ಕನ್ನಡಪ್ರಭ ವಾರ್ತೆ ವಿಜಯಪುರ
ದೃಶ್ಯಕಲಾ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ವರ್ಣಶಿಲ್ಪಿ ವೆಂಕಟಪ್ಪ ಪುರಸ್ಕೃತ ಕಲಾವಿದರ ಕಲಾಕೃತಿಗಳು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕಲಾವಿದ ವಾಸುದೇವ ಕಾಮತ್ ಅವರ ಕಲಾಕೃತಿ ಜೊತೆಗೆ ನಾಡಿನ ಹಿರಿಯ ಮತ್ತು ಯುವ ಕಲಾವಿದರ ಕಲಾಕೃತಿಗಳು ಒಂದೆಡೆ ನೋಡಲು ಸಿಗುವುದು ಅಪರೂಪದ ಸಂಗತಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಹೇಳಿದರು.ನಗರದ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಕ್ಯಾನವಾಸ್ ಆರ್ಟ್ ಫೌಂಡೇಶನ್ ಸಂಸ್ಥೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದೊಂದಿಗೆ ವಿಶ್ವ ದೃಶ್ಯಕಲಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನವಾಸ್ ಆರ್ಟ್ ಫೌಂಡೇಶನ್ ನಾಡಿನ ಶ್ರೇಷ್ಠ ಕಲಾವಿದರ ಕಲಾಕೃತಿಗಳ ಪ್ರದರ್ಶನದಲ್ಲಿ ಮಾತನಾಡಿದರು. ಇಲಾಖೆಯಿಂದ ನೀಡುವ ಅನುದಾನವನ್ನು ಕಲಾವಿದರು ಸಂಘ ಸಂಸ್ಥೆಗಳು ಸರಿಯಾಗಿ ಉಪಯೋಗ ಮಾಡಿ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಲಿ ಎಂದರು.ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಅರವಿಂದ ಹೂಗಾರ ಮಾತನಾಡಿ, ನಮ್ಮ ಇಲಾಖೆಯಲ್ಲಿಯ ಈ ಗ್ಯಾಲರಿಯು ಕಲಾವಿದರಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ನಿರ್ಮಿಸಿದ್ದು, ಕಲಾವಿದರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ನಿರಂತರವಾಗಿ ಇಲ್ಲಿ ಪ್ರದರ್ಶನಗಳು ಕಲಾವಿದರು ನಡೆಸಬೇಕು, ಅದಕ್ಕೆ ಎಲ್ಲ ರೀತಿಯ ಸಹಕಾರ ಮಾಡಲು ಇಲಾಖೆ ಸಿದ್ದವಿದೆ ಎಂದರು.ಹಿರಿಯ ಕಲಾವಿದ ಪಿ.ಎಸ್.