ಮಂಗಳೂರು: ನಮ್ಮ ದೇಶದಲ್ಲಿ ವೈವಿಧ್ಯಮಯ ಸಸ್ಯಗಳು, ಆಹಾರ ಪದಾರ್ಥಗಳಿವೆ. ಅದನ್ನು ಗುರುತಿಸಿ, ಸಂರಕ್ಷಿಸುವ ಬಗ್ಗೆ ಗಮನ ನೀಡಬೇಕಾಗಿದೆ ಎಂದು ಮಂಗಳೂರು ರಾಮಕೃಷ್ಣ ಮಠದ ಶ್ರೀ ಜಿತಕಾಮಾನಂದ ಸ್ವಾಮೀಜಿ ಹೇಳಿದರು.

ಶನಿವಾರ ಮಂಗಳೂರು ಕಲ್ಕೂರ ಪ್ರತಿಷ್ಠಾನ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗ ಸಹಯೋಗದೊಂದಿಗೆ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆ ಮಂಜುಪ್ರಾಸಾದದಲ್ಲಿ ಎರಡು ದಿನಗಳ ಹಲಸು-ಮಾವು ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಭೂಮಿಯ ಮೇಲಿನ ಎಲ್ಲ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿದೆ. ಸಮೃದ್ಧ ಸಸ್ಯ ಶ್ಯಾಮಲ ಭಾರತದಲ್ಲಿ ವೈವಿಧ್ಯತೆ ಕಾಣಸಿಗುತ್ತಿದೆ. ವೈವಿಧ್ಯಮಯ ಸಸ್ಯಗಳ ಸಂರಕ್ಷಣೆಗೆ ಗಮನ ನೀಡಲಾಗುತ್ತಿಲ್ಲ. ಇದು ಸರಿಯಲ್ಲ. ಅವುಗಳ ಸಂರಕ್ಷಣೆ ಆಗಬೇಕಿದೆ ಎಂದರು.

ಸಾವಯವ ಕೃಷಿಕರೇ ಬೆಳೆಸಿರುವ ಮಾವು, ಹಲಸಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮೇಳ ಆಯೋಜಿಸಿರುವುದು ಶ್ಲಾಘನೀಯ. ಕರಾವಳಿ ಭಾಗ ಮಾವು ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಹೆಸರಾಗಿದೆ. ದೇಶದ ಇತರೆಡೆಯಲ್ಲೂ ಹಲಸು ಬೆಳೆಯಲಾಗುತ್ತಿದ್ದರೂ, ಅವರಿಗೆ ಅದರ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಬಗ್ಗೆ ಅರಿವಿಲ್ಲ. ಮಾವು ಹಾಗೂ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಿಗೆ ಇನ್ನಷ್ಟು ಪ್ರೋತ್ಸಾಹ ದೊರೆಯಬೇಕಿದೆ. ಸಾವಯವ ಕೃಷಿ ಮೂಲಕ ಭೂಮಿಯನ್ನು ಮುಂದಿನ ಪೀಳಿಗೆಗೆ ಸಸ್ಯ ಶ್ಯಾಮಲೆಯಾಗಿ ಉಳಿಸೋಣ ಎಂದರು.

ಶರವು ದೇವಸ್ಥಾನ ಶಿಲೆಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ದೀಪ ಪ್ರಜ್ವಲನೆ ಮಾಡಿದರು. ವೈದ್ಯ ಡಾ.ಜೀವರಾಜ ಸೊರಕೆ ಉದ್ಘಾಟಿಸಿದರು. ವಿದ್ವಾಂಸ ಡಾ.ಪ್ರಭಾಕರ ಅಡಿಗ ಕದ್ರಿ, ಡಾ.ಎಂ.ಪ್ರಭಾಕರ ಜೋಶಿ, ಪ್ರಮುಖರಾದ ಡಾ. ಹರಿಕೃಷ್ಣ ಪುನರೂರು, ದಯಾನಂದ ಕಟೀಲು, ಸುಧಾಕರ ರಾವ್‌ ಪೇಜಾವರ, ಪ್ರಭಾಕರ ರಾವ್‌ ಪೇಜಾವರ, ಪೂರ್ಣಿಮಾ ರಾವ್‌ ಪೇಜಾವರ, ಜನಾರ್ದನ ಹಂದೆ ಮತ್ತಿತರರು ಇದ್ದರು.ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ನವನೀತ ಶೆಟ್ಟಿ ಕದ್ರಿ ನಿರೂಪಿಸಿದರು.


ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಷಷ್ಠ್ಯಬ್ಧ ಸಂಭ್ರಮಾಚರಣೆ - 60 ನಾಡು ನುಡಿ ಜಾಗೃತಿ ಸಮ್ಮೇಳನ ಸರಣಿ ಕಾರ್ಯಕ್ರಮಗಳಡಿ ಕಾರ್ಯಕ್ರಮ ನಡೆಯಿತು.

ವಿವಿಧ ಉತ್ಪನ್ನಗಳ ಮಾರಾಟ-ಪ್ರದರ್ಶನ:

ರಾಮನಗರದ ಚಂದ್ರ ಹಲಸು, ಕುಣಿಗಲ್‌, ಮೈಸೂರು ಹಲಸು, ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳಾದ ಹಪ್ಪಳ, ಚಿಫ್ಸ್‌, ಸ್ಥಳದಲ್ಲೇ ತಯಾರಿಸುವ ಹೋಳಿಗೆ, ಜಿಲೇಬಿ, ಮಾವು ಹಾಗೂ ವಿವಿಧ ಹಣ್ಣುಗಳ ಐಸ್‌ ಕ್ರೀಂ, ಉಪ್ಪಿನಕಾಯಿ, ಸೇರಿದಂತೆ ವಿವಿಧ ಬಗೆ ಬಗೆಯ ವೈವಿಧ್ಯಮಯ ಉತ್ಪನ್ನಗಳು ಹಾಗೂ ಇತರ ವಸ್ತುಗಳ ಪ್ರದರ್ಶನ- ಮಾರಾಟ ಮೇಳದಲ್ಲಿತ್ತು.

ಇಂದು ಯೋಗ-ಸಾವಯವ ಆಹಾರ-ಆರೋಗ್ಯ ಭಾಗ್ಯ: ಮೇಳದಲ್ಲಿ ಜೂ.21ರಂದು ಬೆಳಗ್ಗೆ 10ಕ್ಕೆ ಯೋಗ-ಸಾವಯವ ಆಹಾರ-ಆರೋಗ್ಯ ಭಾಗ್ಯ ಕಾರ್ಯಕ್ರಮ ನಡೆಯಲಿದೆ. ಉಡುಪಿ ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಸಾವಯವ ಜಾಗೃತ ಸಂದೇಶ ನೀಡುವರು. ಆಯುರ್ವೇದ ತಜ್ಞ ಡಾ.ಎನ್.ಟಿ.ಅಂಚನ್‌ ವೈಜ್ಞಾನಿಕ ವಿಶ್ಲೇಷಣೆ ನೀಡುವರು.