ಸಾರಾಂಶ
ಶಿಗ್ಗಾಂವಿ: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಬಹಳಷ್ಟು ಸಾಧನೆ ಮಾಡಿದೆ. ಹೊಸ ಹೊಸ ಸಂಶೋಧನೆಗಳಲ್ಲಿ ಭಾರತ ದಾಪುಗಾಲು ಇಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ತಿಳಿಸಿದರು.ತಾಲೂಕಿನ ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಲ್ಲಿಗೆದಂಡೆ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವಿಜ್ಞಾನ ಅಂದರೆ ಸತ್ಯದ ಅನ್ವೇಷಣೆಯಾಗಿದ್ದು, ಊಹಾಪೋಹಗಳನ್ನು ತಡೆಯುತ್ತದೆ. ವಿಜ್ಞಾನವು ಸತ್ಯವನ್ನು ಬಯಸುತ್ತದೆ, ಸತ್ಯವನ್ನು ಸ್ವಾಗತಿಸುತ್ತದೆ ಎಂದರು. ಕುಲಸಚಿವ ಪ್ರೊ. ಸಿ.ಟಿ. ಗುರುಪ್ರಸಾದ್ ಮಾತನಾಡಿ, ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಸಿ.ವಿ. ರಾಮನ್ ಅವರ ಅಪೂರ್ವ ಸಾಧನೆಯ ನೆನಪಿನಲ್ಲಿ ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನ ಎಂದು ಗುರುತಿಸಲಾಗಿದೆ. ಅವರು ೧೯೨೮ರ ಫೆ. ೨೮ರಂದು ರಾಮನ್ ಪರಿಣಾಮ ಎಂದೇ ಪ್ರಸಿದ್ಧವಾದ ತಮ್ಮ ಅಧ್ಯಯನದ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ಶಹಜಹಾನ್ ಮುದಕವಿ, ಡಾ. ಚಂದ್ರಪ್ಪ ಸೊಬಟಿ, ಡಾ. ಬಸವರಾಜ ಎಸ್.ಜಿ., ಡಾ. ವಿಜಯಲಕ್ಷ್ಮಿ ಗೆಟಿಯವರ, ಶರೀಪ ಮಾಕಪ್ಪನವರ ಸೇರಿದಂತೆ ಇತರರಿದ್ದರು. ಡಾ. ಗಿರಿಗೌಡ್ರ ನಿರೂಪಿಸಿದರು. ಬಸವರಾಜ ಜವಳಗಟ್ಟಿ ವಂದಿಸಿದರು.ನಾಳೆ ಉಚಿತ ನೇತ್ರ ತಪಾಸಣಾ ಶಿಬಿರ
ರಾಣಿಬೆನ್ನೂರು: ಸ್ಥಳೀಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಜೇಸಿಐ, ಎನ್.ಎಸ್. ಸ್ನೇಹಜ್ಯೋತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಹರನಗಿರಿ ಕನ್ನಡ ಸಾಹಿತ್ಯ ಪರಿಷತ್ ಘಟಕ, ಹಾವೇರಿ ಜಿಲ್ಲಾ ಕುಟುಂಬ ಕಲ್ಯಾಣ ಆರೋಗ್ಯ ಇಲಾಖೆ ಹಾಗೂ ಅಂಧತ್ವ ನಿವಾರಣೆ ಸಂಸ್ಥೆ, ಜಿಲ್ಲಾ ನೇತ್ರ ಸಂಚಾರಿ ಘಟಕ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಆಶ್ರಯದಲ್ಲಿ ಮಾ. 6ರಂದು ಉಚಿತ ನೇತ್ರ ತಪಾಸಣೆ ಮತ್ತು ಕಣ್ಣಿನ ಪೊರೆ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ತಾಲೂಕಿನ ಹರನಗಿರಿ ಗ್ರಾಮದ ಹೊಳಬಸವೇಶ್ವರ ಸಮುದಾಯ ಭವನದಲ್ಲಿ ಡಾ. ಪುಟ್ಟರಾಜ ಗವಾಯಿಗಳ ಜನ್ಮದಿನದ ಪ್ರಯುಕ್ತ ಶಿಬಿರ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.