ಅಪಪ್ರಚಾರದಿಂದ ವಿಚಲಿತನಾಗುವುದಿಲ್ಲ: ಲಮಾಣಿ

| Published : Nov 20 2025, 01:00 AM IST

ಸಾರಾಂಶ

ನನ್ನ ಅಭಿವೃದ್ಧಿ ಕೆಲಸಗಳಿಂದ ವಿಚಲಿತರಾದ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ವಿಚಲಿತನಾಗುವುದಿಲ್ಲ ಎಂದು ಸ್ಥಳೀಯ ಶಾಸಕ, ಉಪ ಸಭಾಪತಿ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಹಾವೇರಿ: ನನ್ನ ಅಭಿವೃದ್ಧಿ ಕೆಲಸಗಳಿಂದ ವಿಚಲಿತರಾದ ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ನಾನು ವಿಚಲಿತನಾಗುವುದಿಲ್ಲ. ನಾನು ನನ್ನ ಮತದಾರರೊಂದಿಗೆ ನಿರಂತರವಾಗಿ ಸದಾ ಸಂಪರ್ಕದಲ್ಲಿದ್ದು, ಅವರ ಪ್ರತಿ ಕಷ್ಟ-ಸುಖಗಳಲ್ಲಿ ಭಾಗಿಯಾಗುವುದು ನನ್ನ ಆದ್ಯತೆಯಾಗಿದೆ ಎಂದು ಸ್ಥಳೀಯ ಶಾಸಕ, ಉಪ ಸಭಾಪತಿ ರುದ್ರಪ್ಪ ಲಮಾಣಿ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾಲೂಕಿನ ಶಾಸಕ ರುದ್ರಪ್ಪ ಲಮಾಣಿಗೆ ಘೇರಾವ್ ಹಾಕುತ್ತಿದ್ದಾರೆ. ಕ್ಷೇತ್ರದ ಅಭಿವೃದ್ಧಿಯನ್ನು ರುದ್ರಪ್ಪ ಲಮಾಣಿ ಮರೆತಿದ್ದಾರೆ. ಸಾರ್ವಜನಿಕರು ರುದ್ರಪ್ಪ ಲಮಾಣಿ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಇತ್ಯಾದಿ ಶೀರ್ಷಿಕೆಗಳಡಿ ಸಾಮಾಜಿಕ ಜಾಲತಾಲಗಳಲ್ಲಿ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.

ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮಕ್ಕೆ ಹೋದಾಗ ಜನರು ಕೆಲವು ಸಮಸ್ಯೆ ಹೇಳಿಕೊಂಡಿದ್ದಾರೆ, ಕನವಳ್ಳಿ ಗ್ರಾಮದ ಮುಖ್ಯರಸ್ತೆಯಿಂದ ಬರಡಿ ಗ್ರಾಮಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯ ಪರಿಸ್ಥಿತಿ ಪರಿಶೀಲಿಸುವಂತೆ ಮನವಿ ಮಾಡಿದ್ದರು. ಖುದ್ದು ಪರಿಶೀಲಿಸಿದಾಗ ಅವರು ತಮ್ಮ ನೋವು ತೊಂಡಿಕೊಂಡಿದ್ದಾರೆ. ಅಲ್ಲದೇ ಹೊಸರಿತ್ತಿ ಗ್ರಾಮದಲ್ಲಿ ಹೈಮಾಸ್ಕ್ ದೀಪ ಸರಿಪಡಿಸುವಂತೆ ವಿನಂತಿಸಿದ್ದಾರೆ. ಅದನ್ನು ದುರಸ್ತಿ ಮಾಡಲು ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದಿದ್ದಾರೆ.

ಹಾವೇರಿ ಕ್ಷೇತ್ರದ ಅಭಿವೃದ್ಧಿಗಾಗಿ ಮುಖ್ಯಮಂತ್ರಿ ವಿಶೇಷವಾಗಿ ₹೫೦ ಕೋಟಿಗಳ ಅನುದಾನ ಹಂಚಿಕೆ ಮಾಡಿದ್ದು, ಇದರಲ್ಲಿ ಲೋಕೋಪಯೋಗಿ ಹಾಗೂ ಗ್ರಾಮೀಣ ಭಾಗದ ರಸ್ತೆಗಳು, ದೇವಸ್ಥಾನಗಳ ಜೀರ್ಣೋದ್ಧಾರ, ಸಣ್ಣ ಸಣ್ಣ ಸಮುದಾಯಗಳ ಸಮುದಾಯಭವನಗಳ ನಿರ್ಮಾಣ ಸೇರಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ನನ್ನ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ ಎಂದಿದ್ದಾರೆ.

ಉಪಸಭಾಪತಿ ಹುದ್ದೆಯ ಕಾರ್ಯಭಾರ ಹಾಗೂ ಅನಾರೋಗ್ಯದಿಂದ ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ನಾನು ಈಘ ಸಂಪೂರ್ಣ ಗುಣಮುಖನಾಗುತ್ತಿದ್ದು, ಹೆಚ್ಚಿನ ಸಮಯವನ್ನು ಕ್ಷೇತ್ರದ ಮತದಾರರೊಂದಿಗೆ ಇರಲು ಸದಾ ಬಯಸುತ್ತೇನೆ ಎಂದು ಹೇಳಿದರು.