ದ. ಅಮೇರಿಕಾದ ಅರೈಕಾ ವಿವಿ ಜೊತೆಗೆ ಕವಿವಿ ಒಡಂಬಡಿಕೆ

| Published : Mar 13 2025, 12:46 AM IST

ಸಾರಾಂಶ

ಉತ್ತರ ಕರ್ನಾಟಕದಲ್ಲಿಯೇ ಹೆಮ್ಮೆಯ ಶಿಕ್ಷಣ ಸಂಸ್ಥೆ ಕರ್ನಾಟಕ ವಿವಿ. ಇಲ್ಲಿಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರ ಶೈಕ್ಷಣಿಕ ಹಾಗೂ ಸಂಶೋಧನಾ ಅಭಿವೃದ್ಧಿಗೆ ಈ ಒಡಂಬಡಿಕೆ ಬಹುಮುಖ್ಯವಾಗಿದೆ.

ಧಾರವಾಡ: ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಶೈಕ್ಷಣಿಕ ಕಾರ್ಯಚಟುವಟಿಕೆಗಳಿಗೆ ಪೂರಕವಾಗಿ ಅಂತಾರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳುವುದು ಇಂದಿನ ಅಗತ್ಯ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ. ಜಯಶ್ರೀ ಎಸ್. ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯ ಸೆನೆಟ್ ಸಭಾಂಗಣದಲ್ಲಿ ಬುಧವಾರ ದಕ್ಷಿಣ ಅಮೇರಿಕಾದ ಚೀಲಿ ದೇಶದ ಯುನಿವರ್ಸಿಡ್ಯಾಡ್ ದಿ ತೆರಪಿಕಾ ಅರೈಕಾ ವಿಶ್ವವಿದ್ಯಾಲಯ ಮತ್ತು ‌ಕರ್ನಾಟಕ ವಿಶ್ವವಿದ್ಯಾಲಯದ ಜೊತೆಗೆ ಸಂಶೋಧನೆ ಮತ್ತು ಶೈಕ್ಷಣಿಕ ಕಾರ್ಯಚಟುವಟಿಕೆಗೆ ಸಂಬಂಧಿಸಿದ ಒಡಂಬಡಿಕೆಯಲ್ಲಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿಯೇ ಹೆಮ್ಮೆಯ ಶಿಕ್ಷಣ ಸಂಸ್ಥೆ ಕರ್ನಾಟಕ ವಿವಿ. ಇಲ್ಲಿಯ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರ ಶೈಕ್ಷಣಿಕ ಹಾಗೂ ಸಂಶೋಧನಾ ಅಭಿವೃದ್ಧಿಗೆ ಈ ಒಡಂಬಡಿಕೆ ಬಹುಮುಖ್ಯವಾಗಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿ ಪ್ರಮುಖ ವಿಷಯಗಳ ಕುರಿತು ಸಂಶೋಧನಾ ಪ್ರಬಂಧವನ್ನು ರಚಿಸಿ ಆಯಾ ವಿಶ್ವವಿದ್ಯಾಲಯ ಜೊತೆ ಹಂಚಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ಮತ್ತು ವಿಶ್ವವಿದ್ಯಾಲಯದ ಕೀರ್ತಿಯನ್ನು ವಿಶ್ವಮಟ್ಟದಲ್ಲಿ ಹೆಚ್ಚಿಸಬೇಕು ಎಂದು ಹೇಳಿದರು.

ಈ ಒಡಂಬಡಿಕೆಯಲ್ಲಿ ಕವಿವಿಯ ವಿವಿಧ ನಿಖಾಯಗಳಾದ ವಿಜ್ಞಾನ, ಸಮಾಜ ವಿಜ್ಞಾನ, ಕಲಾ, ಕಾನೂನು, ವಾಣಿಜ್ಯ ಹಾಗೂ ನಿರ್ವಹಣೆಯಂತಹ ವಿಷಯಗಳಲ್ಲಿ ಸಂಶೋಧನೆ ಜೊತೆಗೆ ವಿವಿಧ ಯೋಜನೆಗಳ ಕುರಿತಾಗಿ ಎರಡು ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆಯಾ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ, ಕಾರ್ಯಾಗಾರ, ಸಮ್ಮೇಳನ ಮತ್ತು ಪ್ರಮುಖ ಸಂಶೋಧನಾತ್ಮಕ ವಿಷಯಗಳ ಕುರಿತು ಅರೈಕಾ ವಿವಿಗೆ ಹೋಗಬಹುದಲ್ಲದೇ ಅಲ್ಲಿಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕವಿವಿಗೆ ಬಂದು ಅಧ್ಯಯನ ಮಾಡಬಹುದಾಗಿದೆ. ಪ್ರಸ್ತುತ ಒಡಂಬಡಿಕೆ ಎರಡು ವರ್ಷಗಳ ಕಾಲಾವಧಿ ಹೊಂದಿದೆ ಎಂದರು.

ಈ ವೇಳೆಯಲ್ಲಿ ಅರೈಕಾ ವಿವಿ ಪ್ರೊ. ಡೆವಿಡ್ ಲಾರೋಜ್ ಹಾಗೂ ಕವಿವಿ ಕುಲಪತಿ ಪ್ರೊ. ಜಯಶ್ರೀ ಎಸ್. ಎರಡು ವಿವಿಗಳ ವಿವಿಧ ವಿಷಯಗಳ ಸಂಶೋಧನಾ ಚಟುವಟಿಕೆಗಳ ಕುರಿತು ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಕವಿವಿ ಕುಲಸಚಿವ ಡಾ. ಎ. ಚೆನ್ನಪ್ಪ, ದಾವಣಗೇರಿ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ, ಕುಲಸಚಿವ ಪ್ರೊ. ಮಹಾಬಲೇಶ್ವರ, ಹಣಕಾಸು ಅಧಿಕಾರಿ ಪ್ರೊ. ಸಿ. ಕೃಷ್ಣಮೂರ್ತಿ, ಪ್ರೊ. ರಾಜಶೇಖರ ಭಜಂತ್ರಿ, ಹಾವೇರಿ ವಿವಿ ಕುಲಸಚಿವ ಪ್ರೊ. ಎಸ್.ಟಿ. ಬಾಗಲಕೋಟಿ ಇದ್ದರು.