ಕನ್ನಡಪ್ರಭ ವಾರ್ತೆ ಬೆಳಗಾವಿ

ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಹಣ ಸಂಗ್ರಹ ಮಾಡುತ್ತಿದ್ದ ಆರೋಪದಡಿ ನಗರದಲ್ಲಿ ಮತ್ತೆ ಎರಡು ಕಂಪನಿಗಳ ಮೇಲೆ ಶುಕ್ರವಾರ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೀಗಾಗಿ ಬೆಳಗಾವಿಯಲ್ಲಿ ಅನಧಿಕೃತ ಹೂಡಿಕೆ ಕಂಪನಿಗಳ ಮೇಲೆ ದಾಳಿ ಮುಂದುವರಿದಿದ್ದು, ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ.

ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ಆದೇಶ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಶ್ರವಣಕುಮಾರ್ ನಾಯಕ್ ಅವರ ನೇತೃತ್ವದಲ್ಲಿ ಶುಕ್ರವಾರ ಸಂಜೆಯಿಂದ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಬೆಳಗಾವಿಯ ಟಿಳಕವಾಡಿಯಲ್ಲಿರುವ ಗೋವರ್ಧನ್ ಎಲ್‌ಎಲ್‌ಪಿ ಕಂಪನಿ ಹಾಗೂ ಮಹಾತ್ಮಾ ಫುಲೆ ರಸ್ತೆಯಲ್ಲಿರುವ ಸಿಟಿ ಇಂಡೆಕ್ಸ್ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಸಾರ್ವಜನಿಕರಿಗೆ ಶೇ.4-5ಗೆ ಬಡ್ಡಿ ಕೊಡುವುದಾಗಿ ಆಮಿಷವೊಡ್ಡಿ ಹಣ ಸಂಗ್ರಹ ಮಾಡುತ್ತಿದ್ದರು. ಈ ಮೂಲಕವೇ ಹೂಡಿಕೆದಾರರಿಂದ ಕೋಟ್ಯಂತರ ರುಪಾಯಿ ಹಣ ಸಂಗ್ರಹ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಕಂದಾಯ, ಸಹಕಾರ ಇಲಾಖೆ, ಪೊಲೀಸ್ ಇಲಾಖೆ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ತಡರಾತ್ರಿವರೆಗೂ ಈ ಕಾರ್ಯವನ್ನು ಮುಂದವರಿಸಿದ್ದರು.ಈ ವೇಳೆ ಪೊಲೀಸರು ಬಿಗಿ ಭದ್ರತೆ ನೀಡಿದ್ದರು. ಸಾರ್ವಜನಿಕರ ಹಣ ದುರುಪಯೋಗ ಆರೋಪದಡಿ ಈ ದಾಳಿ ಮಾಡಿದ್ದಾರೆ. ಟಿಳಕವಾಡಿ, ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಶಿವಂ ಅಸೋಸಿಯೇಷನ್ ಹಾಗೂ ಆದಿತ್ಯರಾಜ್ ಕ್ಯಾಪಿಟಲ್ ಮೇಲೆ ದಾಳಿಯಾಗಿತ್ತು.ಜಿಲ್ಲಾಧಿಕಾರಿ ಆದೇಶದ ಮೇರೆಗೆ ಎರಡು ಕಡೆ ದಾಳಿ ಮಾಡಿದ್ದೇವೆ. ಗ್ರೋ ಧನ್'''''''' ಕಂಪನಿ ಹಾಗೂ ಸಿಟಿ ಇಂಡೆಕ್ಸ್ ಮೇಲೆ ದಾಳಿ ಮಾಡಿದ್ದೇವೆ. ಗ್ರೋ ಧನ್ ಕಂಪನಿಯಲ್ಲಿ ಹೆಚ್ಚು ಬಡ್ಡಿ ಆಮಿಷವೊಡ್ಡಿ ಹೂಡಿಕೆ ಮಾಡಿಕೊಂಡಿದ್ದು ಕಂಡುಬಂದಿದೆ. 1100 ಜನರಿಂದ ₹38 ಕೋಟಿವರೆಗೂ ಹೂಡಿಕೆ ಆಗಿರುವುದು ಕಂಡುಬಂದಿದೆ. ಕೈಸಾಲ (ಹ್ಯಾಂಡಲೋನ್) ರೂಪದಲ್ಲಿ ಹಣ ಸಂಗ್ರಹಿಸಿದ್ದಾರೆ. ಶನಿವಾರ ಬೆಳಗ್ಗೆ ತನಿಖಾ ವರದಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಕೆ ಮಾಡುತ್ತೇವೆ. ಗ್ರೋಧನ್ ದಾಳಿ ಬಗ್ಗೆ ಶನಿವಾರ ಕೂಡ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುತ್ತೇನೆ. ಮತ್ತೊಂದೆಡೆ ಸಿಟಿ ಇಂಡೆಕ್ಸ್‌ನಲ್ಲಿ 1,500 ಜನ ಹೂಡಿಕೆ ಮಾಡಿದ್ದಾರೆ. ₹30 ಕೋಟಿ ಹೂಡಿಕೆ ಆಗಿರುವುದು ಕಂಡು ಬಂದಿದೆ. ಡಿಬೆಂಚರ್ ರೂಪದಲ್ಲಿ ಹಣ ಪಡೆದಿರುವುದು ಕಂಡುಬಂದಿದೆ. ಸಿಟಿ ಇಂಡೆಕ್ಸ್ ಕಂಪನಿ ಮೇಲೆ ಶನಿವಾರೂ ದಾಳಿ ಮುಂದುವರಿಯಲಿದೆ. ಸೆಬಿಯಲ್ಲಿ ಸಿಟಿ ಇಂಡೆಕ್ಸ್ ರಿಜಿಸ್ಟರ್ ಇರುವುದು ಕಂಡು ಬಂದಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಉಪವಿಭಾಗಾಧಿಕಾರಿ ಶ್ರವಣಕುಮಾರ್ ತಿಳಿಸಿದರು.