ಆಲೂರು:ವಿದ್ಯುತ್ ತಗುಲಿ ಯುವ ರೈತನೋರ್ವ ಮೃತಪಟ್ಟಿರುವ ಘಟನೆ ತಾಲೂಕಿನ ಕಸಬಾ ಹೋಬಳಿ ಹುಣಸವಳ್ಳಿ ಗ್ರಾಮದಲ್ಲಿ ಸೋಮವಾರ ನಡೆದಿದೆ ಸಂಜೆ 4ರ ಸಮಯದಲ್ಲಿ ತೆಂಗಿನ ಗಿಡಕ್ಕೆ ನೀರು ಹಾಯಿಸಲು ಮೋಟರ್ ಸ್ಟಾರ್ಟ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಗ್ರಾಮದ ಕುಪೇಂದ್ರ ಎಂಬುವರ ಮಗ ರಾಕೇಶ್ 28 ವರ್ಷ ಮೃತ ದುರ್ದೈವಿಯಾಗಿದ್ದು, ಪದೇ ಪದೇ ವಿದ್ಯುತ್ ವ್ಯತ್ಯಯವಾಗುತ್ತಿದ್ದ ಸಂದರ್ಭದಲ್ಲಿ ಮೋಟಾರ್ ಆನ್‌ ಮಾಡಿದಾಗ ವಿದ್ಯುತ್ ಪ್ರಸರಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ನಾಗರಿಕ ಹೋರಾಟ ಸಮಿತಿಯ ಅಧ್ಯಕ್ಷ ಕೆ ಎಸ್ ಮಂಜೇಗೌಡ ಮೃತ ರೈತನ ಮಗ ಅತ್ಯಂತ ಬಡ ಕುಟುಂಬದವನಾಗಿದ್ದು, ತಮಗಿದ್ದ ಅಲ್ಪ ಜಮೀನಿನಲ್ಲಿ ಹಾಕಲಾಗಿದ್ದ ತೆಂಗಿನ ಗಿಡಗಳಿಗೆ ನೀರು ಹಾಯಿಸಲು ಹೋಗಿ ಮೃತಪಟ್ಟಿದ್ದಾನೆ. ಈತನ ತಂದೆಯೂ ಸಹ ಅನಾರೋಗ್ಯ ಪೀಡಿತರಾಗಿದ್ದು ಸರ್ಕಾರದ ವತಿಯಿಂದ ಈತನ ಕುಟುಂಬಕ್ಕೆ 15 ಲಕ್ಷ ಪರಿಹಾರ ಕೊಡಬೇಕೆಂದು ಒತಾಯಿಸಿದ್ದಾರೆ.