ಸಂಸದರ ಹೆಸರು ಕೈಬಿಟ್ಟಿದ್ದಕ್ಕೆ ಜೆಡಿಎಸ್ ಮುಖಂಡರ ಪ್ರತಿಭಟನೆ

| Published : Sep 05 2024, 12:37 AM IST

ಸಾರಾಂಶ

ಸಂಸದರ ಹೆಸರು ಕೈಬಿಟ್ಟಿದ್ದಕ್ಕೆ ಜೆಡಿಎಸ್ ಮುಖಂಡರ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ರಾಮನಗರತಾಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ನಾಮಫಲಕಗಳಲ್ಲಿ ಸಂಸದರ ಹೆಸರನ್ನು ಕೈಬಿಟ್ಟು ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.ಪಂಚಾಯಿತಿ ಕಚೇರಿ ಬಳಿ ಸೇರಿದ ಮುಖಂಡರು ಶಾಸಕ ಇಕ್ಬಾಲ್ ಹುಸೇನ್ ಹಾಗೂ ಪಂಚಾಯಿತಿ ಅಧ್ಯಕ್ಷೆ ಅರ್ಪಿತಾ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಜೆಡಿಎಸ್ ಹಿರಿಯ ಮುಖಂಡ ಎಸ್.ಆರ್.ರಾಮಕೃಷ್ಣಯ್ಯ ಮಾತನಾಡಿ, 2019ರಲ್ಲಿ ಉದ್ಘಾಟನೆ ಆಗಿರುವ ಗ್ರಂಥಾಲಯ ಕಟ್ಟಡಕ್ಕೆ 2024ರ ಆಗಸ್ಟ್ 12 ರಂದು ಅರಿವು ಕೇಂದ್ರ ನಾಮಫಲಕ ಅನಾವರಣ ಮತ್ತು ನವೀಕರಣ ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಉದ್ಘಾಟನೆ ಎಂದು ಅನಧಿಕೃತವಾಗಿ ನಾಮಫಲಕ ಅಳವಡಿಸಿದ್ದಾರೆ. ಅದರಲ್ಲಿ ಶಾಸಕರು ಮತ್ತು ಅಧ್ಯಕ್ಷರ ಹೆಸರನ್ನು ಬಿಂಬಿಸಿಕೊಂಡು ಸಂಸದ ಡಾ.ಸಿ.ಎನ್.ಮಂಜುನಾಥ್ ಹೆಸರನ್ನು ಕೈ ಬಿಟ್ಟು ಅವಮಾನಿಸಲಾಗಿದೆ ಎಂದು ಆರೋಪಿಸಿದರು.ಮಾರ್ಗಸೂಚಿಗಳ ಅನುಸಾರ ಲಾಂಚನ ಸಹಿತ ಅರಿವು ಕೇಂದ್ರ ನಾಮಫಲಕ ಅಳವಡಿಸಿದ್ದರೆ ನಮ್ಮ ಅಭ್ಯಂತರ ಇರಲಿಲ್ಲ. ಆದರೆ, ನಾಮಫಲಕದಲ್ಲಿ ಹಾಲಿ ಸಂಸದ ಡಾ.ಸಿ.ಎನ್.ಮಂಜುನಾಥ್ ಹೆಸರು ಕೈ ಬಿಟ್ಟಿರುವುದರ ಹಿಂದೆ ರಾಜಕೀಯ ಎದ್ದು ಕಾಣುತ್ತಿದೆ. ಅಲ್ಲದೆ 5 ಲಕ್ಷ ರು. ವೆಚ್ಚದಲ್ಲಿ ಗ್ರಂಥಾಲಯ ನವೀಕರಣವೇ ಮಾಡಿಲ್ಲ. ನವೀಕರಣ ಕಟ್ಟಡ ಉದ್ಘಾಟನೆ ಎಂದು ನಮೂದಿಸಿ ರುವುದು ಅಕ್ರಮದ ವಾಸನೆಯನ್ನು ತೋರಿಸುತ್ತದೆ ಎಂದು ಅಧ್ಯಕ್ಷೆಯ ನಡೆಯನ್ನು ಪ್ರಶ್ನಿಸಿದರು.ಗ್ರಾಪಂ ಅಧ್ಯಕ್ಷೆ ಅರ್ಪಿತಾ ಮತ್ತು ಉಪಾಧ್ಯಕ್ಷ ಚಿಕ್ಕಸ್ವಾಮಿ ಪ್ರತಿಭನಟನಾ ಸ್ಥಳಕ್ಕೆ ಆಗಮಿಸಿ ಸಮಾಜಾಯಿಸಿ ನೀಡಲು ಮುಂದಾದರು, ಆದರೆ ಪ್ರತಿಭಟನಾನಿರತರು ಕಾನೂನು ಉಲ್ಲಂಘಿಸಿ ಅಳವಡಿಸಿರುವ ನಾಮಫಲಕ ಗಳ ತೆರವಿಗೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷರಾದ ಬೊಮ್ಮಚ್ಚನಹಳ್ಳಿ ಶಿವರಾಮು, ಲಕ್ಕಸಂದ್ರ ಮಹದೇವಯ್ಯ, ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಗಂಗಾಧರಚಾರ್, ಜೆಡಿಎಸ್ ಮುಖಂಡರಾದ ನರಸಿಂಹಯ್ಯ, ಶಾಂತಣ್ಣ, ಬೋರಪ್ಪ, ಗದಗಯ್ಯನದೊಡ್ಡಿ ಕುಮಾರ್, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.---------------------------