ವಿಜಯಪುರ: ಧರ್ಮವನ್ನು ತುಳಿಯಲು ಹೊರಟವರಿಗೆ ಕರ್ಮ ಕಾಡದೆ ಬಿಡದು, ಪಶ್ಚಿಮ ಬಂಗಾಳದಲ್ಲಿ ಹಿಂದೂ ಸಂಸ್ಕೃತಿಯನ್ನು ಹತ್ತಿಕ್ಕಲು ಯತ್ನಿಸಿದ ಮಮತಾ ಬ್ಯಾನರ್ಜಿ ಅವರಿಗೆ ಇಂದು ಕರ್ಮದ ರೂಪದಲ್ಲಿ ಪ್ರತಿಫಲ ಸಿಕ್ಕಿದೆ ಎಂದು ಟೌನ್ ಬಿಜೆಪಿ ಅಧ್ಯಕ್ಷ ವೆಂಕಟೇಶ್ ಪ್ರಭು ತಿಳಿಸಿದರು.

ನಗರದ ಅಂಗತಟ್ಟಿ ನಂಜುಂಡಪ್ಪ ವೃತ್ತದಲ್ಲಿ ಟೌನ್ ಬಿಜೆಪಿಯ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಅಭೂತಪೂರ್ವ ಯಶಸ್ಸು ಹಾಗೂ ಶೃಂಗೇರಿ ಮರುಮತ ಎಣಿಕೆಯಲ್ಲಿ ಜೀವರಾಜ್ ಅವರ ಗೆಲುವನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಬಿಜೆಪಿ ಒಬಿಸಿ ಮಾಜಿ ಜಿಲ್ಲಾಧ್ಯಕ್ಷ ಕನಕರಾಜು ಮಾತನಾಡಿ, ಶೃಂಗೇರಿ ಮರುಮತ ಎಣಿಕೆಯಲ್ಲಿ ಡಿ.ಎನ್. ಜೀವರಾಜ್ ಗೆಲುವು ಪಕ್ಷದ ಕಾರ್ಯಕರ್ತರ ಶ್ರಮಕ್ಕೆ ಸಂದ ಜಯ. ಈ ಯಶಸ್ಸಿನ ಶ್ರೇಯಸ್ಸು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರಿಗೆ ಸಲ್ಲುತ್ತದೆ ಎಂದರು.

ತಾಲೂಕು ಉಪಾಧ್ಯಕ್ಷ ರಾಮಕೃಷ್ಣ ಹೆಗಡೆ ಮಾತನಾಡಿ, ಪಶ್ಚಿಮ ಬಂಗಾಳದ ಈ ಗೆಲುವು ಪಕ್ಷದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ನೀಡಿದೆ. ಇದು ಅವರ ಸಿದ್ಧಾಂತಕ್ಕೆ ಸಂದ ಜಯ ಎಂದು ಬಣ್ಣಿಸಿದರು.

ತಾಲೂಕು ಮಾಜಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ, ಬಂಗಾಳದಲ್ಲಿ ದೌರ್ಜನ್ಯದಿಂದ ನಕಲಿ ಮತದಾರರನ್ನು ಇಟ್ಟುಕೊಂಡು ಚುನಾವಣೆ ಗೆಲ್ಲುತ್ತಿದ್ದ ಕಾಲ ಮುಗಿದಿದೆ. ಈಗ ಪಾರದರ್ಶಕ ರಾಜಕಾರಣ ಆರಂಭವಾಗಿದೆ ಎಂದರು.


ಪುರಸಭೆ ಸದಸ್ಯೆ ಶಿಲ್ಪಾ ಅಜಿತ್ ಮಾತನಾಡಿ, ಶೃಂಗೇರಿ ಚುನಾವಣಾ ಫಲಿತಾಂಶದ ಮೂಲಕ ನೈಜ ವೋಟ್ ಚೋರಿ ಯಾರದ್ದು ಎಂಬುದು ಸಾಬೀತಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಅಲೆ ಮುಂದುವರಿಯಲಿದೆ. ಅಸ್ಸಾಂ, ಪುದುಚೇರಿಗಳಲ್ಲಿ ಅಧಿಕಾರಕ್ಕೇರಿದ್ದಲ್ಲದೆ, ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿಯೂ ಬಿಜೆಪಿ ಖಾತೆ ತೆರೆಯುವ ಮೂಲಕ ತನ್ನ ಪ್ರಭಾವ ವಿಸ್ತರಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಅಜಿತ್ ಕುಮಾರ್, ಯುವ ಮೋರ್ಚಾದ ಸೃಜನ್, ನಟರಾಜ್, ಶ್ರೀಕಾಂತ್, ಮುಖಂಡರಾದ ಮುನೀಂದ್ರ, ಮಂಜ ನಾಥ್, ಕಾಪೆಂಟರ್ ನಾಗರಾಜು, ಮುನಿಕೃಷ್ಣ, ಶಾಮಣ್ಣ, ಯಲಿಯೂರು ತ್ಯಾಗರಾಜ್, ಸಾಗರ್, ಚಂದ್ರರಾಜು, ವರದರಾಜು, ಕಂಬಿ ನರಸಿಂಹಮೂರ್ತಿ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಪರವಾಗಿ ತಾಲೂಕು ಕಾರ್ಯದರ್ಶಿ ಭಾಗ್ಯಮ್ಮ, ಪ್ರೇಮಾ, ವೀಣಾ, ತಾಯಮ್ಮ ಇತರರು ವಿಜಯೋತ್ಸವ ಆಚರಿಸಿದರು.

(ಫೋಟೊ ಕ್ಯಾಪ್ಞನ್‌)

ವಿಜಯಪುರದಲ್ಲಿ ಟೌನ್‌ ಬಿಜೆಪಿ ಪಂಚರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಅಭೂತಪೂರ್ವ ಯಶಸ್ಸು ಹಾಗೂ ಶೃಂಗೇರಿ ಮರುಮತ ಎಣಿಕೆಯಲ್ಲಿ ಜೀವರಾಜ್ರ ಗೆಲುವನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು.