ಸಾರಾಂಶ
ಉತ್ಸವದಲ್ಲಿ ಮಕ್ಕಳ ಸಮ್ಮೇಳನ, ಮಹಿಳಾ ಸಮ್ಮೇಳನ, ಇಟಗಿ ಜನಪದ ಜಾತ್ರೆ ಜರುಗಲಿದ್ದು, ಸಮ್ಮೇಳನದಲ್ಲಿ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಕೊಪ್ಪಳ ರಾಯಚೂರು ಕಲ್ಬುರ್ಗಿ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು, ಕವಿಗಳು, ಚಿಂತಕರು ಉಪನ್ಯಾಸಕರು ಸಾಹಿತಿಗಳು ಆಗಮಿಸಲಿದ್ದಾರೆ
ಕುಕನೂರು: ತಾಲೂಕಿನ ಇಟಗಿಯ ದೇವಾಲಯ ಚಕ್ರವರ್ತಿ ಮಹಾದೇವ ದೇವಾಲಯದಲ್ಲಿ ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿ ಮತ್ತು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಸಹಯೋಗದಲ್ಲಿ ಜ.೧೨ ರಿಂದ ೧೪ರ ವರೆಗೆ ಇಟಗಿ ಮಹದೇವ ದಂಡನಾಯಕ ವೇದಿಕೆಯಲ್ಲಿ ೨೦ನೇ ಬಾರಿಗೆ ಇಟಗಿ ಉತ್ಸವ ಜರುಗಲಿದೆ ಎಂದು ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಮಹೇಶಬಾಬು ಸುರ್ವೆ ಹೇಳಿದರು.
ತಾಲೂಕಿನ ಇಟಗಿಯಲ್ಲಿ ಜರುಗಿದ ಉತ್ಸವದ ಪೂರ್ವಭಾವಿ ಸಭೆಯನ್ನೂದ್ದೇಶಿಸಿ ಮಾತನಾಡಿದ ಅವರು, ಉತ್ಸವದಲ್ಲಿ ಮಕ್ಕಳ ಸಮ್ಮೇಳನ, ಮಹಿಳಾ ಸಮ್ಮೇಳನ, ಇಟಗಿ ಜನಪದ ಜಾತ್ರೆ ಜರುಗಲಿದ್ದು, ಸಮ್ಮೇಳನದಲ್ಲಿ ಬೆಂಗಳೂರು, ಮೈಸೂರು, ಧಾರವಾಡ, ಹುಬ್ಬಳ್ಳಿ, ವಿಜಯನಗರ, ಬಳ್ಳಾರಿ, ಕೊಪ್ಪಳ ರಾಯಚೂರು ಕಲ್ಬುರ್ಗಿ ವಿಜಯಪುರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕಲಾತಂಡಗಳು, ಕವಿಗಳು, ಚಿಂತಕರು ಉಪನ್ಯಾಸಕರು ಸಾಹಿತಿಗಳು ಆಗಮಿಸಿಲಿದ್ದಾರೆ ಎಂದರು.ಸಾಹಿತಿ ಬಿ.ಎಂ ಹಳ್ಳಿ ಮಾತನಾಡಿ, ಉತ್ಸವಕ್ಕೆ ಬರುವಂತಹ ಕಲಾವಿದರಿಗೆ ಅತಿಥಿಗಳಿಗೆ ಉಪಹಾರದ ವ್ಯವಸ್ಥೆಯನ್ನು ಆಸಕ್ತ ಮನಸ್ಸುಗಳು ಮಾಡುವುದಾಗಿ ತಿಳಿಸಿದರು. ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಜಿ.ಎಸ್.ಗೋನಾಳ ಮಾತನಾಡಿ, ೯೦೦ ವರ್ಷಗಳ ಐತಿಹಾಸಿಕ ದೇವಾಲಯಗಳ ಚಕ್ರವರ್ತಿ ಮಹಾದೇವ ದೇವಾಲಯ ಆಗಿದೆ. ಇಟಗಿ ಉತ್ಸವದ ಜತೆಗೆ ಇಟಗಿಯ ಭಾಗದಲ್ಲಿ ಕುಡಿವ ನೀರು, ರಸ್ತೆ, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಪುಷ್ಕರಿಣಿ ಅಭಿವೃದ್ಧಿ ಕೆಲಸಗಳು ಶೀಘ್ರವಾಗಿ ಆಗಬೇಕಾಗಿದ್ದು, ಜನಪ್ರತಿನಿಧಿಗಳು ಇತ್ತ ಕಡೆ ವಿಶೇಷವಾಗಿ ಗಮನಹರಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ನಾಗರಾಜ ಉಮಚಿಗಿ, ಎನ್.ಸಿ.ಪಣಿ, ಎಂ.ಬಿ. ಅಳವಂಡಿ ಅನೇಕರು ಮಾತನಾಡಿದರು.ಶರಣಪ್ಪ ಹಾದಿ, ರಾಮಣ್ಣ ಬಾರಕೇರ, ಉಪೇಂದ್ರ, ನಿಂಗಾ ಭಟ್ ಪೂಜಾರ, ರುದ್ರಮನಿ ಮಠಪತಿ, ಮಂಜುನಾಥ ಕೋರಿ, ಹಿರೇಲಿಂಗಣ್ಣನವರ್, ಚಿನ್ನಪ್ಪ ಗುಳಗಣ್ಣನವರ, ಉಮೇಶ ಸುರ್ವೆ, ಮಹೇಶ ದೊಡ್ಡಮನಿ ಇತರರಿದ್ದರು.