ಮೂಲ್ಕಿ: ಪ್ರಜಾ ಸೌಧವು ಸರ್ಕಾರದ ಪ್ರತಿಬಿಂಬವಾಗಿದ್ದು ಸರ್ಕಾರವೇ ಜನರ ಬಳಿ ಬಂದು ಕೆಲಸ ಮಾಡಬೇಕೆಂಬ ಉದ್ದೇಶ ಹೊಂದಿದ್ದು ಪ್ರಜಾಪ್ರಭುತ್ವದ ಆಶಯವನ್ನು ಪೂರೈಸಬೇಕು. ಪ್ರಜೆಗಳಿಗಾಗಿ ನಾವು ಎಂಬ ಭಾವನೆ ಅಧಿಕಾರಿ, ರಾಜಕಾರಣಿಗಳಲ್ಲಿ ಮೂಡಿದಾಗ ಸಮಸ್ಯೆಗಳು ಬಗೆಹರಿಯಲು ಸಾಧ್ಯ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.ದ.ಕ.ಜಿಲ್ಲಾಡಳಿತ ಮತ್ತು ಕರ್ನಾಟಕ ಗೃಹ ಮಂಡಳಿ, ಮಂಗಳೂರು ಆಶ್ರಯದಲ್ಲಿ ಮೂಲ್ಕಿಯ ಕಾರ್ನಾಡಿನ ಗೇರುಕಟ್ಟೆಯಲ್ಲಿ ಸುಮಾರು 10 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಗೊಂಡ ಪ್ರಜಾ ಸೌಧ , ಮೂಲ್ಕಿ ತಾಲೂಕು ಆಡಳಿತ ಕೇಂದ್ರದ ಉದ್ಘಾಟನೆ ನೆರವೇರಿಸಿ ಮೂಲ್ಕಿ-ಮೂಡುಬಿದಿರೆ ಕ್ಷೇತ್ರದ ಸುಮಾರು 300 ಮಂದಿಗೆ ಹಕ್ಕು ಪತ್ರ ವಿತರಣೆ ಸಾಂಕೇತಿಕವಾಗಿ ನೆರವೇರಿಸಿ ಮಾತನಾಡಿದರು. ದ.ಕ.ಜಿಲ್ಲೆಯ ಬೆಳ್ತಂಗಡಿ, ಸುಳ್ಯ ಸೇರಿದಂತೆ ಕೆಲವು ತಾಲೂಕುಗಳಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸಮಸ್ಯೆಯ ಬಗ್ಗೆ ಜಂಟಿ ಸರ್ವೇ ಮೂಲಕ ತಳ ಹಂತದಲ್ಲಿ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ. ಡೀಮ್ಡ್‌ ಫಾರೆಸ್ಟ್‌ ಮತ್ತು ರೆಕಾರ್ಡ್‌ ಫಾರೆಸ್ಟ್‌ ಕುರಿತು ಸುಪ್ರಿಂ ಕೋರ್ಟಿನ ಆದೇಶದಂತೆ ಕಾನೂನಾತ್ಮಕವಾಗಿ ಬಗೆಹರಿಸಲು ಜಿಲ್ಲಾ ಮಟ್ಟದಲ್ಲಿ ಎಸ್‌ ಐ ಟಿ ರಚಿಸಲಾಗಿದೆ. ಭೂ ಸುಧಾರಣೆಯಲ್ಲಿ ಜಾಗ ಮಂಜೂರಾದವರಿಗೆ ಪ್ಲಾಟಿಂಗ್‌ ಆಗದೇ ಸಮಸ್ಯೆಯಾಗುತ್ತಿದ್ದು ಈ ಬಗ್ಗೆ ಸರ್ಕಾರವೇ ಪ್ಲಾಟಿಂಗ್‌ ಮಾಡಲು ನಿರ್ಧರಿಸಿದೆ ಎಂದರು.ಮೂಲ್ಕಿ ತಾಲೂಕು ಪ್ರಜಾ ಸೌಧ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕ ಉಮಾನಾಥ ಕೋಟ್ಯಾನ್‌ ರ ಬೇಡಿಕೆಯಂತೆ 10 ಕೋಟಿ ಮಂಜೂರು ಮಾಡಿದ್ದು ಇಂದು ಉತ್ತಮವಾದ ಪ್ರಜಾಸೌಧ ಎತ್ತಿ ನಿಂತಿದ್ದು ಜನರ ಆಶಯ ಈಡೇರಲೆಂದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು ವೆನ್‌ ಲಾಕ್‌ ಆಸ್ಪತ್ರೆಯಲ್ಲಿ ಶೀಘ್ರದಲ್ಲಿ 70 ಕೋಟಿ ವೆಚ್ಚದಲ್ಲಿ ಒಪಿಡಿ ಸೆಂಟರ್‌ ನಿರ್ಮಾಣವಾಗಲಿದ್ದು ಆಡಳಿತ ಕಚೇರಿಗಳು ಉತ್ತಮ ನಿರ್ವಹಣೆಯಿಂದ ಜನರಿಗೆ ಅನುಕೂಲವಾದ ವಾತಾವರಣ ನಿರ್ಮಾಣವಾಗಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಉಮಾನಾಥ ಕೋಟ್ಯಾನ್‌ ಮಾತನಾಡಿ, ಮುಂದಿನ ದಿನಗಳಲ್ಲಿ ಮೂಲ್ಕಿಗೆ ನ್ಯಾಯಾಲಯ, ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆ ಸೇರಿದಂತೆ ಅಭಿವೃದ್ಧಿಗೆ ಸಹಕಾರ ನೀಡುವಂತೆ ಸಚಿವರಲ್ಲಿ ವಿನಂತಿಸಿದರು.

