ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ದೇಶಿ ಗೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, ರೈತರು ಕೃಷಿಯ ಜೊತೆಗೆ ಮನೆಯಲ್ಲಿ ಗೋವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾಕಿದಾಗ ಮಾತ್ರ ಗೋವುಗಳ ಸಂತತಿ ಹೆಚ್ಚಿನ ಪ್ರಮಾಣದಲ್ಲಿ ಬೆಳಯಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥ ಪ್ರಮುಖ ಮಂಗೇಶ್ ಭೇಂಡೆ ಹೇಳಿದರು.ನೆರೆಯ ಮಹಾರಾಷ್ಟ್ರದ ಸುಕ್ಷೇತ್ರ ಕನೇರಿ ಸಿದ್ದಗಿರಿ ಮಠದಲ್ಲಿ ಶುಕ್ರವಾರ ಸಾವಯವ ಕೃಷಿ ಬದುಕಿಗೆ ಒತ್ತು ನೀಡುವ ಉದ್ದೇಶದಿಂದ ಭೂತಾಯ ಕಾಯಕಕ್ಕೆ ಧರ್ಮ ಕಾಯ್ವರ ಹೆಗಲು ಎಂಬ ಮಹಾಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾಕುವಂತೆ ಆರ್.ಎಸ್.ಎಸ್ ಪ್ರಮುಖ ಮಲ್ಲೇಶ ಬೆಂಡೆ ಹೇಳಿದರು.
ಕನ್ನೇರಿ ಸಿದ್ದಗಿರಿ ಮಠದಲ್ಲಿ ಗೋವುಗಳು ಕಸಾಯಿಖಾನೆಗೆ ಹೋಗುವುದನ್ನು ತಡೆಯುವ ನಿಟ್ಟಿನಲ್ಲಿ ಯುವಕರು ಉತ್ತಮವಾದ ಕಾರ್ಯ ಮಾಡುತ್ತಿದ್ದಾರೆ. ಗೋವು ಕಸಾಯಿಖಾನೆಗೆ ಹೋಗುವುದನ್ನು ನಿಲ್ಲಿಸಬೇಕು. ಗೋವು ಕಸಾಯಿಖಾನೆಗೆ ಕೊಡುವುದನ್ನು ರೈತರು ನಿಲ್ಲಿಸದರೇ ಗೋವು ಹತ್ಯೆ ತಾನಾಗಿಯೇ ನಿಲುತ್ತದೆ ಎಂದರು.ಇತ್ತಿಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ ಬಳಸಿ ಕೃಷಿ ಮಾಡುತ್ತಿರುವುದರಿಂದ ಆಹಾರದಲ್ಲಿ ವಿಷ ಹೆಚ್ಚಾಗುತ್ತಿದೆ. ಅದಕ್ಕಾಗಿ ರೈತರು ಸಾವಯವ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನ್ನೇರಿ ಸಿದ್ದಗಿರಿ ಸಂಸ್ಥಾನದ ಪೀಠಾಧ್ಯಕ್ಷ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯನಿಗೆ ಬದುಬೇಕೆಂಬ ಇಚ್ಚಾಸಕ್ತಿಯಿದೆ. ಆದರೆ, ಸಾಯಲು ಬೇಕಾದ ಎಲ್ಲ ಕೃತಿಗಳನ್ನು ನಾವೇ ಮಾಡುತ್ತಿದ್ದೇವೆ ಎಂದರು.ಬರುವ ಎಳೆಂಟು ವರ್ಷದಲ್ಲಿ ಕೊಳವೆ ಭಾವಿಗಳನ್ನು ಆಳವಾಗಿ ಕೊರೆಯುತ್ತಿರುವುದರಿಂದ ಅಂತರ ಜಲಮಟ್ಟ ಕಡಿಮೆಯಾಗಿ ನೀರಿನ ಬದಲಾಗಿ ವಿಷಕಾರಿ ಹೇರಾಯಿನ್ ಬರಲಿದೆ. ಆದ್ದರಿಂದ ನೀರು ಕಡಿಮೆಯಾಗುವೆ ಮುನ್ನವೇ ನಾವೆಲ್ಲ ಎಚ್ಚರವಾಗಬೇಕಾಗಿದೆ ಎಂದು ತಿಳಿಸಿದರು.
