ಕನ್ನಡಪ್ರಭ ವಾರ್ತೆ ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಶಸ್ವಿಯಾಗಿ ಸ್ವಚ್ಚತಾ ಶನಿವಾರ ನಡೆಯಿತು. ತಾಲೂಕು, ಗ್ರಾಮ ಪಂಚಾಯಿತಿಗಳಲ್ಲಿ ರಸ್ತೆ ಬದಿಯ ತ್ಯಾಜ್ಯ ತೆರವು ಚುರುಕು ಪಡೆದಿದ್ದು ಖುದ್ದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳೇ ರಸ್ತೆ ಬದಿಯ ತ್ಯಾಜ್ಯ ತೆರವು ಕಾರ್ಯದಲ್ಲಿ ತೊಡಗಿಸಿಕೊಂಡರು.ರಸ್ತೆ ಇಕ್ಕೆಲಗಳ ಕಸ ತೆರವು, ಹುಲ್ಲುಕಟಾವು, ಜಲಮೂಲಗಳಿಂದ ಪ್ಲಾಸ್ಟಿಕ್ ಬಾಟಲ್ಗಳ ತೆರವು, ಸ್ವಚ್ಛತಾ ಪ್ರತಿಜ್ಞೆ, ಸ್ವಚ್ಛತಾ ಶ್ರಮದಾನ ನಡೆಯಿತು. ಕೆಲವು ಪಂಚಾಯಿತಿಗಳಲ್ಲಿ ತ್ಯಾಜ್ಯ ಬಿಸಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡ ವಿಧಿಸಿದ ಪ್ರಕರಣವು ನಡೆಯಿತು. ಈವರೆಗೆ 190 ಅಧಿಕ ಪ್ರಕರಣಗಳು ವರದಿಯಾಗಿದ್ದು, 2.90 ಲಕ್ಷ ರು. ದಂಡ ವಿಧಿಸಲಾಗಿದೆ.
ಪುತ್ತೂರು, ಬಂಟ್ವಾಳ, ಮಂಗಳೂರು, ಮೂಡುಬಿದಿರೆ, ಮುಲ್ಕಿ, ಬೆಳ್ತಂಗಡಿ, ಕಡಬ, ಉಳ್ಳಾಲ ಮತ್ತು ಸುಳ್ಯ ತಾಲೂಕುಗಳಲ್ಲಿ ಯಶಸ್ವಿಯಾಗಿ ಸ್ವಚ್ಛ ಶನಿವಾರ ಕಾರ್ಯಕ್ರಮಗಳು ನಡೆಯಿತು.ಏಕಕಾಲದಲ್ಲಿ 45 ಕಿಮೀ ಸ್ವಚ್ಛತೆ:
ದ.ಕ.ಜಿ.ಪಂ. ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ, ತಾಲೂಕು ಪಂಚಾಯತ್ ಕಡಬ ಹಾಗೂ ವಿವಿಧ ಸಂಘ-ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಕಾರದೊಂದಿಗೆ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಹಾಗೂ ಕಡಬ ಪ.ಪಂ. ತಾ.ಪಂ. ಸಂಯುಕ್ತಾಶ್ರಯದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವನ್ನು ಸಂಪರ್ಕಿಸುವ ಮತ್ತು ಕಡಬ ತಾಲೂಕು ಕೇಂದ್ರದ ಮೂಲಕ ಹಾದು ಹೋಗುವ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿ ಸ್ವಚ್ಛತಾ ಕಾರ್ಯ ಶನಿವಾರ ನಡೆಯಿತು.
ಹೆದ್ದಾರಿ ಬದಿ ಗ್ರಾಮ ಪಂಚಾಯತ್ಗಳಾದ ಕೊಯಿಲ, ರಾಮಕುಂಜ, ಆಲಂಕಾರು, ಪೆರಾಬೆ, ಕುಟ್ರುಪಾಡಿ, ಕಡಬ ಪಟ್ಟಣ ಪಂಚಾಯತ್, ಕಡಬ ತಾಲೂಕು ಪಂಚಾಯತ್, ಮರ್ಧಾಳ, ಐತ್ತೂರು, ಬಿಳಿನೆಲೆ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವಚ್ಛತೆ ನಡೆಸಲಾಯಿತು.
