ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಆರೋಗ್ಯ, ಪರಿಸರ ರಕ್ಷಣೆ, ಕ್ರೀಡಾ ಸಂಸ್ಕೃತಿ ಹಾಗೂ ವಿಶೇಷಚೇತನರ ಸಬಲೀಕರಣದ ಸಂದೇಶ ಸಾರುವ ಉದ್ದೇಶದೊಂದಿಗೆ ಡಾ. ಶರತ್ ಮರಿಯಪ್ಪ ನೇತೃತ್ವದ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ರನ್ ಮಲೆನಾಡು ಮ್ಯಾರಥಾನ್‌ನಲ್ಲಿ ಮಳೆಯಲ್ಲೂ ಮಕ್ಕಳು, ವಿಶೇಷ ಚೇತನರು, ಹಿರಿಯರು, ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಪಾಲ್ಗೊಂಡು ಯಶಸ್ವಿಗೊಳಿಸಿದರು.

4 ಸಾವಿರಕ್ಕೂ ಹೆಚ್ಚು ಜನರು ರನ್ ಮಲೆನಾಡು ಮ್ಯಾರಥಾನ್ ಮೂಲಕ ಮಲೆನಾಡಿನ ಜನರ ಆರೋಗ್ಯ, ಪರಿಸರ ಸಂರಕ್ಷಣೆಗಾಗಿ ನಗರದ ರಸ್ತೆಗಳಲ್ಲಿ ಓಡಿದರು. ನಗರದಲ್ಲಿ ನಡೆದ ಮ್ಯಾರಥಾನ್ ಓಟಕ್ಕೆ ಇದೇ ಮೊದಲ ಬಾರಿಗೆ ಅಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದು ಕಂಡು ಬಂತು. ಈ ಮೂಲಕ ಜಿಲ್ಲೆಯ ಮ್ಯಾರಥಾನ್ ಇತಿಹಾಸದಲ್ಲಿ ರನ್ ಮಲೆನಾಡು ಓಟವು ದಾಖಲೆ ಸೃಷ್ಟಿಸಿತು.

ನಗರದ ನೆಹರು ಕ್ರೀಡಾಂಗಣದ ಮುಂಭಾಗದಿಂದ ಬೆಳಿಗ್ಗೆ ಆರಂಭಗೊಂಡ ರನ್ ಮಲೆನಾಡು ಮ್ಯಾರಥಾನ್ ಓಟಕ್ಕೆ ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮೊಹಮ್ಮದ್ ಹ್ಯಾರೀಸ್ ನಲ್ಪಾಡ್ ಅವರು ಸಾಂಕೇತಿಕ ಗಿಡಕ್ಕೆ ನೀರೆರೆದು ವೇದಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ಅವರು, ಬೆಂಗಳೂರು ಜನರಿಗೆ ಬೆಂಗಳೂರಿನಷ್ಟು ಒಳ್ಳೆಯ ವಾತಾವರಣ ಇನ್ನೆಲ್ಲೂ ಇಲ್ಲ ಎನ್ನುವ ಜಂಭವಿದೆ, ಆದರೆ ನಾನು ಶಿವಮೊಗ್ಗಕ್ಕೆ ಬಂದಾಗ ಇಲ್ಲಿನ ಸುಂದರವಾದ ವಾತಾವರಣದ ಅನುಭವದೊಂದಿಗೆ ಬೆಂಗಳೂರನ್ನೇ ಮರೆತು ಬಿಟ್ಟಿದ್ದೇನೆ. ಇಂತಹ ಮಲೆನಾಡಿನ ಈ ಸೌಂದರ್ಯವನ್ನು ಆಸ್ವಾದಿಸುವುದೇ ಆನಂದ ಎಂದು ಬಣ್ಣಿಸಿದರು.


ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ಮಲೆನಾಡಿಗಾಗಿ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಇಷ್ಟು ದೊಡ್ಡ ಮ್ಯಾರಥಾನ್ ಆಯೋಜಿಸಿದ್ದ ದೊಡ್ಡ ದಾಖಲೆ. ಅದರಲ್ಲೂ ವಿಶೇಷಚೇತನರು, ಮಕ್ಕಳು, ಹಿರಿಯರು ಹಾಗೂ ದಂಪತಿಗಳಿಗಾಗಿ ವಿಶೇಷ ಸ್ಪರ್ಧೆ ಆಯೋಜಿಸಿ, ಎಲ್ಲರನ್ನು ಈ ಓಟಕ್ಕೆ ಬರುವಂತೆ ಮಾಡಿರುವುದು ಹೊಸ ದಾಖಲೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಮಾತನಾಡಿ, ಮಲೆನಾಡು ಉಳಿಯಬೇಕಿದೆ, ಹಾಗೆಯೇ ಜನರ ಆರೋಗ್ಯವೂ ಸುಧಾರಣೆ ಕಾಣಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ, ಪರಿಸರ ರಕ್ಷಣೆ, ಕ್ರೀಡಾ ಸಂಸ್ಕೃತಿ ಹಾಗೂ ವಿಶೇಷ ಚೇತನರ ಸಬಲೀಕರಣದ ಉದ್ದೇಶದೊಂದಿಗೆ ಡಾ. ಶರತ್ ಮರಿಯಪ್ಪ ಫೌಂಡೇಷನ್ ಆಯೋಜಿಸಿದ ರನ್ ಮಲೆನಾಡು ಓಟಕ್ಕೆ ದೊಡ್ಡ ಬೆಂಬಲ ಸಿಕ್ಕಿದೆ. ಇದು ಇತರರಿಗೂ ಪ್ರೇರಣೆಯಾಗಿದೆ ಎಂದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ ಮಾತನಾಡಿ, ಹಲವು ಒಳ್ಳೆಯ ಉದ್ದೇಶಕ್ಕಾಗಿ ಈ ಮ್ಯಾರಥಾನ್ ಓಟವನ್ನು ಪುತ್ರ ಡಾ.ಶರತ್ ಮರಿಯಪ್ಪ ಮಾಡಿದ್ದಾರೆ. ಮುಂದಿನ ದಿನಗಳಲ್ಲಿಯೂ ಇನ್ನೂ ಉತ್ತಮ ಕೆಲಸಗಳನ್ನು ಫೌಂಡೇಷನ್ ಮಾಡಲಿದೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ. ಶ್ರೀಕಾಂತ್ ಮಾತನಾಡಿ, ರನ್ ಮಲೆನಾಡು ಒಳ್ಳೆಯ ಉದ್ದೇಶಕ್ಕಾಗಿ ನಡೆದಿದೆ. ಆರೋಗ್ಯ, ಪರಿಸರ ರಕ್ಷಣೆ, ಕ್ರೀಡಾ ಸಂಸ್ಕೃತಿ ಹಾಗೂ ವಿಶೇಷ ಚೇತನರ ಸಬಲೀಕರಣದ ಸಂದೇಶ ಸಾರುವುದಕ್ಕೆ ಇಲ್ಲಿ 4 ಸಾವಿರಕ್ಕೂ ಹೆಚ್ಚು ಜನರು, ಕ್ರೀಡಾಪಟುಗಳು, ಮಕ್ಕಳು , ಹಿರಿಯರು ಮಳೆಯನ್ನು ಲೆಕ್ಕಿಸದೆ ಮಲೆನಾಡಿಗಾಗಿ ಓಡಿದ್ದು ಮರೆಯಲಾಗದ ಕ್ಷಣ ಎಂದರು.

ಫೌಂಡೇಷನ್ ಸಂಸ್ಥಾಪಕ ಡಾ. ಶರತ್ ಮರಿಯಪ್ಪ ಮಾತನಾಡಿ, ಒಂದೊಳ್ಳೆಯ ಉದ್ದೇಶಕ್ಕಾಗಿ ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಬೇಕು ಎಂದು ಯೋಚಿಸಿದ್ದೇವು. ಅದನ್ನು ಫೌಂಡೇಶನ್ ಮೂಲಕ ನಡೆಸೋಣ ಅಂತ ನಿರ್ಧಾರ ಮಾಡಿದೆವು. ಆಗ ಹೊಳೆದಿದ್ದು ರನ್ ಮಲೆನಾಡು ಮ್ಯಾರಥಾನ್. ಈ ಓಟಕ್ಕೆ ಇವತ್ತು ಇಷ್ಟು ಜನರು ಬಂದು ಬೆಂಬಲಿಸಿದ್ದು ಮರೆಯಲಾಗದ ಐತಿಹಾಸಿಕ ದಿನ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಪ್‌ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಕೆ. ರಂಗನಾಥ್, ವಿನಯ್ ತಾಂದ್ಲೆ, ಪಾಲಾಕ್ಷ, ಗಿರೀಶ್, ರೇಖಾ ರಂಗನಾಥ್ ಮತ್ತಿತರರು ಇದ್ದರು.

-------------------------

ಪೋಟೋ: 06ಎಸ್‌ಎಂಜಿಕೆಪಿ04

ಶಿವಮೊಗ್ಗದ ಡಾ.ಶರತ್ ಮರಿಯಪ್ಪ ನೇತೃತ್ವದ ಡಾ. ಶರತ್ ಮರಿಯಪ್ಪ ಫೌಂಡೇಷನ್ ವತಿಯಿಂದ ಭಾನುವಾರ ನಗರದಲ್ಲಿ ಆಯೋಜಿಸಿದ್ದ ರನ್ ಮಲೆನಾಡು ಮ್ಯಾರಥಾನ್‌ನಲ್ಲಿ ಪಾಲ್ಗೊಂಡಿದ್ದ ಜನ.