ಮೂಡುಬಿದಿರೆ: ಎಕ್ಸಲೆಂಟ್ ಸಿಬಿಎಸ್‌ಇ ಶಾಲೆಯಲ್ಲಿ 2026–27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ಸಂಸತ್ತಿನ ಉದ್ಘಾಟನಾ ಸಮಾರಂಭ ಶಾಲೆಯ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅತಿಥಿಯಾಗಿದ್ದ ಬಂಟ್ವಾಳದ ವಕೀಲ ಅಶ್ವನಿ ಕುಮಾರ್ ರೈ ಎಂ, ಶಾಲಾ ಸಂಸತ್ತು ನಾಳಿನ ರಾಷ್ಟ್ರ ನಾಯಕರನ್ನು ರೂಪಿಸುವ ನಾಯಕತ್ವದ ವೇದಿಕೆಯಾಗಿದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಮಾತನಾಡಿ, ನಾಯಕತ್ವವು ಅಧಿಕಾರವಲ್ಲ, ಹೊಣೆಗಾರಿಕೆಯಾಗಿದೆ. ಶಾಲಾ ಸಂಸತ್ತಿನ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರ್ಥೈಸಿಕೊಂಡು ಸೇವೆ, ಶಿಸ್ತು ಹಾಗೂ ಸಮರ್ಪಣೆಯ ಮನೋಭಾವದಿಂದ ಮುನ್ನಡೆಯುವಂತೆ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಸಂಪತ್ ಕುಮಾರ್, ವಿದ್ಯಾರ್ಥಿಗಳು ಉತ್ತಮ ನಾಯಕತ್ವ, ಶಿಸ್ತು ಮತ್ತು ಪ್ರಾಮಾಣಿಕತೆಯನ್ನು ಅಳವಡಿಸಿಕೊಂಡು ದೇಶದ ಸಮರ್ಥ ನಾಗರಿಕರಾಗಲಿ ಎಂದು ಆಶಿಸಿದರು.ಅಶ್ವನಿ ಕುಮಾರ್ ರೈ ಎಂ ಹಾಗೂ ರಶ್ಮಿತಾ ಜೈನ್ ನೂತನ ವಿದ್ಯಾರ್ಥಿ ನಾಯಕರಿಗೆ ಬ್ಯಾಡ್ಜ್‌ಗಳನ್ನು ವಿತರಿಸಿದರು. ಹೆರಿಟೇಜ್, ಸಾಂಸ್ಕೃತಿಕ, ಇಕೋ, ಸಾಹಿತ್ಯ, ಕ್ರೀಡಾ, ಗಣಿತ ಹಾಗೂ ವಿಜ್ಞಾನ ಕ್ಲಬ್‌ಗಳಿಗೆ ಚಾಲನೆ ನೀಡಲಾಯಿತು. ವಿವಿಧ ಹೌಸ್‌ಗಳ ಧ್ವಜಗಳನ್ನು ಹಸ್ತಾಂತರಿಸಿ ಕ್ಲಬ್ ಹಾಗೂ ಹೌಸ್ ಚಟುವಟಿಕೆಗಳಿಗೂ ಅಧಿಕೃತ ಚಾಲನೆ ನೀಡಲಾಯಿತು.

ಪ್ರಾಂಶುಪಾಲ ಶ್ರೀಪ್ರಸಾದ್ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಹಾಗೂ ಕಾರ್ಯಯೋಜನೆಗಳನ್ನು ಮಂಡಿಸಿದರು.