ಇದ್ದುದರಲ್ಲೇ ಸುಖ, ಸಂತೋಷ ಕಾಣಬೇಕು

| Published : Dec 03 2024, 12:33 AM IST

ಸಾರಾಂಶ

ಕಷ್ಟದಲ್ಲಿಯೂ ಸುಖ, ಕತ್ತಲಿನಲ್ಲಿ ಬೆಳಕು ಕಾಣುವ ಆಚರಣೆಯೇ ಕಾರ್ತಿಕ ಮಾಸದ ದೀಪೋತ್ಸವದ ನೈಜ ಅರ್ಥವಾಗಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- ಹಿರೇಕಲ್ಮಠ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀಗಳ ಆಶೀರ್ವಚನ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ಕಷ್ಟದಲ್ಲಿಯೂ ಸುಖ, ಕತ್ತಲಿನಲ್ಲಿ ಬೆಳಕು ಕಾಣುವ ಆಚರಣೆಯೇ ಕಾರ್ತಿಕ ಮಾಸದ ದೀಪೋತ್ಸವದ ನೈಜ ಅರ್ಥವಾಗಿದೆ ಎಂದು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಭಾನುವಾರ ರಾತ್ರಿ ಹಿರೇಕಲ್ಮಠದಲ್ಲಿ ಕಾರ್ತಿಕ ಮಾಸದ ಚಟ್ಟಿ ಅಮಾವಾಸ್ಯೆ ಮಹಾಪೂಜೆ, ಕದಳಿ ಕಾರ್ತಿಕ ಲಕ್ಷ ದೀಪೋತ್ಸವ, ಶ್ರೀಗುರು ಚನ್ನೇಶ್ವರ ಬೆಳ್ಳಿ ರಥೋತ್ಸವ ಹಾಗೂ ಧರ್ಮಸಭೆ ಉದ್ದೇಶಿಸಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವುದು ಸಾಂಕೇತಿಕ. ದೀಪ ಇದ್ದಲ್ಲಿಯೇ ಇದ್ದು ಎಲ್ಲರಿಗೂ ಬೆಳಕು ನೀಡುತ್ತದೆ. ನಾವೂ ಸಹ ಇರುವುದರಲ್ಲೇ ಸುಖ- ಸಂತೋಷವನ್ನು ಕಾಣಬೇಕು. ಮನಸ್ಸಿನಲ್ಲಿ ಒಳ್ಳೆಯ ಗುಣಗಳನ್ನು ಬೆಳಸಿಕೊಂಡು, ಕೆಟ್ಟ ಗುಣಗಳನ್ನು ಕೈಬಿಡಬೇಕು. ಅದೇ ಮನುಷ್ಯನಲ್ಲಿ ದೊಡ್ಡ ದೀಪ ಹಚ್ಚಿದಂತಾಗುತ್ತದೆ ಎಂದರು.

ಲಕ್ಷ ದೀಪೋತ್ಸವ:

ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಹಿರೇಕಲ್ಮಠದ ಆವರಣದಲ್ಲಿ ಲಕ್ಷ ದೀಪೋತ್ಸವ ನಡೆಯುತ್ತದೆ. ಈ ಬಾರಿಯೂ ಭಕ್ತರು ಓಂಕಾರ, ಶ್ರೀಕಾರ, ಲಿಂಗ, ಚನ್ನಪ್ಪಸ್ವಾಮಿ, ಶ್ರೀಮಠದ ಚಿತ್ರಗಳನ್ನು ದೀಪದಲ್ಲಿ ಬಿಡಿಸಿ ಹಣತೆ ಹಚ್ಚಿದರು. ಈ ದೃಷ್ಯ ಅತ್ಯಂತ ಆಕರ್ಷಣೀಯವಾಗಿತ್ತು. ಸಹಸ್ರಾರು ಭಕ್ತರು ಹಣತೆ ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು.

ಮುಗಿಲೆತ್ತರಕ್ಕೆ ಆಕಾಶಬುಟ್ಟಿ:

ಹಿರೇಕಲ್ಮಠದ ಆವರಣದಲ್ಲಿ ಬಣ್ಣಬಣ್ಣದ ನಕ್ಷತ್ರ, ಚೌಕಾಕಾರ ಹಾಗೂ ಉದ್ದನೆಯ ಆಕಾಶಬುಟ್ಟಿಗಳು ರಾರಾಜಿಸಿದವು. ಭಕ್ತರು ಆಕಾಶ ಬುಟ್ಟಿಗಳಲ್ಲಿ ದೀಪ ಹಚ್ಚಿ ತೇಲಿಬಿಟ್ಟು, ಸಂಭ್ರಮಿಸಿದರು.

- - - -2ಎಚ್.ಎಲ್.ಐ1 ಮತ್ತು ಐ1:

ಹೊನ್ನಾಳಿ ಪಟ್ಟಣದ ಹಿರೇಕಲ್ಮಠ ಆವರಣದಲ್ಲಿ ಕಾರ್ತಿಕೋತ್ಸವ ಅಂಗವಾಗಿ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಹಣತೆ ಬೆಳಗಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.