ಸಂಸದ ಕ್ಯಾ. ಬ್ರಿಜೇಶ್‌ ಚೌಟ ಮಾತನಾಡಿ, ಮೂಲ್ಕಿ, ಹಳೆಯಂಗಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಎರಡು ಬದಿಗಳಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣವಾಗಲಿದ್ದು ಕೇಂದ್ರದ ಯೋಜನೆಗಳನ್ನು ಜಿಲ್ಲೆಗೆ ತರಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಕಂದಾಯ ಸಚಿವ ಕೃಷ್ಣ ಭೈರೇಗೌಡರನ್ನು ಮೂಲ್ಕಿ ತಾಲೂಕು ಆಡಳಿತ ವತಿಯಿಂದ ಗೌರವಿಸಲಾಯಿತು. ಕಟ್ಟಡ ನಿರ್ಮಾಣದ ಗುತ್ತಿಗೆದಾರ ಬಿಮಲ್‌ ಕನ್ಸ್‌ ಟ್ರಕ್ಸನ್‌ ನ ಪ್ರವೀಣ್‌, ಎ ಜಿ ಅಸೋಸಿಯೇಟ್ಸ್‌ ನ ಯೋಗೀಶ್‌ ಅವರನ್ನು ಸನ್ಮಾನಿಸಲಾಯಿತು.


ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಎ. ಗಪೂರ್, ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ,

ಬೆಂಗಳೂರಿನ ಅಧ್ಯಕ್ಷ ಟಿ. ಎಂ. ಶಾಹೀದ್ ತೆಕ್ಕಿಲ್‌, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ದಿ ಮಂಡಳಿ ಅಧ್ಯಕ್ಷೆ ಶಾಲೆಟ್‌ ಲವೀನಾ ಪಿಂಟೋ, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತ ಡಿ ಎಸ್‌ ಗಟ್ಟಿ, ವಿಧಾನ ಪರಿಷತ್‌ ಸದಸ್ಯ ಕಿಶೋರ್‌ ಬಿ ಆರ್‌, ಮಾಜಿ ಸಚಿವ ಕೆ ಅಭಯಚಂದ್ರ ಜೈನ್‌, ದ.ಕ.ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಥಾನ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಅಪರ ಜಿಲ್ಲಾಧಿಕಾರಿ ಕೆ ರಾಜು ಮತ್ತಿತರರಿದ್ದರು.

ಜಿಲ್ಲಾಧಿಕಾರಿ ದರ್ಶನ್‌ ಎಚ್‌ ವಿ ಸ್ವಾಗತಿಸಿದರು. ತಹಸೀಲ್ದಾರ್‌ ಶ್ರೀಧರ್‌ ಮುಂದಲಮನಿ ವಂದಿಸಿದರು. ಮಂಜುಳಾ ನಿರೂಪಿಸಿದರು.