ಜನವರಿ, ಫೆಬ್ರವರಿ ಗೃಹಲಕ್ಷ್ಮಿ ಬರಲಿದೆ, ಆತಂಕ ಬೇಡ

| Published : Mar 26 2025, 01:34 AM IST

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಕಾಲಕಾಲಕ್ಕೆ ಇ-ಜನ್ಮ ತಂತ್ರಾಂಶದಲ್ಲಿ ಮೃತ ಫಲಾನುಭವಿಗಳ ವಿವರ ಪರೀಕ್ಷಿಸುವಂತೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ ಸೂಚಿಸಿದರು.

- ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಮಿತಿ ಅಧ್ಯಕ್ಷ ಟಿ.ಬಸವರಾಜ - - - ಕನ್ನಡಪ್ರಭ ವಾರ್ತೆ ದಾವಣಗೆರೆ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಕಾಲಕಾಲಕ್ಕೆ ಇ-ಜನ್ಮ ತಂತ್ರಾಂಶದಲ್ಲಿ ಮೃತ ಫಲಾನುಭವಿಗಳ ವಿವರ ಪರೀಕ್ಷಿಸುವಂತೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ. ಬಸವರಾಜ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಸಾರ್ವಜನಿಕರು ಊಹಾಪೋಹಗಳಿಗೆ ಕಿವಿಗೊಡಬಾರದು. ಡಿಸೆಂಬರ್ ತಿಂಗಳ ಗೃಹಲಕ್ಷ್ಮಿ ಹಣವನ್ನು ಈಗಾಗಲೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಜನವರಿ ತಿಂಗಳ ಹಣ ಪಾವತಿ ಹಂತದಲ್ಲಿದೆ. ನಂತರದ ಬಾಕಿ ಹಣ ಸಹ ಶೀಘ್ರವೇ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ಫೆಬ್ರವರಿ ತಿಂಗಳ ಹಣವೂ ಬಿಡುಗಡೆಯಾಗಲಿದೆ. ಹಾಗಾಗಿ ಫಲಾನುಭವಿಗಳು ಆತಂಕಪಡಬೇಕಿಲ್ಲ ಎಂದರು.

ಅನ್ನಭಾಗ್ಯದಡಿ ಪಡಿತರ ಚೀಟಿದಾರರಿಗೆ ಇನ್ನು ಮುಂದೆ ನಗದು ಬದಲಿಗೆ ₹5 ಕೆಜಿ ಅಕ್ಕಿ ವಿತರಿಸಲು ಸರ್ಕಾರ ನಿರ್ಧರಿಸಿದೆ. ಮಾರ್ಚ್‌ನಲ್ಲಿ ಒಟ್ಟು 14 ಕೆಜಿ ಅಕ್ಕಿ ಅನ್ನಭಾಗ್ಯದ ಪ್ರತಿ ಫಲಾನುಭವಿಗೆ ಸಿಗಲಿದೆ. ಜುಲೈ 23ರಿಂದ ಡಿ.24ರವರೆಗೆ 3,44,950 ಕಾರ್ಡ್‌ದಾರರಲ್ಲಿ 1242812 ಸದಸ್ಯರಿಗೆ ಯೋಜನೆ ಆರಂಭ ಆದಾಗನಿಂದ ₹346.33 ಕೋಟಿ ಡಿಬಿಟಿ ಮೂಲಕ ಖಾತೆಗೆ ವರ್ಗಾಯಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗೃಹಲಕ್ಷ್ಮಿಯಡಿ ಮನೆ ಯಜಮಾನಿಗೆ ಪ್ರತಿ ತಿಂಗಳು ₹2 ಸಾವಿರ ನೀಡುತ್ತಿದ್ದು, ಆಗಸ್ಟ್ 23ರಿಂದ ಡಿಸೆಂಬರ್ 24ರವರೆಗೆ ನೋಂದಣಿಯಾದ 371512 ಫಲಾನುಭವಿಗಳಿದ್ದಾರೆ. 359601 ಮಹಿಳೆಯರಿಗೆ ₹113.27 ಕೋಟಿ ಡಿಬಿಟಿ ಮೂಲಕ ಸಂದಾಯ ಮಾಡಲಾಗಿದೆ. ಗೃಹಜ್ಯೋತಿಯಡಿ ದಾವಣಗೆರೆ ವಿಭಾಗದಿಂದ ಒಟ್ಟು 561066 ವಿದ್ಯುತ್ ಸಂಪರ್ಕ ಪಡೆದ ಆರ್‌ಆರ್‌ ಸಂಖ್ಯೆಗಳಿವೆ. ಇದರಲ್ಲಿ 498411 ಆರ್‌ಆರ್‌ ಸಂಖ್ಯೆಯ ಫಲಾನುಭವಿಗಳು ಗೃಹಜ್ಯೋತಿಯಡಿ ನೋಂದಣಿಯಾಗಿವೆ. ಇದರ ವೆಚ್ಚವಾಗಿ ಫೆಬ್ರವರಿಯಲ್ಲಿ ₹21.32 ಕೋಟಿ ವೆಚ್ಚ ಹೊಂದಾಣಿಕೆ ಮಾಡಲಾಗಿದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಲ್ಲಿ ದಾವಣಗೆರೆ ವಿಭಾಗದ ವ್ಯಾಪ್ತಿಯಲ್ಲಿ ಜೂ.23ರಿಂದ ಫೆ.25ರ ಅಂತ್ಯದವರೆಗೆ 76120815 ಟ್ರಿಪ್‌ಗಳಲ್ಲಿ ಮಹಿಳೆಯರು ಪ್ರಯಾಣಿಸಿದ್ದಾರೆ. ಇದರ ವೆಚ್ಚವಾಗಿ ₹215 ಕೋಟಿಯನ್ನು ಸರ್ಕಾರ ಭರಿಸಿದೆ. ಯುವನಿಧಿಯಡಿ ಪದವಿ ಉತ್ತೀರ್ಣ ಹಾಗೂ ಡಿಪ್ಲೋಮಾ ಪಾಸಾದವರಿಗೆ ಶಿಷ್ಯವೇತನವಾಗಿ ಪ್ರತಿ ತಿಂಗಳು ಪದವೀಧರರಿಗೆ ₹3 ಸಾವಿರ, ಡಿಪ್ಲೊಮಾದಾರರಿಗೆ ₹1500 ನೀಡಲಾಗಿದೆ. ಜಿಲ್ಲೆಯಲ್ಲಿ ಜನವರಿ- 2024ರಿಂದ ಫೆಬ್ರವರಿ- 2025ರವರೆಗೆ 6458 ಪದವೀಧರರು, 125 ಡಿಪ್ಲೊಮಾ ಆದವರು ಸೇರಿ 6583 ಅಭ್ಯರ್ಥಿಗಳಿಗೆ ₹12.66 ಕೋಟಿ ಶಿಷ್ಯವೇತನವಾಗಿ ಖಾತೆಗೆ ಜಮಾ ಮಾಡಲಾಗಿದೆ ಎಂದು ವಿವರಿಸಿದರು.

