಷಣ ಸಂಯೋಜಕಿ ಭಾಗಿರತಿ ಮಳಲಿ ವಂದಿಸಿದರು.