ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ವೈಭವದ ದೀಪಾಲಂಕಾರವನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ್ ಶೆಟ್ಟಿ ಶನಿವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ತಲ್ಲೂರು ಡಾ. ಶಿವರಾಮ ಶೆಟ್ಟಿ ಎಲ್ಲಿ ನಾವು ದೀಪವನ್ನು ಬೆಳಗುತ್ತೇವೋ ಅಲ್ಲಿ ಭಗವಂತನ ಸಾನಿಧ್ಯ ಇದ್ದೇ ಇರುತ್ತದೆ. ಭಗವಂತನಲ್ಲಿ ನಮ್ಮ ಕಷ್ಟವನ್ನು ತೋಡಿಕೊಂಡಾಗ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. ಆದ್ದರಿಂದಲೇ ದೇವರ ಕಾರ್ಯವನ್ನು ಎಲ್ಲೇ ಹಮ್ಮಿಕೊಂಡರೂ ಕೂಡ ಭಕ್ತರು ತಮ್ಮ ಸೇವೆಯನ್ನು ತನು ಮನ ಧನದ ಮೂಲಕ ನೀಡಿ ಯಶಸ್ವಿಗೊಳಿಸುತ್ತಾರೆ. ಭಗವಂತನನ್ನು ತೃಪ್ತಿಗೊಳಿಸುವ ಸಲುವಾಗಿ ಬನ್ನಂಜೆ ದೇವಳದಲ್ಲಿ ಬ್ರಹ್ಮಕಲಶ ನಡೆಯುತ್ತಿದ್ದು ಭಕ್ತಾದಿಗಳೆಲ್ಲರೂ ಸೇರಿ ತಮ್ಮ ಕೈಯಿಂದಾದ ಸೇವೆ ಮಾಡುವ ಮೂಲಕ ಅದನ್ನು ಯಶಸ್ವಿಗೊಳಿಸಬೇಕು ಎಂದರು.ಈ ವೇಳೆ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮಾಧವ ಪೂಜಾರಿ, ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯಾಯ, ಹಿರಿಯರಾದ ಭುಜಂಗ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾದ ರಮೇಶ್ ಕಾಂಚನ್, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.