ಕನ್ನಡಪ್ರಭ ವಾರ್ತೆ ತಿಪಟೂರು

ಸರ್ಕಾರಿ ಶಾಲೆಗಳನ್ನು ಗ್ರಾಮಸ್ಥರು, ಪೋಷಕರು, ಎಸ್‌ಡಿಎಂಸಿ ಸಮಿತಿ ಹಾಗೂ ದಾನಿಗಳ ನೆರವನ್ನು ಪಡೆದು ಮೂಲಭೂತ ಸೌಲಭ್ಯಗಳೊಂದಿಗೆ ಆಧುನೀಕರಣಗೊಳಿಸಿದರೆ ಯಾವುದೇ ಸರ್ಕಾರಿ ಶಾಲೆ ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುವ ಹಂತಕ್ಕೆ ಬರುವುದಿಲ್ಲ ಎಂದು ಕೆಪಿಸಿಸಿ ಸದಸ್ಯ ಡಾ. ವಿ ಯೋಗೇಶ್ ತಿಳಿಸಿದರು.

ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಕರಡಾಳು ಸಂತೆ ಮೈದಾನದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಚಿಣ್ಣರ ಚಿಲಿಪಿಲಿ ಶಾಲಾ ವಾರ್ಷಿಕೋತ್ಸವ ಹಾಗೂ ದಾನಿಗಳ ಸಹಕಾರದಿಂದ ನಿರ್ಮಿಸಿರುವ ಜ್ಞಾನಸೂರ್ಯ ಶಾಲಾ ಕಲಾಮಂದಿರ ಶಾಲಾ ಪ್ರವೇಶದ್ವಾರ ಹಾಗೂ ಸಿಸಿ ರಸ್ತೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಎಂ.ಎಂ. ಉಮೇಶ್ ಗೌಡ ಮಾತನಾಡಿ ಈ ಶಾಲೆ ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಾ ಬಂದಿದ್ದು ಹತ್ತು ವರ್ಷಗಳ ಹಿಂದೆ ಒಂದು ಎರಡು ಮಗು ಇದ್ದ ಶಾಲೆ ಇಂದು ೧೯ ದಾಖಲೆಯನ್ನು ಹೊಂದಿ ಉತ್ತಮ ಪ್ರಗತಿಯತ್ತ ಸಾಗುತ್ತಿದೆ. ಕಾರಣ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಹಿಂದಿನ ಮುಖ್ಯ ಶಿಕ್ಷಕ ಛಾಯಾ ಹಾಗೂ ಈಗಿನ ಶಿಕ್ಷಕ ಪಟ್ಟಾಭಿರಾಮು ಶ್ರಮ ಹೆಚ್ಚಿದೆ. ಹಾಗಾಗಿ ಶಾಲೆ ೨೦೨೪-೨೫ನೇ ಸಾಲಿನ ಅತ್ಯುತ್ತಮ ಶಾಲಾ ಪ್ರಶಸ್ತಿ ಹಾಗೂ ಅತ್ಯುತ್ತಮ ಎಸ್‌ಡಿಎಂಸಿ ಪ್ರಶಸ್ತಿಗೆ ಭಾಜನವಾಗಿದೆ ಎಂದರು. ಮುಖ್ಯ ಶಿಕ್ಷಕ ಟಿ.ಕೆ ಪಟ್ಟಾಭಿರಾಮ, ಎಸ್ಡಿಎಂಸಿ ಅಧ್ಯಕ್ಷ ಎನ್ ನರಸಿಂಹಮೂರ್ತಿ ಮಾತನಾಡಿದರು. ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ, ನಾಗರಾಜು, ವಿರೂಪಾಕ್ಷ ಶಂಕರಯ್ಯ. ಚಂದ್ರಶೇಖರ್, ಕೆಂಪಾಚಾರ್, ಹರೀಶ್, ಲೋಕೇಶ್, ಗ್ರಾಮಸ್ಥರು ಪೋಷಕರು ಹಿರಿಯ ವಿದ್ಯಾರ್ಥಿಗಳು ಹಾಗೂ ಎಲ್ಲರೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು,