ಮಂಗಳೂರು: ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಪ್ರಮುಖ ಭಾಷೆಯಾಗಿದೆ. ನಾಟಕ, ಸಿನಿಮಾಗಳ ಮೂಲಕ ತುಳು ಭಾಷೆ ಇಂದು ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಎಲ್ಲರೂ ಇಷ್ಟ ಪಡುವ ಭಾಷೆ ತುಳು. ಸುಮುಖ ಪ್ರೊಡಕ್ಷನ್ ಲಾಂಛನದಲ್ಲಿ, ಈ ಹಿಂದೆ ತೆರೆಕಂಡ ‘ತುಡರ್’ ಯಶಸ್ವಿ ಪ್ರದರ್ಶನ ದಾಖಲಿಸಿದೆ. ಅದೇ ತಂಡದಿಂದ ‘ಕಜ್ಜ’ ತುಳು ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿ. ತುಳುವಿನಲ್ಲಿ 150 ಕ್ಕೂ ಮಿಕ್ಕಿದ ಸಿನಿಮಾಗಳು ತೆರೆಗೆ ಬಂದಿದೆ. ಎಲ್ಲವನ್ನು ಮೀರಿ ತುಳು ಚಿತ್ರರಂಗ ಬೆಳೆಯುತ್ತಿದೆ ಎಂದು ಮೂಡುಬಿದಿರೆ ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಮಂಗಳೂರು ಪುರಭವನದಲ್ಲಿ ಶನಿವಾರ ನಡೆದ ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸುವ ‘ಕಜ್ಜ’ ತುಳು ಸಿನಿಮಾದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಲಕ್ಷ್ಮೀನಾರಾಯಣ ಅಸ್ರಣ್ಣ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ತುಳು ಸಿನಿಮಾದ ಮೂಲಕ ಸಂಸ್ಕಾರ, ಸಂಸ್ಕೃತಿ, ಆಚಾರ ವಿಚಾರ ಜಗತ್ತಿಗೆ ಪಸರಿಸಲಿ ಎಂದರು.

ತುಳು ಭಾಷೆ ಎತ್ತರಕ್ಕೆ: ಕರ್ನಾಟಕ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಮಾತನಾಡಿ, ಇಂದು ತುಳು ಸಿನಿಮಾಗಳ ಮೂಲಕ ಭಾಷೆ ಎತ್ತರಕ್ಕೆ ಬೆಳೆದಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಅನೇಕ ತುಳು ಭಾಷೆಯ ಸಿನಿಮಾಗಳು ತೆರೆಗೆ ಬರುತ್ತಿರುವುದನ್ನು ನಾವು ನೋಡುತ್ತೇವೆ. ಎಲ್ಲರೂ ತುಳು ಭಾಷೆಯ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು ಎಂದರು.

ನಾಟಕ, ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲ್ ಬೈಲ್ ಮಾತನಾಡಿ‘ಕಜ್ಜ’ ತುಳು ಸಿನಿಮಾ ತುಳುವಿನಲ್ಲಿ ಮೈಲುಗಲ್ಲಾಗಲಿ ಎಂದರು.ಸರ್ವೋತ್ತಮ ಶೆಟ್ಟಿ ಅಬುದಾಬಿ ಮಾತನಾಡಿ ‘ಕಜ್ಜ’ ಒಳ್ಳೆಯ ಸಿನಿಮಾ ಆಗಿ ಮೂಡಿಬಂದು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯಲಿ ಎಂದರು.ಆಡಿಯೋ, ಟ್ರೇಲರ್ ಬಿಡುಗಡೆಗೊಳಿಸಿದ ನಟ ವಸಿಷ್ಠ ಸಿಂಹ ಮಾತನಾಡಿ, ಇಲ್ಲಿಯ ಭಾಷೆ ಇಲ್ಲಿಯ ಜನರ ಒಡನಾಟದಿಂದ ನಾನು ತುಳು ಭಾಷೆ ಕಲಿಯುವಂತಾಯಿತು.‌‘ಕಜ್ಜ’ ಸಿನಿಮಾದ ಚಿತ್ರೀಕರಣದ ವೇಳೆ ಒಂದು ಕುಟುಂಬದ ಸದಸ್ಯರಂತೆ ನಾವು ಇದ್ದೆವು. ಸಿನಿಮಾ ಯಶಸ್ವಿಯಾಗುತ್ತದೆ ಎಂಬ ವಿಶ್ವಾಸ ತನಗಿದೆ ಎಂದರು.ಪ್ರಮುಖರಾದ ಪ್ರದೀಪ್‌ ಕುಮಾರ್‌ ಕಲ್ಕೂರ, ಹರಿಕೃಷ್ಣ ಪುನರೂರು, ಅರವಿಂದ ಬೋಳಾರ್, ಎಂಪಿ ಶೈಣೈ, ವಿಶ್ವನಾಥ ಶೆಟ್ಟಿ ದುಬೈ, ಸತೀಶ್ ಬಂದಲೆ, ಉದಯ ಪೂಜಾರಿ ಬಲ್ಲಾಲ್ ಭಾಗ್, ರೈ ಮಸಾಲೆಯ ಮಾಲಕಿ ದಿವ್ಯಾ ರೈ, ನಿರ್ಮಾಪಕ ವಿಶಾಂತ್ ಮಿನೇಜಸ್‌, ಸಹ ನಿರ್ಮಾಪಕ ಪ್ರವೀಣ್ ಸುವರ್ಣ, ನಟ ಸಿದ್ದಾರ್ಥ್‌ ಶೆಟ್ಟಿ, ಸಂಗೀತ ನಿರ್ದೇಶಕ ಲಿಖಿತ್ ಪ್ರಸಾದ್ ಶೆಟ್ಟಿ, ಲಂಚುಲಾಲ್, ಹರೀಶ್ ಶೆಟ್ಟಿ, ಆರತಿ ಶೆಟ್ಟಿ ಮತ್ತಿತರರಿದ್ದರು. ಪ್ರಕಾಶ್ ಮಹಾದೇವನ್ ಪ್ರಾರ್ಥಿಸಿದರು. ಚಿತ್ರದ ಕಥೆ ಹಾಗೂ ಸಾಹಿತ್ಯ ಬರೆದ ಮೋಹನ್ ರಾಜ್ ಸ್ವಾಗತಿಸಿದರು. ಅನುರಾಗ್ ನಿರ್ವಹಿಸಿದರು.