ಮಂಗಳೂರು: ಪ್ರಚಲಿತ ಚಾರಿಟೇಬಲ್‌ ಟ್ರಸ್ಟ್‌ ಹಾಗೂ ಲೋಬೋ ಫೌಂಡೇಶನ್‌ ಆಶ್ರಯದಲ್ಲಿ ಜುಲೈ ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ ಬಾಲಿಕಾ ಜಾಗೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ಟ್ರಸ್ಟ್‌ ಕಾರ್ಯದರ್ಶಿ ಹನಿಷಾ ಸವಾದ್‌ ತಿಳಿಸಿದರು.ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಆರೋಗ್ಯ, ಶಿಕ್ಷಣ, ಕಾನೂನು ಅರಿವು, ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಸೈಬರ್‌ ಸುರಕ್ಷತೆ ಹಾಗೂ ಜೀವನ ಕೌಶಲ್ಯಗಳ ಕುರಿತು ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದರು.ಜು. 1ರಿಂದ ಒಂದು ತಿಂಗಳ ಕಾಲ ಮಂಗಳೂರಿನ ವಿವಿಧ ಹೋಬಳಿ ಮಟ್ಟದ ಶಾಲೆಗಳಲ್ಲಿ ಕೈಗೊಳ್ಳಲಾಗುವ ಈ ಅಭಿಯಾನದಲ್ಲಿ ವೈದ್ಯರು, ಉನ್ನತ ನ್ಯಾಯವಾದಿಗಳು ಹಾಗೂ ಅನುಭವಿ ಶಿಕ್ಷಣ ತಜ್ಞರು ವಿದ್ಯಾರ್ಥಿನಿಯರೊಂದಿಗೆ ನೇರ ಸಂವಾದ ನಡೆಸಿ ಅವರಲ್ಲಿರುವ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ. ‘ಜಾಗೃತ ಹೆಣ್ಣು ಮಗು- ಸುರಕ್ಷಿತ ಸಮಾಜದ ಅಡಿಪಾಯ’ ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಈ ಅಭಿಯಾನ ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಬೆಳೆಸುವ ಜತೆಗೆ ಉತ್ತಮ ನಾಗರಿಕರಾಗಿ ಬೆಳೆಯಲು ಅಗತ್ಯವಾದ ಕಾನೂನು ಹಾಗೂ ಸಾಮಾಜಿಕ ಅರಿವು ಮೂಡಿಸುವ ಪ್ರಯತ್ನವಾಗಿದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್‌ ವಕೀಲೆ ಮಾನಸ ಹೆಗ್ಡೆ, ಲೋಬೋ ಫೌಂಡೇಶನ್‌ನ ಸಂಸ್ಥಾಪಕ ಜಾನ್‌ ವಿಲ್ಸನ್‌ ಲೋಬೋ, ಟ್ರಸ್ಟ್‌ ಸಂಸ್ಥಾಪಕ ಅಧ್ಯಕ್ಷ ಸಂಶದ್‌ ಕುಂಜತ್ತಬೈಲ್‌, ಶಿಕ್ಷಣ ತಜ್ಞೆ ಅನುರಾಧ ಶೆಟ್ಟಿ ಇದ್ದರು.