ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆಯಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡುವ ಮಾಜಿ ಸಂಸದರಾದ ದಿ. ಐ.ಎಂ. ಜಯರಾಮ ಶೆಟ್ಟಿ ಅವರ ದೂರದೃಷ್ಟಿಯ ಫಲವಾಗಿ 2004ರಲ್ಲಿ ‘ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ’ (ಎಂಐಟಿಕೆ) ಉದಯಿಸಿತು. ಈ ಐಎಂಜೆ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆಯನ್ನು ಶುಕ್ರವಾರ ಅತ್ಯಂತ ಸಡಗರದಿಂದ ಆಚರಿಸಲಾಯಿತು. ಕಾರ್‍ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ‘ಒಂದು ಸಂಸ್ಥೆಯನ್ನು ಕಟ್ಟುವುದು ಸುಲಭದ ಮಾತಲ್ಲ. ಜಯರಾಮ ಶೆಟ್ಟಿ ಅವರು ಈ ಗ್ರಾಮೀಣ ಪ್ರದೇಶದಲ್ಲಿ ಇಂತಹ ಒಂದು ಅತ್ಯುನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಈ ಭಾಗದ ಶೈಕ್ಷಣಿಕ ಚಿತ್ರಣವನ್ನೇ ಬದಲಿಸಿದ್ದಾರೆ. ಇಂದು ಇದು ಕೇವಲ ಎಂಜಿನಿಯರಿಂಗ್‌ಗೆ ಸೀಮಿತವಾಗದೆ, ವಿಜ್ಞಾನ, ವಾಣಿಜ್ಯ ಹಾಗೂ ನರ್ಸಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪಸರಿಸಿರುವುದು ಶ್ಲಾಘನೀಯ. ವಿದ್ಯಾರ್ಥಿಗಳು ಜಯರಾಮ ಶೆಟ್ಟಿ ಅವರ ಜೀವನವನ್ನು ಆದರ್ಶವಾಗಿರಿಸಿಕೊಡು ಯಶಸ್ಸಿನತ್ತ ಸದಾ ಪ್ರಯತ್ನಿಸಿ ಹಾಗೂ ಪರಿಸರ ಸಂರಕ್ಷಣೆಗೆ ಮೊದಲ ಆಧ್ಯತೆ ನೀಡಿ ಸಮಾಜಮುಖಿ ಕಾರ್‍ಯಗಳಿಗೆ ಹೆಚ್ಚು ಒತ್ತು ಕೊಡಿ ಎಂದು ಹೇಳಿದರು.

ಬೆಂಗಳೂರಿನ ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ಸಂಸ್ಥಾಪಕ ಅಧ್ಯಕ್ಷ ಆರ್. ಉಪೇಂದ್ರ ಶೆಟ್ಟಿ ಅವರು ಗೌರವ ಅತಿಥಿಗಳಾಗಿ ಆಗಮಿಸಿ, ಸಂಸ್ಥೆಯ ಬೆಳವಣಿಗೆಯನ್ನು ಪ್ರಶಂಸಿಸಿದರು. ಜಯರಾಮ ಶೆಟ್ಟಿ ನಡೆದುಬಂದ ಹಾದಿಯನ್ನು ಮೆಲುಕು ಹಾಕುತ್ತ ಅವರು ಹೇಗ ಒಬ್ಬ ಮಹಾನ್ ನಾಯಕನಾಗಿ ಗುರುತಿಸಿಕೊಂಡರು ಎಂದು ವಿವರಿಸಿ, ವಿದ್ಯಾರ್ಥಿಗಳು ಈ ಸುಸಜ್ಜಿತ ಸಂಸ್ಥೆಯ ಪ್ರಯೋಜನ ಪಡೆದುಕೊಂಡು ಸಮಾಜದ ಆಸ್ತಿಯಾಗಬೇಕು ಎಂದರು. ಐಎಂಜೆ ಸಂಸ್ಥೆಗಳ ಅಧ್ಯಕ್ಷ ಸಿದ್ದಾರ್ಥ ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದು, ಈ ವಿದ್ಯಾಸಂಸ್ಥೆಯ ಬೆಳವಣಿಗೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ತಂದೆಯ ಕನಸನ್ನು ಸಾಕಾರಗೊಳಿಸಲು ಮುಂದೆಯೂ ಕೈಜೋಡಿಸಬೇಕು ಎಂದು ಕೇಳಿಕೊಂಡರು.

ಎಂ.ಎನ್.ಬಿ.ಎಸ್. ಟ್ರಸ್ಟಿಗಳಾದ ರಾಮ್ ರಥನ್ ಜೆ. ಶೆಟ್ಟಿ, ಸುಧಾಕರ ಶೆಟ್ಟಿ, ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಎಸ್.ಎನ್. ಭಟ್ ಉಪಸ್ಥಿತರಿದ್ದರು. 2004ರ ಮೈಲಿಗಲ್ಲಿನಿಂದ ಇಂದಿನ ಐ.ಎಂ.ಜೆ ಸಂಸ್ಥೆಯವರೆಗಿನ ಬೆಳವಣಿಗೆಯ ಕಿರುಚಿತ್ರಣವನ್ನು ಇದೇ ಸಂದರ್ಭ ಪ್ರದರ್ಶಿಸಲಾಯಿತು. ಐ.ಎಂ.ಜೆ.ಐ.ಎಸ್.ಸಿ. ಪ್ರಾಂಶುಪಾಲೆ ಡಾ. ಪ್ರತಿಭಾ ಪಟೇಲ್ ಸ್ವಾಗತಿಸಿ, ಐ.ಎಸ್. ವಿಭಾಗದ ಮುಖ್ಯಸ್ಥ ಡಾ.ಜೆ. ಪ್ರಕಾಶ ಹಾಗೂ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ. ರೂಪಶ್ರೀ ಅತಿಥಿ ಪರಿಚಯ ನೀಡಿ, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಜೆನಿಫ಼ರ್ ಮೆನೇಜಸ್ ವಂದಿಸಿದರು. ಪ್ರಾಧ್ಯಾಪಕಿ ರಾಜೇಶ್ವರಿ ಶೆಟ್ಟಿ ನಿರೂಪಿಸಿದರು.