ಕನ್ನಡಪ್ರಭವಾರ್ತೆ ಕುಶಾಲನಗರ

ರೋಟರಿ ಸಂಸ್ಥೆ ಸಾಮಾಜಿಕ ಸೇವಾ ಕಾರ್ಯದೊಂದಿಗೆ ಸಮಾಜ ಸೇವೆಯಲ್ಲಿ ಮಾದರಿಯಾಗಿದೆ ಎಂದು ಹಿರಿಯ ರೋಟರಿ ಸದಸ್ಯ ಎಸ್.ಕೆ.ಸತೀಶ್ ಹೇಳಿದರು.

ಅತ್ತೂರು ಖಾಸಗಿ ರೆಸಾರ್ಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುಶಾಲನಗರ ರೋಟರಿ ಸಂಸ್ಥೆ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು 2026-27ನೇ ಸಾಲಿನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ‌ ಅವರು ಮಾತನಾಡಿದರು.

ರೋಟರಿ ಸಂಸ್ಥೆ ಈ ಸಾಲಿನಲ್ಲಿ ಕ್ಷೇತ್ರ ಶಾಸಕರ ಅನುದಾನ ಸೇರಿದಂತೆ ಸದಸ್ಯರ ಹಾಗೂ ದಾನಿಗಳ ಸಹಕಾರದಿಂದ ಸುಮಾರು 80 ಲಕ್ಷ ರು. ವೆಚ್ಚದಲ್ಲಿ ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಿದೆ. ಭುವನಗಿರಿ ಗ್ರಾಮದಲ್ಲಿರುವ ಕಸ ಸಂಗ್ರಹ ಕೇಂದ್ರದಲ್ಲಿ ರೋಟರಿ ಸಂಸ್ಥೆಯು ಹಸಿಕಸವನ್ನು ಗೊಬ್ಬರವಾಗಿ ಪರಿವರ್ತಿಸುವ ಹಸಿಕಸ ನಿರ್ವಹಣಾ ಘಟಕ ಸ್ಥಾಪನೆ ಮಾಡಿದ್ದು, ಎಸ್ಎಲ್ಎನ್ ಸಂಸ್ಥೆ ಸಿಎಸ್ಆರ್ ಫಂಡ್ ನಿಂದ 15 ಲಕ್ಷ ರು. ನೀಡಿದೆ ಎಂದು ಹೇಳಿದರು.

ಕುಶಾಲನಗರದ ಎರಡು ಶತಮಾನಗಳನ್ನು ಕಾಣುತ್ತಿರುವ ಕಾವೇರಿ ಸೇತುವೆ ಮೇಲೆ‌ ಸುಂದರ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಪಟ್ಟಣ ಸೇರಿದಂತೆ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಹಾಗೂ ಕಸ ಸಂಗ್ರಹ ಕ್ಕಾಗಿ ಬಾಟಲ್ ಮಾದರಿಯ ಕಸದ ತೊಟ್ಟಿ ಅಳವಡಿಸಲಾಗಿದೆ ಎಂದರು.


ಕಳೆದ ಸಾಲಿನ ಅಧ್ಯಕ್ಷ ಮನುಪೆಮ್ಮಯ್ಯ ಹಾಗೂ ಕಾರ್ಯದರ್ಶಿ ಮಂಜುನಾಥ್ ಅವರ ಸೇವೆ ಶ್ಲಾಘನೀಯ ಎಂದರು.

ನೂತನ ಸಹಾಯಕ ಗೌರ್ನರ್ ಎಂ.ಡಿ.ರಂಗಸ್ವಾಮಿ ಮಾತನಾಡಿ, ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಲು ರೋಟರಿ ಉತ್ತಮ ವೇದಿಕೆ ಎಂದರು.

ನಿರ್ಗಮಿತ ಅಧ್ಯಕ್ಷ ಮನುಪೆಮ್ಮಯ್ಯ ಮಾತನಾಡಿ, ರೋಟರಿ ಸಂಸ್ಥೆ ಮೂಲಕ ಜನಮಾನಸದಲ್ಲಿ ಉಳಿಯುವಂತೆ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.

ವಲಯ ಸೇನಾನಿ ಲಲಿತಾ ರಾಘವನ್, ರಾಕೇಶ್ ಪಟೇಲ್ ಮಾತನಾಡಿದರು. ಮಾಜಿ ಸಹಾಯಕ ಗೌರ್ನರ್ ಉಲ್ಲಾಸ್ ಕೃಷ್ಣ ,ಮಾಜಿ ಕಾರ್ಯದರ್ಶಿ ಎಚ್.ಪಿ.ಮಂಜುನಾಥ್ ಉಪಸ್ಥಿತರಿದ್ದರು.

ಅಧಿಕಾರ ಸ್ವೀಕಾರ: ನೂತನ ಅಧ್ಯಕ್ಷರಾಗಿ ರುದ್ರೇಶ್ ಪಟೇಲ್ ನೂತನ ಕಾರ್ಯದರ್ಶಿಯಾಗಿ ಅರುಣ್ ಅಧಿಕಾರ ವಹಿಸಿಕೊಂಡರು. ನಿಕಟಪೂರ್ವ ಅಧ್ಯಕ್ಷ ಮನುಪೆಮ್ಮಯ್ಯ ನಿಕಟಪೂರ್ವ ಕಾರ್ಯದರ್ಶಿ ಮಂಜುನಾಥ್ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ಕುಶಾಲನಗರ ಪಟ್ಟಣ ಸುತ್ತಮುತ್ತ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಸಾಧನೆಗೈದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.