ಸಾರಾಂಶ
ಬೇಡಿಕೆ ಈಡೇರದಿದ್ದರೆ ನೀರು ಬಂದ್ , ರಸ್ತೆ ಗುಡಿಸಲ್ಲ: ಎಚ್ಚರಿಕೆ । ಮಾಜಿ ಸಚಿವ ಡಿ.ಎನ್.ಜೀವರಾಜ್, ಮುಖಂಡರು ಭೇಟಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಪೌರ ನೌಕರರ ಮುಷ್ಕರ 4 ನೇ ದಿನಕ್ಕೆ ಕಾಲಿಟ್ಟಿದ್ದು ಶುಕ್ರವಾರ ಬೆಳಿಗ್ಗೆಯಿಂದ ಸಂಜೆವರೆಗೂ ಪಟ್ಟಣ ಪಂಚಾಯಿತಿ ಎದುರು ಘೋಷಣೆ ಕೂಗುತ್ತಾ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಸಂಘದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಮಾತನಾಡಿ, ರಾಜ್ಯಾದ್ಯಂತ ಮೇ 27 ರಿಂದ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಆಶ್ವಾಸನೆ ಮಾತ್ರ ನೀಡುತ್ತಿವೆ. ಆದರೆ ಬೇಡಿಕೆ ಈಡೇರಿಲ್ಲ. ಸಿದ್ದರಾಮಯ್ಯ ಸರ್ಕಾರ 2 ಬಾರಿ ಪೌರ ಕಾರ್ಮಿಕರನ್ನು ಕಾಯಂ ಗೊಳಿಸಿದೆ. ಆದರೆ, ಹೊರ ಗುತ್ತಿಗೆ ನೌಕರರಾದ ವಾಟರ್ ಮ್ಯಾನ್, ಡಾಟಾ ಆಪರೇಟರ್,ಟ್ರಾಕ್ಟರ್ ಚಾಲಕರು,ಲೋಡರ್ಸ್ ಗಳನ್ನು ಕಾಯಂಗೊಳಿಸಿಲ್ಲ. ಸರ್ಕಾರದಿಂದ ನಮಗೆ ನೇರವಾಗಿ ಸಂಬಳ ನೀಡಬೇಕು. ಈಗ ಗುತ್ತಿಗೆದಾರರ ಮೂಲಕ ಸಂಬಳ ನೀಡಲಾಗುತ್ತಿದೆ. ಕಳೆದ 4 ದಿನದಿಂದ ಮುಷ್ಕರ ಮಾಡುತ್ತಿದ್ದರೂ ಮಾನವೀಯತೆಯಿಂದ ಸ್ವಲ್ಪ ಕೆಲಸ ಮಾಡಿದ್ದೇವೆ. ಆದರೆ, ನಮ್ಮ ಬೇಡಿಕೆ ಈಡೇರ ದಿದ್ದರೆ ಶನಿವಾರದಿಂದ ನೀರು ಬಿಡುವುದನ್ನು ನಿಲ್ಲಿಸುತ್ತೇವೆ. ರಸ್ತೆ ಶುಚಿಮಾಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆ ಸ್ಥಳಕ್ಕೆ ವಾಲ್ಮೀಕಿ ಸಂಘದ ಕ್ಷೇತ್ರ ಅಧ್ಯಕ್ಷ ಶ್ರೀನಿವಾಸ್ ಭೇಟಿ ನೀಡಿ ಬೆಂಬಲ ಸೂಚಿಸಿದರು.ಪ್ರತಿಭಟನೆಯಲ್ಲಿ ಪೌರ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ವಿಜಯಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್, ಖಜಾಂಚಿ ಹರೀಶ್, ಇತರ ಪದಾಧಿಕಾರಿಗಳು, ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
-- ಬಾಕ್ಸ್ --ಮಾಜಿ ಸಚಿವ ಡಿ.ಎನ್.ಜೀವರಾಜ್, ಪಪಂಮಾಜಿ ಅಧ್ಯಕ್ಷ ಆಶೀಶ್ ಕುಮಾರ್ ಹಾಗೂ ಬಿಜೆಪಿ ಮುಖಂಡರು ಪೌರ ನೌಕರರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆಭೇಟಿ ನೀಡಿ ಬೆಂಬಲ ಸೂಚಿಸಿದರು.
ಈ ಸಂದರ್ಭದಲ್ಲಿ ಡಿ.ಎನ್.ಜೀವರಾಜ್ ಮಾತನಾಡಿ, ಪೌರ ಕಾರ್ಮಿಕರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕಿದೆ. ಆದರೆ, ಶಾಸಕರ ವ್ಯಾಪ್ತಿಯಲ್ಲಿ ಪೌರ ನೌಕರರಿಗೆ ನೀಡಬೇಕಾದ ಸೌಲಭ್ಯವನ್ನು ತಕ್ಷಣ ನೀಡಲು ಕ್ರಮ ತೆಗೆದು ಕೊಳ್ಳಬೇಕು. ಪೌರ ಕಾರ್ಮಿಕರಿಗೆ ಸವಲತ್ತು ನೀಡಬೇಕು. ಪೌರ ನೌಕರರ ಚಳವಳಿಗೆ ಬಿಜೆಪಿ ಬೆಂಬಲಿಸಲಿದೆ.ನಿಮ್ಮ ಮನವಿಯನ್ನು ವಿರೋಧ ಪಕ್ಷದ ನಾಯಕ ಅಶೋಕ್ ಅವರಿಗೆ ತಲುಪಿಸುತ್ತೇವೆ. ಅವರು ಪೌರ ನೌಕರರ ಧ್ವನಿಯಾಗಿ ಕೆಲಸ ಮಾಡಲಿದ್ದಾರೆ ಎಂದರು.ಪಪಂ ಮಾಜಿ ಅಧ್ಯಕ್ಷ ಬಿ.ಎಸ್.ಆಶೀಶ್ ಕುಮಾರ್ ಮಾತನಾಡಿ, ನಾನು ಅಧ್ಯಕ್ಷನಾಗಿದ್ದಾಗ ಪ್ರತಿ ತಿಂಗಳು 5 ನೇ ತಾರೀಕು ಸಂಬಳ ನೀಡುತ್ತಿದ್ದೆವು. ಈಗ ತಿಂಗಳ ಕೊನೆಯಾದರೂ ಸಂಬಳ ಬರುತ್ತಿಲ್ಲ. ಪಪಂನಲ್ಲಿ ಕೆಲವೇ ನೌಕರರು ಮಾತ್ರ ಕಾಯಂ ನೌಕರರಾಗಿದ್ದು ಉಳಿದವರು ಹೊರ ಗುತ್ತಿಗೆ ನೌಕರರಾಗಿದ್ದಾರೆ. ಎಲ್ಲರನ್ನೂ ಕಾಯಂಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಅಧ್ಯಕ್ಷ ಸುರಭಿ ರಾಜೇಂದ್ರ, ಸದಸ್ಯರಾದ ರೇಖಾ, ರೀನಾ, ಬಿಜೆಪಿ ಮುಖಂಡರಾದ ಪರ್ವೀಜ್, ಶೇಖರ್, ಮಂಜುನಾಥ್ ಲಾಡ್, ವೈ.ಎಸ್.ರವಿ, ಜಪ್ರುಲ್ಲಾ ಖಾನ್, ಎಂ.ಪಿ.ಸನ್ನಿ ಮತ್ತಿತರರು ಇದ್ದರು.