ಮಾತೃ ಭಾಷೆ ಉಳಿಸಿ, ಬೆಳೆಸುವುದು ನಮ್ಮ ಕರ್ತವ್ಯ: ಮಹೇಶ

| Published : Nov 10 2024, 01:48 AM IST

ಸಾರಾಂಶ

ಅನ್ನದ ಭಾಷೆ ಹಾಗೂ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಅನ್ನದ ಭಾಷೆ ಹಾಗೂ ಮಾತೃಭಾಷೆಯಾದ ಕನ್ನಡವನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಕಾರ್ಯದರ್ಶಿ ಜಿ.ಎಚ್. ಮಹೇಶ ಹೇಳಿದರು.

ಪಟ್ಟಣದ ಮಾತೃಶ್ರೀ ಹೊಳಿಯಮ್ಮ ಮಹಿಳಾ ಪದವಿ ಕಲಾ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ 2000 ವರ್ಷಗಳ ಇತಿಹಾಸ ಹೊಂದಿದ್ದು, ನವ್ಯ, ನವೋದಯ, ದಲಿತ, ಬಂಡಾಯದ ಕವಿಗಳು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಇಂತಹ ಭಾಷೆಗೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ತಂದುಕೊಟ್ಟಂತಹ ಮಹನೀಯರ ಆದರ್ಶಗಳನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕಿದೆ. ನಾವು ಕವಿತೆ, ಕವನಗಳನ್ನು ಬರೆಯುವುದರ ಜೊತೆಗೆ ಅಧ್ಯಯನಶೀಲರಾಗಿ ಮತ್ತು ಗುಣಾತ್ಮಕವಾದ ಸಮಾಜವನ್ನು ತಿದ್ದುವಂತಹ ಕವಿತೆಗಳನ್ನು ಬರೆಯುವುದರ ಮೂಲಕ ಸಾಹಿತ್ಯ ಬೆಳೆಸಬೇಕೆಂದರು.

ಪ್ರಾಂಶುಪಾಲ ತಿಪ್ಪಣ್ಣ ಬಿಜಕಲ್ ಮಾತನಾಡಿ, ಕನ್ನಡ ನಾಡು-ನುಡಿ, ಜಲ ಭಾಷೆಯನ್ನು ರಕ್ಷಿಸುವುದು ಕನ್ನಡಿಗರಾದ ನಮ್ಮ ಕರ್ತವ್ಯವಾಗಿದೆ. ಶ್ರೀಮಂತವಾದ ಭಾಷೆಯ ಕುರಿತು ಅಭಿಮಾನ ಇರಬೇಕು. ಇಂದಿನ ಯುವ ಪೀಳಿಗೆ ಕನ್ನಡ ಕಟ್ಟುವ ಕೆಲಸ ಮಾಡಬೇಕು, ಇತರ ಭಾಷೆಯನ್ನು ಕಲಿಯೋಣ ನಮ್ಮ ಭಾಷೆಯಲ್ಲಿ ಜೀವಿಸೋಣ ಎಂದು ಹೇಳಿದರು.

ಹಲವು ವಿದ್ಯಾರ್ಥಿಗಳು ಕವಿತೆ ವಾಚಿಸಿ, ಕನ್ನಡದ ಹಾಡುಗಳನ್ನು ಹಾಡಿದರು. ಈ ಸಂದರ್ಭ ಉಪನ್ಯಾಸಕರಾದ ಬಸವರಾಜ್ ಪೂಜಾರ, ಶಿವಮಲ್ಲಮ್ಮ, ರಾಮಕೃಷ್ಣ ಬೇವೂರು ಮಾತನಾಡಿದರು.

ಈ ಸಂದರ್ಭದಲ್ಲಿ ಈರಮ್ಮ ಮಡಿವಾಳ, ಶರಣಪ್ಪ ಮಡಿವಾಳರ, ನಾಗರಾಜ್ ಹಳ್ಳಿಗುಡಿ, ಮಂಜುನಾಥ್ ತಾಳದಮರದ, ವಿಜಯಲಕ್ಷ್ಮಿ ಪಾಟೀಲ, ಬಸವರಾಜ ಸುಬೇದಾರ್ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಶರಣಮ್ಮ ಮತ್ತು ಲಲಿತಾ ಕಾರ್ಯಕ್ರಮದ ನಿರ್ವಹಣೆ ಮಾಡಿದರು. ಕಲಾವತಿ ಮತ್ತು ಬಿಂದು ಸ್ವಾಗತಿಸಿದರು.