ಕನ್ನಡಪ್ರಭ ವಾರ್ತೆ ಆನವಟ್ಟಿ

ಮೂರು ವರ್ಷದ ಹಿಂದೆ, ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ನೂತನ ಸಚಿವ ಸ್ಥಾನ ಪಡೆದುಕೊಂಡ ಎಸ್‌.ಮಧು ಬಂಗಾರಪ್ಪ ಆನವಟ್ಟಿಗೆ ಇಂದಿರಾ ಕ್ಯಾಂಟೀನ್‌‌ ಮಂಜೂರು ಮಾಡಿಸಿದರು. ವೇಗವಾಗಿ ಕಾಮಗಾರಿ ಪ್ರಾರಂಭವಾಯಿತು. ಆಗಿನ ಮುಖ್ಯಾಧಿಕಾರಿ ಎಡವಟ್ಟಿನಿಂದಾಗಿ ಮೂರು ವರ್ಷ ಕಳೆದರೂ ಇನ್ನೂ, ಕಾಮಗಾರಿ ಆಮೆಗತಿ ವೇಗದಲ್ಲೇ ಸಾಗುತ್ತಿದೆ.

ಮಂಜೂರು ಆಗಿರುವ ಇಂದಿರಾ ಕ್ಯಾಂಟೀನ್‌ ಪಟ್ಟಣದಲ್ಲಿ ಎಲ್ಲಿ ಮಾಡಬೇಕು ಎಂಬ ವಿಚಾರವಾಗಿ ಮುಖ್ಯಾಧಿಕಾರಿ ಅವರು ಮುಖಂಡರ, ಸಾರ್ವಜನಿಕರೊಂದಿಗೆ ಸಭೆ ಕರೆದು ಚರ್ಚೆ ಮಾಡಿ ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡು ಕಾಮಗಾರಿ ಆರಂಭಿಸಬೇಕಾಗಿತ್ತು.ಆದರೆ ಏನೂ ಮಾಡದೆ, ನಾಡ ಕಚೇರಿ ಮುಂದೆ ಗುತ್ತಿಗೆದಾರರಿಗೆ ಜಾಗ ನೀಡಿದರು. ಕಾಮಗಾರಿ ಪ್ರಾರಂಭವಾಗುತ್ತಲ್ಲೇ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದರು. ಕೆಲವರು ಪಟ್ಟಣ ಪಂಚಾಯಿತಿಗೆ ಹೋಗಿ ಮುಖ್ಯಾಧಿಕಾರಿ ಅವರಿಗೆ ಮೌಕಿಕವಾಗಿ ದುರಿದರೂ, ಏನು ಪ್ರಯೋಜನಾವಾಗಲಿಲ್ಲ.

ಪಟ್ಟಣ ಪಂಚಾಯಿತಿ ಹಾಗೂ ನಾಡ ಕಚೇರಿ ಅಕ್ಕಪಕ್ಕದಲ್ಲಿವೆ. ಪಂಚಾಯಿತಿಗೆ ರಾಷ್ಟ್ರೀಯ ಹಬ್ಬ, ಸಭೆ, ಸಮಾರಂಭ ನಡೆಸಲು ಜಾಗವಿರುವುದೆ ಸ್ವಲ್ಪ, ಅದರಲ್ಲೂ ಕ್ಯಾಂಟೀನ್‌ ನಿರ್ಮಾಣ ಮಾಡಿದರೆ, ಜಾಗವೇ ಇಲ್ಲದಂತೆ ಆಗುತ್ತದೆ. ಮತ್ತು ಬಸ್‌ ನಿಲ್ದಾಣ, ಆಸ್ಪತ್ರೆ ಮುತಾಂದ ಕಚೇರಿಗಳಿಂದ ದೂರವಿರುವುದರಿಂದ ಈ ಸರ್ಕಾರದ ಯೋಜನೆ ಸಾರ್ವಜನಿಕರಿಗೆ ಅನುಕೂಲ ಆಗುವುದಿಲ್ಲ ಎಂಬ ಚರ್ಚೆ ಜೋರಾಯಿತು.

ಕ್ಯಾಂಟಿನ್‌ ಸ್ಥಾಳಾಂತರಿಸಿದ ಮಧು ಬಂಗಾರಪ್ಪ:


ಕ್ಯಾಂಟಿನ್‌ ಕಾಮಗಾರಿ ಅರ್ಧದಷ್ಟು ಆಗಿತ್ತು. ಪಟ್ಟಣದ ಕೆಲವರು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಕಿವಿಗೆ ವಿಷಯ ತಿಳಿಸಿದರು. ಸಚಿವರಿಗೆ ವಿಚಾರ ತಿಳಿದ ತಕ್ಷಣ ಭೇಟಿ ನೀಡಿ, ಈ ಸ್ಥಳ ಕ್ಯಾಂಟೀನ್‌ಗೆ ಸೂಕ್ತವಾಗಿಲ್ಲ, ಕೂಡಲೆ ಸ್ಥಳಾಂತರ ಮಾಡಿ, ಆಸ್ಪತ್ರೆ ಆವರಣದಲ್ಲಿ ನಿರ್ಮಿಸುವಂತೆ ಸೂಚಿಸಿದರು.

