ಹಿರಿಯಡ್ಕ: ಮಧ್ಯಮವರ್ಗದ ಸಮಾಜಕ್ಕಾಗಿ ಈ ವಿಶಾಲವಾದ ಶ್ಯಾಮಿಲಿ ಸ್ಪ್ರಿಂಗ್ಸ್‌ನ್ನು ಅರ್ಪಿಸುತಿದ್ದೇನೆ. ಈ ಕೆಲಸ ನನಗೆ ಬಹಳ ಆತ್ಮತೃಪ್ತಿ ತಂದಿದೆ ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ, ನಾಡೋಜ ಡಾ. ಜಿ. ಶಂಕರ್ ಹೇಳಿದ್ದಾರೆ.ಅವರು ಮಂಗಳವಾರ ಇಲ್ಲಿನ ರಾಹೆಯ ಪಕ್ಕದಲ್ಲಿ ಸುಮಾರು 5 ಎಕ್ರೆ ವಿಶಾಲ ಪ್ರದೇಶದಲ್ಲಿ ನಿರ್ಮಿಸಿರುವ, ಕೋಸ್ಟಲ್ ವುಡ್ ರೆಸಾರ್ಟ್ಸ್‌ನ ಸಹಸಂಸ್ಥೆ, ಸಂಪೂರ್ಣ ಹವಾನಿಯಂತ್ರಿತ ಶ್ಯಾಮಿಲಿ ಸ್ಪ್ರಿಂಗ್ಸ್‌ - ಮಲ್ಟಿಪರ್ಪಸ್ ಸಭಾಂಗಣಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ತಾವು ಈಗಾಗಲೇ ಶ್ಯಾಮಿಲಿ ಸಮೂಹ ಸಂಸ್ಥೆಗಳ ವತಿಯಿಂದ ಉಡುಪಿ, ಬ್ರಹ್ಮಾವರಗಳಲ್ಲಿ ಅತ್ಯಾಧುನಿಕ ಸಭಾಂಗಣಗಳನ್ನು ನಿರ್ಮಿಸಿದ್ದೇನೆ, ಇದು ತಮ್ಮ 5ನೇ ಸಭಾಂಗಣ, ಇದು ಈ ಭಾಗದ ಮಧ್ಯಮವರ್ಗದವರಿಗೂ ಉಪಯೋಗವಾಗಬೇಕು ಎಂಬ ಉದ್ದೇಶದಿಂದ ನಿರ್ಮಿಸಲಾಗಿದೆ. ಇಲ್ಲಿ ಒಳಾಂಗಣ ಮತ್ತು ಹೊರಾಂಗಣ ಸಭಾ ವೇದಿಕೆಗಳಿವೆ. ದೂರದ ಊರುಗಳಿಂದ ಬಂದು ಇಲ್ಲಿ ಉಳಿದುಕೊಂಡು ಮಾಡುವ ಡೆಸ್ಟಿನೇಶನ್ ಮ್ಯಾರೇಜ್‌ಗಳಿಗಾಗಿಯೇ ವಿಶೇಷವಾಗಿ ಈ ಯೋಜನೆಯನ್ನು ರೂಪಿಸಲಾಗಿದೆ ಎಂದರು. ಡೆಸ್ಟಿನೇಶನ್ ಮದುವೆ ಮನೆಯವರು ಅತಿಥಿಗಳು ಉಳಿದುಕೊಳ್ಳುವುದಕ್ಕಾಗಿ 2 ಪ್ರತ್ಯೇಕ ವಿಲ್ಲಾ ಹೌಸ್, 30 ಡಿಲಕ್ಸ್ ರೂಮ್ ಗಳ ವ್ಯವಸ್ಥೆಯೂ ಇಲ್ಲಿದೆ. ಇಡೀ ಸಭಾಭವನವನ್ನು ಆಧುನಿಕ ತಂತ್ರಜ್ಞಾನಗಳಿಂದ ರಚಿಸಲಾಗಿದ್ದು, ರಾಯಲ್ ಲುಕ್ ನ ಪರಿಸರ, ನಿರ್ಮಾಣಕ್ಕೆ ಮೊದಲಿದ್ದ ಹಬ್ಬಲಸು, ಮಾವು, ತೆಂಗಿನಮರಗಳನ್ನು ಉಳಿಸಿಕೊಳ್ಳಲಾಗಿದ್ದು, ಪ್ರಾಕೃತಿಕ ಸೌಂದರ್ಯವೂ ತಂಪಿನ ಅನುಭವವನ್ನು ನೀಡುತ್ತಿದೆ 1000 ಮಂದಿ ಆಸೀನರಾಗುವ ಶಾನ್ವಿಕ ಕನ್ವವೆನ್ಷನ್ ಸೆಂಟರ್ ಎಂಬ ಒಳಾಂಗಣ ಸಭಾಂಗಣ, ತಾಗಿಕೊಂಡು 500 ಮಂದಿ ಕುಳಿತುಕೊಳ್ಳುವ ಊಟದ ಹಾಲ್ ಇದೆ. ಗೋಧೂಳಿ ಮದುವೆ, ನೈಟ್ ಪಾರ್ಟಿ, ಮೆಹಂದಿ ಇತ್ಯಾದಿಗಳಿಗಾಗಿಯೇ 1000ಕ್ಕೂ ಅಧಿಕ ಮಂದಿ ಆಸೀನರಾಗಬಹುದಾದ ಶ್ಯಾಮಿಲಿ ಗ್ರೀನ್ ಓಪನ್ ಗಾರ್ಡನ್ ಹೊರಾಂಗಣ ಸಭಾಂಗಣವನ್ನು ನಿರ್ಮಿಸಲಾಗಿದೆ. ನೂರಿನ್ನೂರು ಮಂದಿಯ ಸಣ್ಣ ಕಾರ್ಯಕ್ರಮಗಳಿಗಾಗಿಯೇ ಪ್ರತ್ಯೇಕ ಮಿನಿಹಾಲ್ ಕೂಡ ಇದೆ, ಈ ಎಲ್ಲ ಸಭಾಂಗಣಗಳಿಗೂ ಪ್ರತ್ಯೇಕ ವೆಜ್ ನಾನ್ ವೆಜ್‌ ಪಾಕಶಾಲೆಗಳಿವೆ, ಹೊರಗೆ ಪ್ರತ್ಯೇಕ ಬಾರ್‌ ಕೌಂಟರ್ ಕೂಡ ಲಭ್ಯಯ ಇದೆ ಎಂದವರು ವಿವರ ನೀಡಿದರು. ಕಾರ್ಪೋರೇಟ್ ಸಂಸ್ಥೆಗಳ ಕಾರ್ಯಕ್ರಮ, ಸೆಮಿನಾರ್, ಮಹಾಸಭೆ, ಬೋರ್ಡ್ ಮೀಟಿಂಗ್, ಯಕ್ಷಗಾನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೇಕಾದ ಎಲ್ಲ ರೀತಿಯ ಧ್ವನಿಬೆಳಕಿನ ಸೌಲಭ್ಯಗಳನ್ನು ಮಾಡಲಾಗಿದೆ, ಸುಮಾರು 300ರಷ್ಟು ವಾಹನಗಳ ಪಾರ್ಕಿಂಗ್‌ ಸೌಲಭ್ಯವಿದೆ, ಮಕ್ಕಳಿಗಾಗಿ ಆಟದ ಮೈದಾನ, ಈಜು ಕೋಳ ಕೂಡ ಇದೆ, ಸಭಾಭವನದ ಮುಂಭಾಗದಲ್ಲಿ ತಮ್ಮ ಆರಾಧ್ಯ ದೇವರಾದ ಗಣಪತಿಯ ಬೃಹತ್ ವಿಗ್ರಹವಿರುವ ಗುಡಿಯನ್ನೂ ನಿರ್ಮಿಸಿದ್ದು ವಿಶೇಷ ಧಾರ್ಮಿಕ ಕಳೆಯನ್ನು ನೀಡಲಾಗಿದೆ. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಸ್ವತಃ ಜಿ. ಶಂಕರ್ ಅವರು ಉಚ್ಚಿಲ ಮಹಾಲಕ್ಷ್ಮೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ರಾಘವೇಂದ್ರ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ದೀಪ ಬೆಳಗಿಸಿ ಶ್ಯಾಮಿಲಿ ಸ್ಪ್ರಿಂಗ್ಸ್‌ನ್ನು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಶಾಲಿನಿ ಶಂಕರ್, ಶ್ಯಾಮಿಲಿ ನವೀನ್, ನವೀನ್, ಬೇಬಿ ಶೆನಾಯ, ಬೇಬಿ ಶಾನ್ವಿಕ ಉಪಸ್ಥಿತರಿದ್ದರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಪ್ರಮುಖರಾದ ಆನಂದ ಕುಂದರ್, ಉದಯಕುಮಾರ್ ಶೆಟ್ಟಿ, ರಮೇಶ್ ಕಾಂಚನ್, ಡಾ. ಅವಿನಾಶ್ ಶೆಟ್ಟಿ, ಮನೋಹರ ಶೆಟ್ಟಿ, ಶಿವ ಎಸ್. ಕರ್ಕೆರ, ಜಗದೀಶ್ ಕಾಂಚನ್, ಗುರುಪ್ರಸಾದ್ ಮತ್ತಿತರರು ಆಗಮಿಸಿ ಶುಭ ಹಾರೈಸಿದರು. ಮೊದಲ 25 ವಧುವರರಿಗೆ ಉಡುಗೊರೆ: ಶ್ಯಾಮಿಲಿ ಸ್ಪ್ರಿಂಗ್ಸ್ ಉದ್ಘಾಟನೆಗೂ ಮೊದಲೇ ಇಲ್ಲಿನ ವ್ಯವಸ್ಥೆ, ಸೌಲಭ್ಯಗಳನ್ನು ಕಂಡು ಈಗಾಗಲೇ 12 ಮದುವೆಗಳು ಬುಕ್ ಆಗಿವೆ. ಏ. 12ರಂದು ಮೊದಲ ಮದುವೆ ನಡೆಯಲಿದೆ. ಮೊದಲ 25 ಮದುವೆಗಳ ವಧುವರ ಜೋಡಿಗೆ ವಿಶೇಷ ಉಡುಗೊರೆಗಳನ್ನು ನೀಡುವುದಾಗಿ ಡಾ. ಜಿ.ಶಂಕರ್ ಹೇಳಿದರು