ಬೆಂಗಳೂರು : ಕುವೆಂಪು ವಿರಚಿತ ನಾಗೀತೆಗೆ ‘ಬೌದ್ಧರುದ್ಯಾನ’ ಎಂಬ ಪದ ಸೇರ್ಪಡೆ ಮಾಡಬೇಕೆಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ನೇತೃತ್ವದ ಸಮಿತಿ ಶಿಫಾರಸಿಗೆ ಕರ್ನಾಟಕ ವಿಕಾಸ ರಂಗ ಮತ್ತು ಕನ್ನಡ ಜನಶಕ್ತಿ ಕೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕೂಡಲೇ ಈ ಶಿಫಾರಸನ್ನು ಸರ್ಕಾರ ತಿರಸ್ಕರಿಸಬೇಕು ಎಂದು ಒತ್ತಾಯಿಸಿವೆ. 

ಸರ್ಕಾರದ ನೈತಿಕ ಜವಾಬ್ದಾರಿ

 ಒಬ್ಬ ಕವಿಯ ಗೀತೆಯನ್ನು ಬಳಸಿಕೊಳ್ಳುವಾಗ ಕವಿತೆಯ ಮೂಲ ರಚನೆಯ ಯಾವೊಂದು ಶಬ್ದವನ್ನೂ ತೆಗೆದು ಹಾಕದೆ, ಹೊಸದಾಗಿ ಸೇರ್ಪಡೆ ಮಾಡದೆ ಬಳಸಿಕೊಳ್ಳಬೇಕಾಗಿರುವುದು ಪ್ರತಿಯೊಂದು ಸರ್ಕಾರದ ನೈತಿಕ ಜವಾಬ್ದಾರಿ. ಆದರೆ, ಪ್ರಸ್ತುತ ಸರ್ಕಾರವು ನಾಡಗೀತೆಗೆ ‘ಬೌದ್ಧರುದ್ಯಾನ’ ಎಂಬ ಪದ ಸೇರ್ಪಡೆ ಮಾಡಲು ಹೊರಟಿರುವುದು ಕವಿಯ ಮೂಲ ಆಶಯಕ್ಕೆ ಧಕ್ಕೆ ಉಂಟು ಮಾಡುವುದಾಗಿದೆ. ಜತೆಗೆ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿಗೆ ಸರ್ಕಾರ ಅಪಮಾನ ಮಾಡಲು ಹೊರಟಿದೆ ಎಂದು ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ, ಕರ್ನಾಟಕ ವಿಕಾಸ ರಂಗದ ಅಧ್ಯಕ್ಷ ವ.ಚ. ಚನ್ನೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೂಲ ಆಶಯಕ್ಕೆ ಧಕ್ಕೆ ತರುವುದು ಒಪ್ಪಲ್ಲ:

ಕವಿಗಳ ಮೂಲ ಆಶಯಕ್ಕೆ ಧಕ್ಕೆ ತರುವುದನ್ನು ನಾವು ಒಪ್ಪುವುದಿಲ್ಲ. ಈ ಗೊಂದಲಗಳಿಗೆ ಸರ್ಕಾರ ಇತಿಶ್ರೀ ಹಾಡಬೇಕು. ಒಂದು ವೇಳೆ ಸರ್ಕಾರ ಹೊಸ ತಿದ್ದುಪಡಿ ಒಪ್ಪಿ ಆದೇಶ ಹೊರಡಿಸಿದಲ್ಲಿ, ಅಧಿಕೃತವಲ್ಲದ ಈ ತಿದ್ದುಪಡಿ ಕ್ರಮದ ವಿರುದ್ಧ ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಲಾಗಿದೆ ಸಂಘಟನೆಗಳು ಎಚ್ಚರಿಕೆ ನೀಡಿವೆ.ಕುವೆಂಪು ವಿರಚಿತ ನಾಡಗೀತೆ ‘ಜಯ ಭಾರತ ಜನನಿಯ ತನುಜಾತೆ’ ಪದ್ಯದಲ್ಲಿ ‘ಕಪಿಲ, ಪತಂಜಲ, ಗೌತಮ ಜಿನನುತ’ ಅಂದರೆ, ಗೌತಮ ಮತ್ತು ಜಿನ ಮುನಿಗಳಿಂದ ಕೊಂಡಾಡಲ್ಪಟ್ಟ ಕರ್ನಾಟಕದ ಹಿರಿಮೆ ಬಣ್ಣಿಸಲಾಗಿದೆ. ಈ ಗೀತೆಯನ್ನು ಕರ್ನಾಟಕದ ಅಧಿಕೃತ ರಾಜ್ಯಗೀತೆಯಾಗಿ 2004ರಲ್ಲಿ ಘೋಷಿಸಲಾಗಿದೆ. ಗೌತಮ ಎಂಬ ಪದ ಬಳಕೆ ಬೌದ್ಧ ಧರ್ಮ ಸಂಸ್ಥಾಪಕ ಗೌತಮ ಬುದ್ಧ ಅವರದ್ದೇ ಆಗಿರುವಾಗ ಬೌದ್ಧರುದ್ಯಾನ ಎಂಬ ಪದವನ್ನು ಮತ್ತೇಕೆ ಬಳಸುವ ಅಗತ್ಯ ಇದೆ ಎಂದು ಕರ್ನಾಟಕ ವಿಕಾಸ ರಂಗ ಪ್ರಶ್ನಿಸಿದೆ.


ಈ ನಾಡಿನ ಕನ್ನಡ ವಿದ್ವಾಂಸರೇ ಅಧಿಕ ಮಂದಿ ಇದ್ದ ಸಮಿತಿಯು ಪ್ರಸ್ತುತ ನಾಡಗೀತೆಯ ಸಾಲುಗಳಲ್ಲಿರುವ ಹಿಂದೂ ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಭಾಗದಲ್ಲಿ ಬೌದ್ಧರುದ್ಯಾನ ಎಂಬ ಶಬ್ದ ಸೇರಿಸಲು ಶಿಫಾರಸು ಮಾಡಿರುವುದು ದುರದೃಷ್ಟಕರ. ಸರ್ಕಾರದ ಈ ನಿರ್ಧಾರದ ಹಿಂದೆ ಡಾ.ಅಂಬೇಡ್ಕರ್‌ ಪ್ರಭಾವದಿಂದ ಬೌದ್ಧ ಧರ್ಮಕ್ಕೆ ಒಲಿದಿರುವ ದಲಿತರ ಮನವೊಲಿಸುವ ಹಾಗೂ ಮತಗಿಟ್ಟಿಸುವ ರಾಜಕೀಯ ಹುನ್ನಾರ ಇದರಲ್ಲಿ ಅಡಗಿದೆ ಎಂದು ಕನ್ನಡ ಜನಶಕ್ತಿ ಕೇಂದ್ರ ಸಂಶಯ ವ್ಯಕ್ತಪಡಿಸಿದೆ.