ಗಂಗೊಳ್ಳಿ: ಮಕ್ಕಳ ಸಾಧನೆಯಿಂದ ಹೆತ್ತವರಿಗೆ ಗೌರವ ಸಿಗುವಂತಾದರೆ ಅದು ನಿಜಕ್ಕೂ ಮಕ್ಕಳು ಹೆತ್ತವರಿಗೆ ನೀಡುವಂತಹ ಅತಿ ದೊಡ್ಡ ಉಡುಗೊರೆಯಾಗಿದೆ ಎಂದು ಗಂಗೊಳ್ಳಿಯ ಉದ್ಯಮಿ ವಾಮನ ಎಸ್ ಪೈ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿಯ ಆರಂಭೋತ್ಸವ ಮತ್ತು ಅಭಿಮುಖೀಕರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಂ ಸಿ ಅಧ್ಯಕ್ಷತೆ ವಹಿಸಿದ್ದರು. ಜಿ.ಎಸ್.ವಿ. ಎಸ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕಾಶೀನಾಥ್ ಪಿ. ಪೈ ಕಾಲೇಜಿನ ಕಾರ್ಯದರ್ಶಿ ಎನ್ ಸದಾಶಿವ ನಾಯಕ್ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರತಿಭೆಗಳಾದ ಅದಿತಿ ಎಸ್‌. ಖಾರ್ವಿ ಇವರಿಂದ ಭರತನಾಟ್ಯ ಮತ್ತು ಶ್ಯಾಮ್ ಜಿ. ಎನ್. ಪೂಜಾರಿ ಅವರ ಕೊಳಲು ವಾದನ ಮತ್ತು ರಚಿತ್ ಚಂದ್ರ ಖಾರ್ವಿ ಅವರಿಂದ ತಬಲ ವಾದನ ಕಾರ್ಯಕ್ರಮ ನಡೆಯಿತು. ಉಪನ್ಯಾಸಕರಾದ ಸುಜಯೀಂದ್ರ ಹಂದೆ ಅತಿಥಿಗಳನ್ನು ಸ್ವಾಗತಿಸಿದರು ನರೇಂದ್ರ ಎಸ್. ಗಂಗೊಳ್ಳಿ ಸಿಬ್ಬಂದಿಗಳನ್ನು ಪರಿಚಯಿಸಿದರು. ಎನ್. ಸಿ. ವೆಂಕಟೇಶಮೂರ್ತಿ ಕಾಲೇಜಿನ ನೀತಿ ನಿಯಮಗಳ ಬಗ್ಗೆ ಮಾಹಿತಿ ನೀಡಿದರು. ಪ್ರಮೋದ ಪೈ ಎಂ.ಜಿ. ಕಚೇರಿ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು. ಉಪನ್ಯಾಸಕಿ ಸುಪ್ರೀತಾ ಆಚಾರ್ಯ ನಿರೂಪಿಸಿದರು. ಉಪನ್ಯಾಸಕ ಥಾಮಸ್ ಪಿ. ಎ. ವಂದಿಸಿದರು.