ಸಾರಾಂಶ
ಕೀಟ ಮತ್ತು ರೋಗಗಳ ಬಾಧೆಯಿಂದ ಭತ್ತದಲ್ಲಿ ಇಳುವರಿ ನಷ್ಟವಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ಜಿಲ್ಲೆಯಲ್ಲಿ ಈಗಾಗಲೇ ಭತ್ತದಲ್ಲಿ ಮೇಲುಗೊಬ್ಬರ ಕಾರ್ಯ ಸಂಪೂರ್ಣವಾಗಿದ್ದು, ಅಕಾಲಿಕ ಮಳೆಯಿಂದ ಭತ್ತದಲ್ಲಿ ಕೆಲವು ಕೀಟ ಹಾಗೂ ರೋಗಗಳ ಬಾಧೆ ಕಂಡು ಬಂದಿರುವುದರಿಂದ ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ಟಿ. ನರಸೀಪುರ ತಾಲೂಕಿನ ಮುಸುವಿನಕೊಪ್ಪಲು ಗ್ರಾಮದಲ್ಲಿ ರೈತರಿಗಾಗಿ ಭತ್ತದಲ್ಲಿ ಕೀಟ ಹಾಗೂ ರೋಗಗಳ ನಿರ್ವಹಣೆ ಕ್ರಮಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮ ಉದ್ಘಾಟಿಸಿದ ಮುಸುವಿನಕೊಪ್ಪಲು ಗ್ರಾಪಂ ಅಧ್ಯಕ್ಷೆ ಪುಷ್ಪಾ ಬಸವರಾಜು ಮಾತನಾಡಿ, ಟಿ. ನರಸೀಪುರ ಭಾಗದಲ್ಲಿ ಜ್ಯೋತಿ ಭತ್ತವನ್ನು ಅತಿ ಹೆಚ್ಚು ಬೆಳೆಯುತ್ತಿದ್ದು, ಕೀಟ ಮತ್ತು ರೋಗಗಳ ಬಾಧೆಯಿಂದ ಭತ್ತದಲ್ಲಿ ಇಳುವರಿ ನಷ್ಟವಾಗುತ್ತಿದೆ. ಆದ್ದರಿಂದ ರೈತರು ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಬೆಳೆ ಸಂರಕ್ಷಣೆಗೆ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ತಿಳಿಸಿದರು.
ವಿಸ್ತರಣಾ ಶಿಕ್ಷಣ ಘಟಕ ಸಸ್ಯ ಸಂರಕ್ಷಣಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಆರ್.ಎನ್. ಪುಷ್ಪಾ ಅವರು, ಭತ್ತದಲ್ಲಿ ಕಂಡು ಬರುವ ಪ್ರಮುಖ ಕೀಟ ಮತ್ತು ರೋಗಗಳು ಅವುಗಳ ಲಕ್ಷಣ ಹಾಗೂ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಿದರು.ಟಿ. ನರಸೀಪುರ ತಾಲೂಕು ಕಸಬಾ ಹೋಬಳಿಯ ಕೃಷಿ ಅಧಿಕಾರಿ ರಾಘವೇಂದ್ರ ಅವರು, ಕೃಷಿ ಇಲಾಖೆಯಲ್ಲಿ ಲಭ್ಯವಿರುವ ಯೋಜನೆಗಳು, ಸಸ್ಯ ಸಂರಕ್ಷಣಾ ಔಷಧಿಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಅನುವುಗಾರ ಮಹೇಶ್, ವಿಸ್ತರಣಾ ಶಿಕ್ಷಣ ಘಟಕದ ಕ್ಷೇತ್ರ ಸಹಾಯಕ ಸಂದೇಶ್ ಇದ್ದರು.