ಕ್ಯಾಂಟಿನ್‌ ಅರ್ಧ ಕಾಮಗಾರಿ ಆಗಲು ಒಂದು ವರ್ಷ ಕಳೆದಿತ್ತು. ಸಚಿವರು ಸ್ಥಳಾಂತರ ಮಾಡಲು ಹೇಳಿದ ಮೇಲೆ, ದೊಡ್ಡ-ದೊಡ್ಡ ಸಿಮೆಂಟ್‌ ಗೋಡೆಗಳನ್ನು ಕಿತ್ತು ಆಸ್ಪತ್ರೆ ಆವರಣದಲ್ಲಿ ಸಾಗಿಸುವುದಕ್ಕೆ ಮತ್ತು ಆಸ್ಪತ್ರೆ ಜಾಗಕ್ಕೆ ಇದ್ದ ತೊಡಕುಗಳನ್ನು ನಿವಾರಣೆ ಮಾಡಿಕೊಳ್ಳಲು ಮತ್ತೊಂದು ವರ್ಷ ಕಳೆಯಿತು.

ಇಂದಿರಾ ಕ್ಯಾಂಟಿನ್‌ ಆಗುತ್ತೋ, ಇಲ್ಲವೋ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಹರಡಿತ್ತು. ಈ ವರ್ಷ ಅಮೆಗತಿ ಕಾಮಗಾರಿ ಮಾಡುತ್ತಲೆ ಗುತ್ತಿಗೆದಾರರು ಇಂದಿರಾ ಕ್ಯಾಟೀನ್‌ ಸಿದ್ದ ಮಾಡುತ್ತಿದ್ದಾರೆ.

ಆಸ್ಪತ್ರೆ ಮುಂಭಾಗ ಶನಿವಾರ ಸಂತೆ ಇರುವುದರಿಂದ ಸಾಕಾಷ್ಟು ವಾಹನಗಳು ನಿಲ್ಲುತ್ತವೆ. ವ್ಯವಹಾರ ಸಂಬಂಧಿತ ವಾಹನಗಳಿಗೆ ಬೇರೇಡೆ ಜಾಗ ತೋರಿಸಿ, ಇಲ್ಲಿ ಇಂದಿರಾ ಕ್ಯಾಂಟಿನ್‌ಗೆ ಬರುವ ಗ್ರಾಹಕರ ವಾಹನ, ಆಸ್ಪತ್ರೆಯ ರೋಗಿಗಳನ್ನು ತರುವ ವಾಹನಕ್ಕೆ ಮಾತ್ರ ಸಂಬಂಧಪಟ್ಟ ಅಧಿಕಾರಿಗಳು ಅವಕಾಶ ಮಾಡಿಕೊಡಬೇಕು.

ಸಂದೀಪ್‌ ನಿವಾಸಿ

ಕ್ಯಾಂಟೀನ್‌ ಸ್ಥಳಾಂತರದಿಂದ ಹಲವರಿಗೆ ಅನುಕೂಲ

ಸಚಿವ ಮಧು ಬಂಗಾರಪ್ಪ ಅವರು ಆಸ್ಪತ್ರೆ ಆವರಣದಲ್ಲಿ ಇಂದಿರಾ ಕ್ಯಾಂಟೀನ್‌ ಸ್ಥಳಾಂತರಿಸಿದ್ದರಿಂದ, ಹಳ್ಳಿಯಿಂದ ಬರುವ ರೋಗಿಗಳಿಗೆ, ಕೂಲಿ ಕಾರ್ಮಿಕರಿಗೆ, ಖಾಸಗಿ ಉದ್ಯೋಗಿಗಳಿಗೆ, ಸಣ್ಣ ಪುಟ್ಟ ತಿರುಗಾಡಿ ವ್ಯಾಪಾರ ಮಾಡುವವರಿಗೆ ಸೇರಿದಂತೆ ಎಲ್ಲರಿಗೂ ಅನುಕೂಲವಾಗುತ್ತದೆ. ಕ್ಯಾಂಟೀನ್‌ ಕಾಮಗಾರಿ ಮುಗಿಯುತ್ತ ಬಂದಿದೆ. ಇನ್ನೂ ಕೆಲವೇ ದಿನಗಳಲ್ಲಿ ಉದ್ಘಾಟನೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಮಧುಬಂಗಾರಪ್ಪ ಅವರು ತಿಳಿಸಿದ್ದಾರೆ ಎಂದು ಆನವಟ್ಟಿ ಪಟ್ಟಣ ಪಂಚಾಯಿತಿ ನಾಮ ನಿರ್ದೇಶನ ಸದಸ್ಯ ಅನೀಶ್‌ ಪಾಟೀಲ್‌ ಹೇಳಿದ್ದಾರೆ.

ಪಟ್ಟಣ ಪಂಚಾಯಿತಿಯಿಂದ ಕ್ಯಾಂಟೀನ್‌ನ ಸುತ್ತ ಕೆಲವೊಂದು ಸಣ್ಣ-ಪುಟ್ಟ ಕಾಮಗಾರಿ ನಡೆಯುತ್ತಿವೆ. ಅದಷ್ಟು ಬೇಗ ಮುಗಿಸಲಾಗುವುದು.

ಶಂಕರ್‌ ಮುಖ್ಯಾಧಿಕಾರಿ