ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಭಾರತೀ ಎಜುಕೇಶನ್ ಟ್ರಸ್ಟ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆಶಯ್ ಜಿ.ಮಧು ಅವರ 33ನೇ ಹುಟ್ಟುಹಬ್ಬದ ಅಂಗವಾಗಿ ಮದ್ದೂರು ತಾಲೂಕಿನ ಚಂದೂಪುರ ಗ್ರಾಮದ ಡಿ.ಕೆ.ಗೌಡ ಹೈಸ್ಕೂಲ್ನಲ್ಲಿ ಏ.21 ಮತ್ತು 22 ರಂದು ಉಚಿತ ಆರೋಗ್ಯ ತಪಾಸಣೆ, ಸಲಹೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ ಎಂದು ಭಾರತೀ ಕಾಲೇಜು ಟ್ರಸ್ಟಿ ಬಿ.ಎಂ.ನಂಜೇಗೌಡ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತೀ ಎಜುಕೇಶನ್ ಟ್ರಸ್ಟ್, ಭಾರತೀ ಹೆಲ್ತ್ ಸೈನ್ಸ್ ಕಾಲೇಜುಗಳು, ಅಸ್ಟರ್ ಜಿ.ಮಾದೇಗೌಡ ಆಸ್ಪತ್ರೆ ಭಾರತಿನಗರ, ಆಶಯ್ ಅಭಿಮಾನಿ ಬಳಗ, ಮಂಡ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಚಂದೂಪುರ ಸಂಯುಕ್ತಾಶ್ರಯದಲ್ಲಿ ನಡೆಯುವ ಶಿಬಿರದಲ್ಲಿ ಹಲವು ಆರೋಗ್ಯ ಸೇವೆಗಳು ಜನರಿಗೆ ಸಿಗಲಿದೆ ಎಂದರು.
ಪ್ರಾವೀಣ್ಯತೆ ಹಾಗೂ ಅನುಭವ ಹೊಂದಿದ ವೈದ್ಯರ ತಂಡಗಳು ರಕ್ತದ ಒತ್ತಡ ಪರಿಶೀಲನೆ, ಮಧುಮೇಹ (Sugar) ಪರೀಕ್ಷೆ, ಮಹಿಳಾ ಮತ್ತು ಮಕ್ಕಳ ಆರೋಗ್ಯ ಸಲಹೆ, ಕ್ಯಾನ್ಸರ್ ಪತ್ತೆ ಹಚ್ಚುವಿಕೆ ತಪಾಸಣೆ, ಕೀಲು ಮತ್ತು ಮೂಳೆ ತಜ್ಞ ವೈದ್ಯರಿಂದ ತಪಾಸಣೆ, ಜನರಲ್ ಸರ್ಜರಿ ತಜ್ಞರಿಂದ ತಪಾಸಣೆ, ದಂತ ಚಿಕಿತ್ಸಕರ ತಪಾಸಣೆ, ಮೂತ್ರ ವಿಜ್ಞಾನ ವೈದ್ಯರ ತಪಾಸಣೆ, ಯೋಗ ಮತ್ತು ನ್ಯಾಚುರೊಪತಿ ಚಿಕಿತ್ಸೆ ವೈದ್ಯರುಗಳಿಂದ ತಪಾಸಣೆ, ಫೀಸಿಯೋತೆರಪಿ ತಜ್ಞರು ತಪಾಸಣೆ, ಸಾಮಾನ್ಯ ವೈದ್ಯಕೀಯ ತಜ್ಞ ವೈದ್ಯರಿಂದ ತಪಾಸಣೆ, ನವಜಾತ ಶಿಶು ಮತ್ತು ಮಕ್ಕಳ ಆರೋಗ್ಯ ತಪಾಸಣೆ, ಶಸ್ತ್ರಚಿಕಿತ್ಸೆ ತಜ್ಞರಿಂದ ತಪಾಸಣೆ, ಕಣ್ಣಿನ ತಜ್ಞ ವೈದ್ಯರಿಂದ ತಪಾಸಣೆ ನಡೆಯಲಿದೆ ಎಂದರು.ವೈದ್ಯರ ತಪಾಸಣೆ ಜೊತೆಗೆ ಅವಶ್ಯಕ ಔಷಧಿಗಳನ್ನು ಉಚಿತ ವಿತರಣೆ ಹಾಗೂ ಅವಶ್ಯಕವಿದ್ದಲ್ಲಿ ನೇತ್ರ ಸರ್ಜರಿ ಜೊತೆಗೆ ಕನ್ನಡಕ ನೀಡಲಾಗುವುದು. ಶಿಬಿರದ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾವೇರಿ ನೀರಾವರಿ ನಿಗಮದ ನಿವೃತ್ತ ಕಾರ್ಯಪಾಲಕ ಅಭಿಯಂತರ ಹಾಗಲಹಳ್ಳಿ ಬಸವರಾಜೇಗೌಡ, ಯುವ ಮುಖಂಡರಾದ ಕಾರ್ಕಹಳ್ಳಿ ಸ್ವರೂಪ, ಮಲ್ಲೇಶ್ ಇದ್ದರು.