ಕನ್ನಡಪ್ರಭ ವಾರ್ತೆ ಆಲೂರುತಾಲೂಕಿನ ಕೆ. ಹೊಸಕೋಟೆ ಹೋಬಳಿಯ ಕಾಡ್ಲೂರು ಕೊಪ್ಪಲು ಕೆ.ಬಿ.ಇ. ಮುತ್ತಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಕಟ್ಟಡದ ಮೇಲೆ ಅಳವಡಿಸಿದ್ದ ಕಬ್ಬಿಣದ ಶೀಟ್‌ಗಳು ಗಾಳಿ ಮಳೆಯಿಂದ ಕುಸಿದು ಬಿದ್ದಿರುವ ಘಟನೆ ನಡೆದಿದ್ದು ಶಾಲಾ ಮಕ್ಕಳು, ಶಿಕ್ಷಕರು,ಸಾರ್ವಜನಿಕರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಕಾರ್ಯದರ್ಶಿ ಸಾಹುಲ್ ಮಾತನಾಡಿ, ಕಳೆದ ಮೂರು ತಿಂಗಳ ಹಿಂದಷ್ಟೇ ನೂತನವಾಗಿ ನಿರ್ಮಾಣಗೊಂಡಿದ್ದ ಕಬ್ಬಿಣದ ಶೀಟ್ ಕುಸಿದು ಬಿದ್ದಿರುವುದು ಆತಂಕಕಾರಿ ಸಂಗತಿ ಸದ್ಯ ಶಾಲಾ ಮಕ್ಕಳು ಶಾಲೆ ಒಳಗಡೆ ಇರುವುದರಿಂದ ಅದೃಷ್ಟವಶಾತ್ ಘಟನೆ ವೇಳೆ ಯಾವುದೇ ಅನಾಹುತ ಸಂಭವಿಸಿಲ್ಲ ಈ ಶಾಲೆಯಲ್ಲಿ ಸುಮಾರು 50 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ವಿದ್ಯಾರ್ಥಿ, ಶಿಕ್ಷಕರು, ಭಾರೀ ದುರಂತರದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಕಳಪೆ ಕಾಮಗಾರಿಯೇ ಈ ಅವಘಡಕ್ಕೆ ಕಾರಣ ಶಾಲಾ ಕಟ್ಟಡದ ಮೇಲ್ಭಾಗಕ್ಕೆ ಅಳವಡಿಸಲಾಗಿದ್ದ ಬೃಹತ್ ಶೀಟ್‌ಗಳ ಚಾವಣಿಯು ಸಂಪೂರ್ಣವಾಗಿ ಕಿತ್ತು ಕೆಳಗೆ ಬಿದ್ದಿದೆ. ಶಾಲಾ ಅವಧಿಯಲ್ಲಿ ಅಥವಾ ಮಕ್ಕಳು ಓಡಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದ್ದರೆ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿತ್ತು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಘಟನೆಯ ಬಳಿಕ ಶಾಲಾ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು ಹಾಗೂ ಪೋಷಕರು ಶಿಕ್ಷಣ ಇಲಾಖೆ ಮತ್ತು ಸಂಬಂಧಪಟ್ಟ ಗುತ್ತಿಗೆದಾರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.ಎಸ್‌ ಡಿಎಂಸಿ ಮಾಜಿ ಅಧ್ಯಕ್ಷ ಶಂಶುದ್ದೀನ್ ಪುತ್ತು ಮಾತನಾಡಿ, ಇತ್ತೀಚೆಗೆ ನಿರ್ಮಾಣಗೊಂಡ ಚಾವಣಿಯು ಇಷ್ಟು ಬೇಗ ಕುಸಿದಿರುವುದು ಕಳಪೆ ಕಾಮಗಾರಿಯ ಗುಣಮಟ್ಟದ ಬಗ್ಗೆ ಗಂಭೀರ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅವರು ಆರೋಪಿಸಿದ್ದಾರೆ.

ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಿ ಮಕ್ಕಳ ಹಿತಾ ರಕ್ಷಣೆಯನ್ನು ಕಾಪಾಡುವ ಜವಾಬ್ದಾರಿವಹಿಸಬೇಕು ಈ ಕಳಪೆ ಕಾಮಗಾರಿಗೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಾನೂನುಬದ್ಧ ಮತ್ತು ಶಿಸ್ತುಕ್ರಮ ಕೈಗೊಳ್ಳಬೇಕು. ಜೊತೆಗೆ ಶಾಲಾ ಕಟ್ಟಡವನ್ನು ತುರ್ತು ಆದ್ಯತೆಯ ಮೇರೆಗೆ ದುರಸ್ತಿ ಮಾಡಿ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಎಸ್‌ ಡಿ ಎಂ ಸಿ ಮಾಜಿ ಅಧ್ಯಕ್ಷ ಶಂಶುದ್ದೀನ್ ಪುತ್ತು, ಎಸ್‌ಡಿಪಿಐ ಹಾಸನ ಜಿಲ್ಲಾ ಕೋಶಾಧಿಕಾರಿ ಸಾವುಲ್, ಸಹ ಕಾರ್ಯದರ್ಶಿ ಇಲ್ಯಾಸ್, ಗಿರೀಶ್, ಅಬ್ದುಲ್ ರೆಹಮಾನ್, ಶಾಲೆಯ ಶಿಕ್ಷಕರಾದ ಅಶೋಕ್, ಸಮದ್ ಮತ್ತು ಸಮೀರ್‌ ಸೇರಿದಂತೆ ಗ್ರಾಮಸ್ಥರಿದ್ದರು.