ಜು. 5, 6, 7 ರೆಡ್ ಅಲರ್ಟ್ಕನ್ನಡಪ್ರಭ ವಾರ್ತೆ ಕಾರವಾರ

ಉತ್ತರ ಕನ್ನಡ ಜಿಲ್ಲೆಯ ಕೆಲವೆಡೆ ಮಳೆ ಅಬ್ಬರಿಸಿದೆ. ಹೊನ್ನಾವರದಲ್ಲಿ ಬಿರುಗಾಳಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದರೆ, ಕೆಲವೆಡೆ ಹಾನಿ ಉಂಟಾಗಿದೆ.

ಹೊನ್ನಾವರ, ಭಟ್ಕಳ, ಶಿರಸಿ, ಜೋಯಿಡಾ ತಾಲೂಕುಗಳಲ್ಲಿ ಭಾರಿ ಮಳೆಯಾಗುತ್ತಿದೆ. ಉಳಿದೆಡೆ ಸಾಧಾರಣ ಮಳೆಯಾಗಿದೆ.

ಚತುಷ್ಪಥ ಹೆದ್ದಾರಿಯ ಎಲ್ಐಸಿ ಕಟ್ಟಡ ಬಳಿ ಗುಡ್ಡ ಕುಸಿದು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ನಂತರ ಮಣ್ಣನ್ನು ತೆರವುಗೊಳಿಸಲಾಯಿತು. ಪಕ್ಕದ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಕಾಸರಕೋಡಿನ ಸಮೀಪದ ಹೊಸಪಟ್ಟಣ ಗ್ರಾಮದ ಧರ್ಮ ಗೌಡ ಅವರ ತೋಟದಲ್ಲಿ ಮರವೊಂದು ಮುರಿದುಬಿದ್ದು 13 ಅಡಕೆ ಮರ ನಾಶವಾಗಿವೆ. ಕವಲಕ್ಕಿ ಬಳಿ ಕಚ್ಚರಿಕೆ ರಸ್ತೆ ಕುಸಿದಿದೆ.


ಗೋಕರ್ಣದ ಗಂಗೆಕೊಳ್ಳದಲ್ಲಿ ವಿಶೇಷ ಚೇತನರಾದ ಮಂಜುನಾಥ ಗೌಡ ನಡೆಸುತ್ತಿರುವ ಅಂಗಡಿಗೆ ಸಿಡಿಲಿನಿಂದ ಬೆಂಕಿ ತಗುಲಿ ಲಕ್ಷಾಂತರ ರು. ಹಾನಿ ಉಂಟಾಗಿದೆ.

ಕಾರವಾರದಲ್ಲಿ ಬುಧವಾರ ರಾತ್ರಿ ಕೆಲ ಸಮಯ ಭಾರಿ ಮಳೆಯಾದ ಹಿನ್ನೆಲೆ ಗುರುವಾರ ಬೆಳಗ್ಗೆ ಶಾಲೆಗಳಿಗೆ ರಜೆ ಘೋಷಿಸಲಾಯಿತು. ರಜೆ ಘೋಷಣೆಯಾಗುತ್ತಿದ್ದಂತೆ ಮಳೆ ಕಣ್ಮರೆಯಾಯಿತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.5ರಿಂದ 7ರ ತನಕ ರೆಡ್ ಅಲರ್ಟ್ ನೀಡಲಾಗಿದ್ದು, ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.

ಗೋಕರ್ಣ: ಸಿಡಿಲು ಬಡಿದು ಅಂಗಡಿಗೆ ಹಾನಿ

ಅಂಗವಿಕಲ ನಡೆಸುತ್ತಿರುವ ಅಂಗಡಿ ಸುಟ್ಟು ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಬುಧವಾರ ರಾತ್ರಿ ಗಂಗೆಕೊಳ್ಳದಲ್ಲಿ ನಡೆದಿದೆ.ಮಂಜುನಾಥ ಪರಮೇಶ್ವರ ಗೌಡ ಎಂಬುವವರ ಅಂಗಡಿಯೇ ಬೆಂಕಿಗೆ ಆಹುತಿಯಾಗಿರುವುದಾಗಿದ್ದು, ಮಧ್ಯರಾತ್ರಿ ಗುಡುಗಿನ ಅಬ್ಬರದೊಂದಿಗೆ ಮಳೆಯಾಗಿದ್ದು, ಈ ವೇಳೆ ಸಿಡಿಲು ಬಡಿದು ಈ ಅವಘಡ ನಡೆದಿದೆ. ಸ್ಥಳಕ್ಕೆ ಸ್ಥಳೀಯು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಿದ್ದು, ಬೆಂಕಿ ಅವಘಡ ಎಂದು ವರದಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ವಿದ್ಯುತ್ ಶಾರ್ಟ್‌ ಸರ್ಕೀಟ್ ಆಗಿದ್ದರೆ ಕರೆಂಟ್ ಮೀಟರ್‌ ಸುಡುತ್ತಿತ್ತು, ಆದರೆ ಇದು ಸರಿಯಾಗಿದ್ದು, ಸಿಡಿಲು ಬಡಿದೆ ಅನಾಹುತವಾಗಿದೆ ಎಂದು ಇಲ್ಲಿನ ನಿವಾಸಿಗಳು ತಿಳಿಸಿದ್ದಾರೆ.ಬಡವನ ಬದುಕು ಬೀದಿಗೆಮಂಜುನಾಥ ಗೌಡ ಕೃಷಿಕನಾಗಿದ್ದು, ಹಲವು ವರ್ಷಗಳ ಹಿಂದೆ ಯಂತ್ರದ ಮೂಲಕ ಹೊಲ ಉಳುಮೆ ಮಾಡುವ ವೇಳೆ ಆಕಸ್ಮಿಕವಾಗಿ ಕಾಲು ತುಂಡಾಗಿತ್ತು. ನಂತರ ಸಣ್ಣ ಚಹಾ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದು, ಇಲ್ಲೆ ವಾಸ್ತವ್ಯ ಮಾಡಿಕೊಂಡಿದ್ದರು. ಆದರೆ ರಾತ್ರಿಯಾದ ಈ ಅವಘಡದಿಂದ ಹೊಟ್ಟಪಾಡಿಗಾಗಿ ನಡೆಸುತ್ತಿದ್ದ ಪುಟ್ಟ ಅಂಗಡಿಯೂ ಈಗ ಇಲ್ಲವಾಗಿದೆ. ಕಾಲು ತುಂಡಾದ ಬಳಿಕ ಚಿಕಿತ್ಸೆ ಪಡೆದು ಕೃತಕಕಾಲು ಅಳವಡಿಸಿಕೊಂಡಿದ್ದರು. ₹ 3 ಲಕ್ಷಕ್ಕೂ ಹೆಚ್ಚು ಈ ಕಾಲಿಗೆ ವ್ಯಯಿಸಿದ್ದರು. ಆದರೆ ಬೆಂಕಿ ಅವಘಡಕ್ಕೆ ಈ ಕಾಲು ಸಂಪೂರ್ಣ ಭಸ್ಮವಾಗಿದೆ. ಸಣ್ಣ ವ್ಯಾಪಾರ ಮಾಡಿಕೊಂಡಿದ್ದ ಇವರಿಗೆ ಈ ಹಾನಿ ಬದುಕಿಗೆ ದಿಕ್ಕೆ ತೋಚದಂತೆ ಆಗಿದ್ದು, ಸರ್ಕಾರದಿಂದ ನೆರವು ನೀಡಬೇಕಿದೆ.