ಕಡಬ ಪ.ಪಂ. ಅಧ್ಯಕ್ಷೆ ತಮನ್ನಾ ಜಬೀನ್, ಉಪಾಧ್ಯಕ್ಷೆ ನೀಲಾವತಿ ಶಿವರಾಮ್, ಸದಸ್ಯರಾದ ಕುಸುಮ, ದಯಾನಂದ, ಶಾಲಿನಿ, ಮೋಹನ್ ದಾಸ್, ಮುಖ್ಯಾಧಿಕಾರಿ ಲೀಲಾವತಿ ಹಾಗೂ ಸಿಬ್ಬಂದಿ, ಟೂರಿಸ್ಟ್ ವಾಹನ ಚಾಲಕ-ಮಾಲಕರ ಸಂಘ- ಆಟೋ ರಿಕ್ಷಾ ಚಾಲಕ-ಮಾಲಕರ ಸಂಘ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ನಾಗರಿಕರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ಕಡಬ ಪೇಟೆಯುದ್ಧಕ್ಕೂ ಕಸ ಹೆಕ್ಕುವ ಮೂಲಕ ಮತ್ತು ಅಂಗಡಿ ಮುಂಭಾಗ ಕಸ ಎಸೆಯದೆ ಕಸದ ಬುಟ್ಟಿಗೆ ಕಸ ಹಾಕುವಂತೆ ನಾಗರಿಗೆ ತಿಳಿಸಲಾಯಿತು.ರಾಜ್ಯ ಹೆದ್ದಾರಿ ಸ್ವಚ್ಛತೆಯಲ್ಲಿ ಗ್ರಾಮವಾರು ಒಡಿಯೂರು ಸಂಘ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಯುವಕ-ಯುವತಿ ಮಂಡಲ, ಶೌರ್ಯ ತಂಡ, ಶಿಕ್ಷಣ ಸಂಸ್ಥೆಗಳು, ಸಹಕಾರಿ ಸಂಘಗಳು, ಸ್ವ-ಸಹಾಯ ಸಂಘಗಳು, ಧಾರ್ಮಿಕ ಸಂಸ್ಥೆಗಳು, ಎಲ್ಲಾ ಸಂಘ-ಸಂಸ್ಥೆಗಳು, ಮೆಸ್ಕಾಂ, ಕಂದಾಯ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ (ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು) ಆಟೋ ಚಾಲಕ-ಮಾಲಕರ ಸಂಘ, ವರ್ತಕರ ಸಂಘ, ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಜನಪ್ರತಿನಿಧಿಗಳು, ಗ್ರಾಮ ಪಂಚಾಯತ್ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ, ಗ್ರಾಮಸ್ಥರ ಸಹಕಾರದೊಂದಿಗೆ ಅಭಿಯಾನ ಸಂಪನ್ನಗೊಂಡಿತು.
ವಿಶೇಷವಾಗಿ ಹೆದ್ದಾರಿಯುದ್ದಕ್ಕೂ ಸುಮಾರು 45 ಕಿ.ಮೀ. ಸ್ವಚ್ಛತೆಯನ್ನು ಏಕಕಾಲದಲ್ಲಿ ನಡೆಸಲಾಯಿತು. ಹೆದ್ದಾರಿ ಹಾದುಹೋಗುವ 9 ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಛತೆಯ ಪ್ರತಿಜ್ಞೆ ಕೈಗೊಂಡು ಶುಚಿತ್ವದ ನಡೆಸಲಾಯಿತು. ಆಯಾಯ ಗ್ರಾಮ ಪಂಚಾಯತ್ಗಳಲ್ಲಿ ಹಲವು ಗುಂಪುಗಳನ್ನಾಗಿ ಮಾಡಿ ಸ್ವಚ್ಛತಾ ಶ್ರಮದಾನ ಕೈಗೊಳ್ಳಲಾಯಿತು.ದ.ಕ.ಜಿ.ಪಂ. ಉಪಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್ ನೋಡಲ್ ಅಧಿಕಾರಿ ಜಯಲಕ್ಷ್ಮೀ ರಾಯಕೋಡ, ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಪಂಚಾಯತ್ ಸ್ವಚ್ಚ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕ ಡೊಂಬಯ್ಯ ಇಡ್ಕಿದು, ನವೀನ್, ಪವನ್ ಮತ್ತಿತರರು
ಇದ್ದರು.