ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರ ತಿರಂಗ ಯಾತ್ರೆ ಸಮಿತಿ ವತಿಯಿಂದ ಆ. ೭ರಂದು ಸಂಜೆ ಪುತ್ತೂರಿನಲ್ಲಿ ಬೃಹತ್ ತಿರಂಗ ಯಾತ್ರೆ ರಾಷ್ಟ್ರಪ್ರೇಮ ಮಹೋತ್ಸವ ನಡೆಯಲಿದ್ದು, ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗವಹಿಸಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶದ ಸೈನಿಕರು, ರೈತರ ಗೌರವ, ರಾಷ್ಟ್ರ ಧ್ವಜದ ಗೌರವಾರ್ಥ ಈ ತಿರಂಗಾ ಯಾತ್ರೆಯನ್ನು ಕೈಗೊಂಡಿದ್ದೇವೆ. ಈ ಯಾತ್ರೆ ಮೂಲಕ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಎಲ್ಲರನ್ನು ಒಟ್ಟು ಮಾಡುವ ಕಾರ್ಯ ನಡೆಯಲಿದೆ ಎಂದರು.

ಯಾತ್ರೆಯಲ್ಲಿ ಪುತ್ತೂರಿನ ದೇಶಭಕ್ತರು, ಯುವಕರು, ಮಾಜಿ ಸೈನಿಕರು ಸೇರಿ ಸುಮಾರು ೫ ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಜತೆಗೆ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಜಿಲ್ಲೆಯ ವಿವಿಧ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಂಜೆ ೩ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ಯಾತ್ರೆ ಪ್ರಾರಂಭಗೊಂಡು ಕಿಲ್ಲೆ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಪ್ರತಿಯೊಬ್ಬರೂ ರಾಷ್ಟ್ರಧ್ವಜ ಹಿಡಿದು ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.

ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಯತೀಶ್ ಆಚಾರ್, ಪ್ರಸನ್ನ ಮಾರ್ತ, ಸುನಿಲ್ ಆಳ್ವ, ದಯಾನಂದ ಶೆಟ್ಟಿ ಉಜಿರೆಮಾರ್, ಶಿವಕುಮಾರ್ ಕಲ್ಲಿಮಾರ್, ರಾಜೇಶ್ ಬನ್ನೂರು, ಸತೀಶ್ ನಾಯ್ಕ್, ಮಹೇಶ್ ಕೇರಿ ಉಪಸ್ಥಿತರಿದ್ದರು.