ದಾವಣಗೆರೆ 36ನೇ ವಾರ್ಡಿನ ಶಿವಕುಮಾರ ಬಡಾವಣೆಗೆ ನಗರ ಸಾರಿಗೆ ಸಂಪರ್ಕ ಇಲ್ಲವಾದ್ದರಿಂದ ಸಾರ್ವಜನಿಕರಿಗೆ, ಹಿರಿಯ ನಾಗರೀಕರಿಗೆ ತೊಂದರೆಯಾಗುತ್ತಿದೆ. ಆ ಮಾರ್ಗಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳು ಗಮನಹರಿಸಬೇಕು ಎಂದು ಸೂಚಿಸಿದರು.

ಹರಿಹರ ತಾಲೂಕಿನ ಮಹದೇವಪುರ ಗ್ರಾಮಕ್ಕೆ ಕೇವಲ ಒಂದು ಬಸ್ ಸಂಚರಿಸುತ್ತಿದ್ದು, ಅದೂ ಸರಿಯಾದ ಸಮಯಕ್ಕೆ ಬಾರದೇ ವಿದ್ಯಾರ್ಥಿಗಳಿಗೆ, ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಹಾಗಾಗಿ ಪರ್ಯಾಯವಾಗಿ ಇನ್ನೊಂದು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ ಎಂದು ಶಾಮನೂರು ಟಿ.ಬಸವರಾಜ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅದಕ್ಕೆ ಸಂಸ್ಥೆಯ ಅಧಿಕಾರಿಗಳು , ಶಿಘ್ರದಲ್ಲೇ ಈ ಬಗ್ಗೆ ಕ್ರಮ ಕೈಗೊಂಡು ಸಾರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವುದಾಗಿ ಉತ್ತರಿಸಿದರು.

ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಮುಖ್ಯ ಯೋಜನಾಧಿಕಾರಿ ಮಲ್ಲಾನಾಯ್ಕ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಉಪಾಧ್ಯಕ್ಷರಾದ ಮಂಜುನಾಥ, ನಂಜಾನಾಯ್ಕ, ರಾಜೇಶ್ವರಿ, ಶ್ರೀನಿವಾಸ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿದ್ದರು.

- - - -25ಕೆಡಿವಿಜಿ67, 68.ಜೆಪಿಜಿ:

ದಾವಣಗೆರೆ ಜಿಪಂ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ ಮಾತನಾಡಿದರು.