ವಿಜಯಪುರ: ಅತ್ಯಂತ ಪ್ರಭಾವಿ ಉತ್ತರ ಕರ್ನಾಟಕದ ಲಿಂಗಾಯತ ಜನಪ್ರಿಯ ನಾಯಕ ಹಾಗೂ ತಮಗೆ ಕೊಟ್ಟಿರುವ ಎಲ್ಲ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಎಂ.ಬಿ.ಪಾಟೀಲರರಿಗೆ ಮುಂಬರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಹಾಗೂ ನೀರಾವರಿ ಖಾತೆ ನೀಡಬೇಕೆಂದು ರಾಷ್ಟ್ರೀಯ ಬಸವ ಸೇನೆ ಪ್ರಕಟಣೆಯಲ್ಲಿ ಆಗ್ರಹಿಸಿದೆ.

ಎಂ.ಬಿ.ಪಾಟೀಲರು 2013-18ರ ಅವಧಿಯಲ್ಲಿ ನೀರಾವರಿ ಮಂತ್ರಿಯಾಗಿ ಅತ್ಯಂತ ಸಮರ್ಥವಾಗಿ ಕೆಲಸ ಮಾಡಿ ಬರದ ನಾಡನ್ನು ಬಂಗಾರದ ನಾಡನ್ನಾಗಿ ಮಾಡಿದ್ದಾರೆ. ನೂರಾರು ಕೆರೆಗಳನ್ನು ತುಂಬಿಸಿ ಆಧುನಿಕ ಭಗೀರಥ ಎನಿಸಿಕೊಂಡಿದ್ದಾರೆ. ನಂತರ ಗ್ರಹ ಸಚಿವರಾಗಿ ಜೀರೋ ಟ್ರಾಫಿಕ್ ನಿರಾಕರಿಸಿ ಮಾದರಿ ಎನಿಸಿದ್ದರು. 2023 ರಿಂದ ಬೃಹತ್ ಕೈಗಾರಿಕಾ ಸಚಿವರಾಗಿ ಅಂತಾರಾಷ್ಟ್ರೀಯ ಹೂಡಿಕೆದಾರರ ಸಮಾವೇಶವನ್ನು ಬೆಂಗಳೂರಿನಲ್ಲಿ ಸಂಘಟಿಸಿ ₹ 10 ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದು ಬರುವಂತೆ ಮಾಡಿದ್ದಾರೆ. ಅಪಾರ ಆಡಳಿತ ಅನುಭವ ಹೊಂದಿರುವ ಕಾಂಗ್ರೆಸ್‌ನ ಹಿರಿಯ ನಾಯಕ ಎಂ.ಬಿ.ಪಾಟೀಲರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿದರೆ ಲಿಂಗಾಯತ ಸಮುದಾಯವನ್ನು ಗೌರವಿಸಿದಂತೆ ಆಗುತ್ತದೆ ಎಂದು ಸೇನೆಯ ಅಧ್ಯಕ್ಷ ಡಾ.ರವಿಕುಮಾರ ಬಿರಾದಾರ, ಪಧಾಧಿಕಾರಿಗಳಾದ ಶಾಂತವೀರ ತಾಲಭಾವಡಿ, ನಿಂಗಪ್ಪ ಸಂಗಾಪುರ, ದ್ರಾಕ್ಷಾಯಿಣಿ ಬಿರಾದಾರ, ಮತೋಶ್ರೀ ಚಂದ್ರಕಲಾ ಗುಣದಾಳ ತಿಳಿಸಿದ್ದಾರೆ.