ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ನೆಲಗಟ್ಟು ಭದ್ರವಾಗಿದ್ದು ಅದನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಇಂದು ಇಲ್ಲಿ ನುಡಿದರು.
ಹುಬ್ಬಳ್ಳಿ: ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ನೆಲಗಟ್ಟು ಭದ್ರವಾಗಿದ್ದು ಅದನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನದ ಶ್ರೀ ಮಡಿವಾಳ ರಾಜಯೋಗೀಂದ್ರ ಸ್ವಾಮಿಗಳು ಇಂದು ಇಲ್ಲಿ ನುಡಿದರು.
ವಿದ್ಯಾನಗರದ ಶ್ರೀ ಬನಶಂಕರಿ ದೇವಿ ದೇವಸ್ಥಾನದ ೨೭ ನೇ ಪ್ರತಿಷ್ಠಾಪನಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಾದ ನೀಡಿದ ಅವರು ಇಂದಿನ ಜನತೆಗೆ ಉನ್ನತ ಸಂಸ್ಕಾರ ನೀಡುವ ಅಗತ್ಯವಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ನಿರತರಾಗಿರುವ ಯುವ ಜನಾಂಗ ದೇಶದ ಉನ್ನತ ಪರಂಪರೆಯಿಂದ ದೂರವಾಗುತ್ತಿದ್ದು ಅವರಲ್ಲಿ ಶೃದ್ಧೆ, ಭಕ್ತಿ ಮತ್ತು ಅಧ್ಯಾತ್ಮಿಕತೆಯ ಭಾವ ಮೂಡಿಸಬೇಕೆಂದು ಕರೆ ನೀಡಿದರು.ಈ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾತ್ರ ಅತಿ ಮಹತ್ವದ್ದಾಗಿದೆ ಎಂದೂ ನುಡಿದರು.
ಚಂದ್ರಶೃಂಗ ಪೂರ್ಣಶೇಖರ ಪ್ರತಿಷ್ಠಾನದ ಧರ್ಮದರ್ಶಿಗಳಾದ ಶ್ರೀ ಶಾಕ್ಯಂ ಯುದಿಷ್ಠಿರ ಪ್ರಜ್ವಲ ಗುರೂಜಿಯವರು ಮಾತನಾಡಿ ಮಕ್ಕಳಿಗೆ ಉನ್ನತ ಸಂಸ್ಕಾರ ಮಾತೆಯ ಗರ್ಭದಿಂದಲೇ ಆರಂಭವಾಗುತ್ತದೆ. ಮಕ್ಕಳು ಹುಟ್ಟಿದ ನಂತರ ತಾಯಂದಿರು ನೀಡುವ ಸಂಸ್ಕಾರ ಅವರ ಭವಿಷ್ಯವನ್ನು ರೂಪಿಸುತ್ತದೆ. ಇದೇ ಮುಂದೆ ಇಡೀ ದೇಶದ ಸಂಸ್ಕೃತಿಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.ರಾಷ್ಟ್ರ ಮತ್ತು ಧರ್ಮ ದೇಶದ ಎರಡು ಕಣ್ಣುಗಳಿದ್ದಂತೆ. ದೇಶದ ಜನರು ರಾಷ್ಟ್ರ ಧರ್ಮ ಮತ್ತು ಮಾನವೀಯ ಧರ್ಮವನ್ನು ಜೀವನದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಇದೇ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಶಾಂತಾ ಬಸವರಾಜ ಅವರು ಬರೆದ ವಿಶ್ವಗುರು ಬಸವಣ್ಣ ಕೃತಿಯ ನಾಲ್ಕನೇ ಸಂಪುಟವನ್ನು ಉಭಯ ಶ್ರೀಗಳು ಬಿಡುಗಡೆ ಮಾಡಿದರು.ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಬಿ.ಎಲ್.ಕುಲಕರ್ಣಿ ಪ್ರಾಸ್ತಾವಿಕ ಮಾತುಗಳನ್ನು ಹೇಳಿ ಪೂಜ್ಯರನ್ನು ಸ್ವಾಗತಿಸಿದರು. ಬನಶಂಕರಿ ಬಡಾವಣೆಯ ನಿವಾಸಿಗಳ ಸಂಘದ ಅಧ್ಯಕ್ಷ ರಂಗಯ್ಯ ಬಿಜ್ಜೂರ ಅತಿಥಿಗಳ ಪರಿಚಯ ಮಾಡಿ ದೇಗುಲದವಪ್ರಗತಿ ವರದಿ ನೀಡಿದರು. ಆಡಳಿತ ಮಂಡಳಿಯ ಗೌರವಾಧ್ಯಕ್ಷ ಶಂಕರ ಮೂರ್ತಿಯವರು ಶಾಂತಾ ಬಸವರಾಜ ಅವರ ಕೃತಿ ಪರಿಚಯ ಮಾಡಿದರು. ಆಡಳಿತ ಮಂಡಳಿಯ ಅಧ್ಕ್ಷ ಅಜಿತ ರೋಖಡೆ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಮಹಿಳೆಯರಿಂದ ಸಹಸ್ರ ಕುಂಕುಮಾರ್ಚನೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.