ಚಾಮರಾಜನಗರ: 2026-27ನೇ ಸಾಲಿನ ಪೂರ್ವ ಮುಂಗಾರು ಬೆಳೆ ಸಮೀಕ್ಷೆ ಆ್ಯಪ್‌ನಲ್ಲಿ ನೂತನವಾಗಿ ಅಳವಡಿಸಿರುವ ಫೇಸ್‌ ಲಾಗಿನ್‌ ತಂತ್ರಾಂಶದಿಂದ ಬೆಳೆ ಸಮೀಕ್ಷೆಗೆ ತೊಂದರೆಯಾಗಿದ್ದು ಫೇಸ್‌ ಲಾಗಿನ್‌ ತೆಗೆದುಹಾಕಬೇಕು ಎಂದು ಜಿಲ್ಲಾ ಬೆಳೆ ಸಮೀಕ್ಷೆದಾರರು ಒತ್ತಾಯಿಸಿ ಅಪರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ ಅವರಿಗೆ ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘದ ವತಿಯಿಂದ ಮನವಿ ಸಲ್ಲಿಸಿ ಬೆಳೆ ಸಮೀಕ್ಷೆಗೆ ಫೇಸ್‌ ಲಾಗಿನ್‌ ತಂತ್ರಾಂಶ ಹೊಸದಾಗಿ ಅಳವಡಿಸಿರುವುದು ಅನವಶ್ಯಕವಾಗಿದ್ದು, ಬೆಳೆ ಸಮೀಕ್ಷೆ ಕೈಗೊಳ್ಳುವ ಖಾಸಗಿ ನಿವಾಸಿಗಳಿಗೆ ಅನುಕೂಲವಾಗುವಂತೆ ಫೇಸ್‌ ಲಾಗಿನ್‌ ತಂತ್ರಾಂಶ ತೆಗೆಯಲು ಒತ್ತಾಯಿಸಿ ಮನವಿ ಸಲ್ಲಿಸಿದರು.

2017ರಿಂದ 2025ರ ಹಿಂಗಾರು ಬೆಳೆ ಸಮೀಕ್ಷೆಗೆ ನೀಡಿದ್ದ ಆ್ಯಪ್‌ನಿಂದ ಬೆಳೆ ಸಮೀಕ್ಷೆಗೆ ಅನುಕೂಲವಾಗುವಂತೆ ಆ್ಯಪ್‌ ಅನ್ನು ಅಪ್‌ಡೆಟ್‌ ಮಾಡಲಾಗುತ್ತಿತ್ತು, ಈ ಬಾರಿ ಸಮೀಕ್ಷೆಗೆ ನೀಡಿರುವ ಪೂರ್ವ ಮುಂಗಾರು ಬೆಳೆ ಸಮೀಕ್ಷೆ 2026-27ನೇ ಆ್ಯಪ್ ನಿಂದ ಸಮೀಕ್ಷೆ ಪೂರ್ಣಗೊಳಿಸಲು ಕಷ್ಟಕರವಾಗಿದೆ, ಆದ್ದರಿಂದ ಬೆಳೆ ಸಮೀಕ್ಷೆ ಆ್ಯಪ್‌ ನಲ್ಲಿ ಅಳವಡಿಸಿರುವ ಪೇಸ್‌ ಲಾಗಿನ್‌ ತಂತ್ರಾಂಶವನ್ನು ಕೈಬಿಡುವವರೆಗೂ ಬೆಳೆ ಸಮೀಕ್ಷೆ ಕೈಗೊಳ್ಳುವುದಿಲ್ಲ ಎಂದು ತೀರ್ಮಾನಿಸಿರುವುದಾಗಿ ತಿಳಿಸಿದರು.

ಬೆಳೆ ಸಮೀಕ್ಷೆ ಆ್ಯಪ್‌ನಿಂದ ಸಮೀಕ್ಷೆದಾರರು ಬೆಳೆ ಸಮೀಕ್ಷೆ ಪೂರ್ಣಗೊಳಿಸದಿದ್ದರೆ ರೈತರು ಕಟ್ಟಿರುವ ಬೆಳೆ ವಿಮೆಗೆ ಬೆಳೆ ಪರಿಹಾರ ಸೇರಿದಂತೆ ಹಲವಾರು ಸೌಲಭ್ಯಗಳು ಸಿಗುವುದಿಲ್ಲ, ಆದ್ದರಿಂದ ಬೆಳೆ ಸಮೀಕ್ಷೆಗೆ ಅನುಕೂಲವಾಗುವಂತೆ ಆ್ಯಪ್‌ ಅಪ್‌ಡೆಟ್‌ ಮಾಡಿ ಪೇಸ್‌ ಲಾಗಿನ್ ತೆಗೆದು ರೈತರಿಗೆ ಸೌಲಭ್ಯ ಸಿಗುವಂತೆ ಮಾಡಲು ಸರ್ಕಾರ ಮುಂದಾಗಬೇಕು ಎಂದು ಸಮೀಕ್ಷೆದಾರರು ಮನವಿ ಮಾಡಿದ್ದಾರೆ.

ಜಿಲ್ಲಾ ಬೆಳೆ ಸಮೀಕ್ಷೆದಾರರ ಸಂಘದ ಅಧ್ಯಕ್ಷ ಸೋಮಶೇಖರ ಮೂಡ್ಲೂಪುರ, ಪ್ರದಾನ ಕಾರ್ಯದರ್ಶಿ ಸಿ. ಮನೋಜ್‌ ಕುಮಾರ್‌, ಖಜಾಂಚಿ ಕೆಂಪರಾಜು, ಸಹ ಕಾರ್ಯದರ್ಶಿ ಸುರೇಶ್‌ ಸೇರಿದಂತೆ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.