ಅನ್ನದಾತ ಯಾವುದೇ ಗ್ಯಾರಂಟಿ ಇಲ್ಲದೆ ಜೀವನ ಸಾಗಿಸುತ್ತಿದ್ದಾನೆ. ಕೃಷಿಗೆ ಸ್ವಾಭಿಮಾನದಿಂದ ವ್ಯವಸಾಯ ಮಾಡುವಂತೆ ಧೈರ್ಯ ತುಂಬಬೇಕಾಗಿದೆ ಎಂದರು.ಮನುಷ್ಯ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತ ಹೋದರೆ ನಮ್ಮ ಕಣ್ಣ ಎದರಿಗೆ ನಾಶವಾಗಲಿದೆ. ಗ್ರಾಮಗಳು ಸಶಕ್ತವಾಗಬೇಕಾದರೇ ಕೃಷಿ ಸಶಕ್ತವಾಗಬೇಕಾಗಿದೆ. ಸಾವಯವ ಕೃಷಿಯನ್ನು ಚಳುವಳಿಯನ್ನಾಗಿ ಮಾಡಬೇಕಾಗಿದೆ ಎಂದರು. ಮಠಾಧೀಶರು ದೇಶಿಯ ಬೀಜಗಳನ್ನು ನೀಡಬೇಕು. ಪ್ರತಿ ಗ್ರಾಮಗಳಲ್ಲಿ ಪ್ರಗತಿಪರ ರೈತರು, ಕುಶಲ ಕರ್ಮಿಗಳು ಹಾಗೂ ಪಾರಂಪರಿಕವಾಗಿ ಕಲೆ ಉಳಿಸಿಕೊಂಡು ಬರುವವರು ಸನ್ಮಾನ ಮಾಡುವ ಕಾರ್ಯ ಮಾಡಬೇಕಾಗಿದೆ ಎಂದು ತಿಳಿಸಿದರು.
ಗೋವು ಸಾಕಾಣಿಕೆ ಬಗ್ಗೆ ಜನರಲ್ಲಿ ತಿಳುವಳಿಕೆ ನೀಡಿದರ ಪರಿಣಾಮವಾಗಿ ಕೊಲ್ಲಾಪುರ ಜಿಲ್ಲೆಯಲ್ಲಿ 50 ಸಾವಿರಕ್ಕೂ ಹೆಚ್ಚು ದೇಶಿಯ ಗೋವುಗಳ ಸಂಖ್ಯೆ ಹೆಚ್ಚಾಗಿದೆ ಎಂದರು.ಬಾಗಲಕೋಟೆ ತೋಟಾಗಾರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎನ್.ಕೆ.ನಾಯಕ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಡಾ.ಪಿ.ಎಲ್.ಪಾಟೀಲ್, ಉಪಕುಲಪತಿ ಡಾ.ಎನ್.ಕೆ.ಹೆಗಡೆ, ಸುತ್ತೂರಿನ ಕಿರಿಯ ಜಯರಾಜೇಂದ್ರ ಮಹಸ್ವಾಮಿ, ಹುಕ್ಕೇರಿಯ ಡಾ. ಚಂದ್ರಶೇಖರ್ ಮಹಾಸ್ವಾಮಿಗಳು, ಸಾವಯವ ಪರಿವಾರದ ಅಧ್ಯಕ್ಷ ದತ್ತಾತ್ರೇಯ ರಾಮಚಂದ್ರ ಹೆಗಡೆ, ಸುಭೀಕ್ಷ ಅರ್ಗನಿಕ್ ಮಲ್ಟಿಸ್ಟೇಟ್ ಕೋ ಆಪರೇಟಿವ್ ಸೊಸೈಟಿಯ ರಾಜ್ಯಧ್ಯಕ್ಷ ಆನಂದ ಇದ್ದರು.
ಸಾವಯವ ಕೃಷಿ ಪರಿವಾರದ ರಾಜ್ಯ ಕಾರ್ಯದರ್ಶಿ ಬೋಜ ಎನ್.ಆರ್ ಸ್ವಾಗತಿಸಿದರು. ಗಣೇಶ ಕೋನೊಡಿ ನಿರೂಪಿಸಿದರು.