ಕಡೇಮನಿ ಮಾತನಾಡಿ, ಈ ಕಲಾಪ್ರದರ್ಶನದಲ್ಲಿರುವ ಕಲಾಕೃತಿಗಳು ಬೇರೆ ಎಲ್ಲೂ ಪ್ರದರ್ಶನವಾಗಿಲ್ಲ. ಅತ್ಯಂತ ಶ್ರೇಷ್ಠ ಹಿರಿಯ ಕಲಾವಿದರ ಕಲಾಕೃತಿಗಳು ಇಲ್ಲಿ ಪ್ರದರ್ಶನವಾಗುತ್ತಿರುವುದು ಕ್ಯಾನ್ವಾಸ್ ಆರ್ಟ್ ಫೌಂಡೇಶನ್ಗೆ ಅಭಿನಂದನೆಗಳು. ಈ ರೀತಿಯ ಕಲಾಕೃತಿಗಳನ್ನು ಸಂಗ್ರಹಿಸಿಟ್ಟಿರುವುದು ಶ್ರೇಷ್ಠ ಕೆಲಸ. ವಿಜಯಪುರದ ಕಲಾವಿದರು ಕಲಾಸಕ್ತರು ಈ ಪ್ರದರ್ಶನವನ್ನು ಮರೆಯದೆ ವೀಕ್ಷಿಸಿ ಆಸ್ವಾಧಿಸಬೇಕೆಂದು ವಿನಂತಿಸಿಕೊಮಡರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅಶೋಕ ಯಡಳ್ಳಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಎಐ ಜಗತ್ತಿನಲ್ಲಿ ಎಲ್ಲರೂ ಕ್ಷಣಿಕ ಸಂತಸಕ್ಕಾಗಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗುತ್ತಿದ್ದಾರೆ. ಆದರೆ ಕಲಾವಿದರು ಸಮಾಜದ ಅಂಕುಡೊಂಕುಗಳನ್ನು ತಮ್ಮ ಕಲಾಕೃತಿಗಳ ಮೂಲಕ ಚಿತ್ರಿಸಿ ಉತ್ತಮ ಸಂದೇಶ ನಿಡುತ್ತ ಮಾದರಿಯಾಗುತ್ತಿದ್ದಾರೆ. ಕಲಾವಿದರಿಂದ ಸಮಾಜದ ಬೆಳವಣಿಗೆ ಸಾಧ್ಯವಾಗಿದ್ದು, ಒಂದು ಕಲಾಕೃತಿ ಒಂದು ವಿಶೇಷ ಅನುಭವವನ್ನೇ ನೀಡುತ್ತದೆ. ಒಂದು ಕಲಾಕೃತಿ ಒಂದು ಕಾದಂಬರಿಗೆ ಸಮ, ಸಾವಿರ ಪದಗಳಿಗೂ ಮೀರುವ ಶಕ್ತಿ ಒಂದು ಚಿತ್ರಕ್ಕಿದೆ ಎಂದರು.ವಿದ್ಯಾಧರ ಸಾಲಿ ಸ್ವಾಗತಿಸಿದರು. ಕ್ಯಾನ್ವಾಸ್ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವ್ಹಾಣ ಮಾತನಾಡಿದರು. ಪ್ರದರ್ಶನದಲ್ಲಿ ಹಿರಿಯ ಕಲಾವಿದರಾದ ಸೋಮಶೇಖರ ಸಾಲಿ, ಎಸ್.ಎಸ್.ಮುನ್ನೊಳ್ಳಿ, ಎಂ.ಬಿ.ಪಾಟೀಲ, ಆರ್.ಎಂ.ಹಡಪದ, ವಿಜಯ ಸಿಂಧೂರ, ಎಂ.ಜೆ.ಕಮಲಾಕ್ಷಿ, ವಿ.ಬಿ.ಹಿರೇಗೌಡರ, ಎಂ.ಎಸ್.ಚಂದ್ರಶೇಖರ, ವೈ.ಎಚ್.ಸೂಗೂರ, ಪಿ.ಎನ್.ಚೋಯಾಲ, ಕೆ.ಬಾಲ್ಗೋಪಾಲನ್, ವಾಸುದೇವ ಕಾಮತ, ಡಾ.ವಿ.ಜಿ. ಅಂದಾನಿ, ಎಂ.ಆರ್.ಬಾಳಿಕಾಯಿ, ಪಿ.ಎಸ್.ಪುಂಚಿತ್ತಾಯ, ಆರ್.ಎಂ.ಪಳನಿಯಪ್ಪನ್, ಕೆ.ಕೆ.ಮಕಾಳಿ, ಎ.ಎಂ.ಪ್ರಕಾಶ, ಬಿ.ಕೆ.ಬಡಿಗೇರ, ವಿದ್ಯಾಧರ ಸಾಲಿ, ಎಂ.ಮೋಹನ, ದಯಾನಂದ ತಪಶೆಟ್ಟಿ, ಪ್ರಭಾಕರ ಎಲ್, ಬಿ.ಎಸ್.ಪಾಟೀಲ, ವಿಜಯರಾಜ ಬೋಧನಕರ, ಅಂಬಾರಾಯ ಚಿನಮಳ್ಳಿ, ಬಾಬು ಜತ್ತಕರ, ಕಮಲ ಅಹಮ್ಮದ, ಎಂ.ನಂದಬಸಪ್ಪ ವಾಡೆ, ಎಂ.ಜಿ.ಮಕಾನದಾರ, ಕಂದನ.ಜಿ, ಕೂಡಲ ಹಿರೇಮಠ, ರಾಘವೇಂದ್ರ ಪಾಟೀಲ, ಮಂಜುನಾಥ ವಾಲಿ, ಶ್ರೀಕಾಂತ ರಜಪೂತ, ಲಿಂಗರಾಜ ಕಾಚಾಪುರ ಇದ್ದರು.