ಕನ್ನಡಪ್ರಭ ವಾರ್ತೆ ಪಾಂಡವಪುರ

ಕಲಾತರಂಗ ಪ್ರತಿಭಾನ್ವೇಷಣಾ ಕಾರ್ಯಕ್ರಮ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಉತ್ತಮ ವೇದಿಕೆಯಾಗಿದೆ ಎಂದು ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು ಹೇಳಿದರು.

ತಾಲೂಕಿನ ಚಿನಕುರಳಿ ಗ್ರಾಮದ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಲಾತರಂಗ ಪ್ರತಿಭಾನ್ವೇಷಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಶ್ವವಿದ್ಯಾಲಯ, ಅಂತರ ಕಾಲೇಜು ಮಟ್ಟದಲ್ಲಿ ನಡೆಯುವ ಕಲಾತರಂಗದಂತಹ ಹೊರಗಿನ ವಿವಿಧ ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶವಾಗಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಪ್ರಶಸ್ತಿ ಪಡೆಯುವುದಕ್ಕಿಂತ ಕಾಲೇಜು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವುದೇ ಗೆದ್ದಂತೆ. ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಎಲ್ಲಾ ಸ್ಪರ್ಧಾರ್ಥಿಗಳಿಗೆ ಶುಭಹಾರೈಸಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಸಿ.ಎಸ್.ಪುಟ್ಟರಾಜು, ಕಾರ್ಯದರ್ಶಿ ಸಿ.ಪಿ.ಶಿವರಾಜು ಅವರಿಗೆ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ, ಸಾಂಸ್ಕೃತಿಕ ಸಮಿತಿ ಸಂಯೋಜಕ ಬಿ.ಎಸ್.ಕುಮಾರ, ಐಕ್ಯೂಎಸಿ ಸಂಯೋಜಕಿ ತನ್ಜಿಯಾಕೌಸರ್, ನ್ಯಾಕ್ ಸಮಿತಿ ಸಂಯೋಜಕ ಚರಣ್ ರಾಜ್, ಸಹಾಯಕ ಪ್ರಾಧ್ಯಾಪಕರಾದ ಪೂಜಾ ಎಸ್ ಉಪಸ್ಥಿತರಿದ್ದರು.


ಕಾಲೇಜಿನಲ್ಲಿ ವಿವಿಧ ಸ್ಪರ್ಧೆಗಳಾದ ರಂಗೋಲಿ, ಪೆನ್ಸಿಲ್ ಸ್ಕೆಚ್, ಪೇಪರ್ ಕೊಲಾಜ್, ಛದ್ಮವೇಷ, ಗೀತಗಾಯನ, ನೃತ್ಯ, ನಾಟಕ, ಆಶುಭಾಷಣ, ಚರ್ಚೆ, ತರಕಾರಿ ಮತ್ತು ಹಣ್ಣು ಕೆತ್ತನೆ, ಕಸದಿಂದ ರಸ, ಕೇಶ ವಿನ್ಯಾಸ, ಮ್ಯಾಡ್ ಆಡ್ಸ್, ಏಕಾಪತ್ರಾಭಿನಯ, ಫೋಟೋ ಕೊಲಾಜ್, ಮೆಹೆಂಧಿ, ಅತ್ಯುತ್ತಮ ದೃಶ್ಯ ಸಂಕಲನ, ರೀಲ್ಸ್, ಅನಿಲ ರಹಿತ ಅಡುಗೆ ತಯಾರಿ ಹಾಗೂ ರಸಪ್ರಶ್ನೆ ಸ್ಪರ್ಧೆಗಳನ್ನು ಸೇರಿದಂತೆ ಮುಂತಾದ ಸ್ಪರ್ಧೆಗಳು ನಡೆದವು.ಅರಣ್ಯ ಕೃಷಿ ಕುರಿತು ರೈತರಿಗೆ ಅರಿವು

ಪಾಂಡವಪುರ:ಕೃಷಿ ವಿಶ್ವವಿದ್ಯಾಲಯ ಮಂಡ್ಯದ ವಿದ್ಯಾರ್ಥಿಗಳ ಕಾರ್ಯಾನುಭವ ಶಿಬಿರದ ಅಂಗವಾಗಿ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ಅರಣ್ಯ ಕೃಷಿ ಕುರಿತು ರೈತರಿಗೆ ಅರಿವು ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಅರಣ್ಯ ಸಸಿಗಳ ಪ್ರಾಮುಖ್ಯತೆ, ಅದರ ಬೆಳವಣಿಗೆ ರೀತಿ ಹಾಗೂ ಬೆಳೆಸಲು ತಗಲುವ ಖರ್ಚು-ವೆಚ್ಚ ಮತ್ತು ಮುಂದೆ ಅದರಿಂದಾಗಿ ಆಗುವ ಲಾಭದ ಕುರಿತು ರೈತಾಪಿ ವರ್ಗದವರಿಗೆ ಮಾಹಿತಿ ಜತೆಗೆ ಅರಣ್ಯ ಸಸಿಗಳನ್ನು ಬೆಳೆಸುವುದರಿಂದ ಮಣ್ಣಿನ ಮತ್ತು ನೀರಿನ ಸಂರಕ್ಷಣೆ ಮಾಡಬಹುದು ಎಂದು ಕೃಷಿ ಕಾಲೇಜಿನ ವಿಜ್ಞಾನಿಗಳಾದ ಡಾ. ರಾಘವೇಂದ್ರ, ಡಾ.ಭರತ್ ಕುಮಾರ್ ಹಾಗೂ ಡಾ.ಕಿಶೋರ್ ತಿಳಿಸಿಕೊಟ್ಟರು. ಅದರೊಂದಿಗೆ ಆಸಕ್ತಿಯುಳ್ಳ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಎಂ.ಎಸ್.ಕುಮಾರ್, ಮುಖಂಡ ಸಿಂಗ್ರಿಗೌಡ ಅವರು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಸುಮಾರು 95ಕ್ಕಿಂತ ಹೆಚ್ಚು ರೈತರು ಪಾಲ್ಗೊಂಡಿದ್ದರು.